Hyder Ali: ಕಾಂಗ್ರೆಸ್ ಮುಖಂಡ ಹೈದರ್ ಅಲಿ ಮರ್ಡರ್ ಪ್ರಕರಣ: ಕೊಲೆ ರಹಸ್ಯ ಬಯಲು
ಬೆಂಗಳೂರು ಫೆಬ್ರವರಿ 28: ಶನಿವಾರ (22.ಫೆ) ಮಧ್ಯರಾತ್ರಿ ಅಶೋಕನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪುಟ್ಬಾಲ್ ಗ್ರೌಂಡ್ ಬಳಿ ಕಾಂಗ್ರೆಸ್ ಮುಖಂಡ ಹೈದರ್ ಅಲಿ ಕೊಲೆ ಪ್ರಕರಣದ ರಹಸ್ಯವೊಂದು ಬಯಲಾಗಿದೆ. ಹೈದರ್ ಅಲಿಯನ್ನು ಸುಪಾರಿ ಕೊಟ್ಟು ಕೊಲೆ ಮಾಡಿಸಲಾಗಿದೆ ಎನ್ನುವ ವಿಚಾರ ವಿಚಾರಣೆಯಿಂದ ಬೆಳಕಿಗೆ ಬಂದಿದೆ.
ಹೌದು.. ಬಂಧಿತ ಆರೋಪಿಯ ವಿಚಾರಣೆ ವೇಳೆ ಪೊಲೀಸರಿಗೆ ಸ್ಪೋಟಕ ಮಾಹಿತಿಯೊಂದು ಸಿಕ್ಕಿದೆ. ಹೈದರ್ ಅಲಿಯನ್ನು ಕೊಲೆ ಮಾಡಿದವರು ಶಿವಮೊಗ್ಗದಿಂದ ಗಡಿಪಾರು ಮಾಡಿದವರು ಎಂದು ಬಂಧಿತ ಆರೋಪಿಗಳಿಂದ ತಿಳಿದು ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಒಂದಿಷ್ಟು ಪುರಾವೆಗಳು ಕೂಡ ಸಿಕ್ಕಿವೆ.

ಬಂಧಿತ ಏಳು ಮಂದಿ ಆರೋಪಿಗಳಲ್ಲಿ ಮತೀನ್ ಹಾಗೂ ಸದ್ದಾ ಎಂಬುವವರು ಶಿವಮೊಗ್ಗದವರಾಗಿದ್ದಾರೆ. ನಿರಂತರ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದ ಈ ಆರೋಪಿಗಳ ವಿರುದ್ಧ ಶಿವಮೊಗ್ಗದ ಬೇರೆ ಬೇರೆ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಈ ಕಾರಣಕ್ಕೆ ಇವರನ್ನು ಶಿವಮೊಗ್ಗದಿಂದ ಗಡಿಪಾರು ಮಾಡಲಾಗಿತ್ತು.
ಇವರು ಶಿವಮೊಗ್ಗದಿಂದ ಗಡಿಪಾರು ಮಾಡಿದ್ದ ಕಾರಣ ಬೆಂಗಳೂರಿನಲ್ಲಿ ಬಂದು ವಾಸವಿದ್ದರು. ಈ ಆರೋಪಿಗಳು ಬೆಂಗಳೂರಿನಲ್ಲೂ ಇದೇ ಕೃತ್ಯಕ್ಕೆ ಕೈ ಹಾಕಿದ್ದಾರೆ. ಹೈದರ್ ಅಲಿಯ ಆಪ್ತನ ಮೇಲೆ ಕೈ ಮಾಡಿದ್ದ ಶಿವಮೊಗ್ಗ ಆರೋಪಿಗಳಿಗೆ ಹೈದರ್ ಅಲಿ ಬೆದರಿಕೆ ಹಾಕಿದ್ದರು. ಇದರಿಂದ ಆರೋಪಿಗಳಿಗೆ ಹೈದರ್ ಅಲಿ ಮೇಲೆ ವೈಷಮ್ಯ ಇತ್ತು. ಈ ವಿಚಾರ ತಿಳಿದಿದ್ದ ಪ್ರಕರಣದ ಆರೋಪಿ ನಯಾಜ್ ಪಾಷಾ ಶಿವಮೊಗ್ಗ ಆರೋಪಿಗಳನ್ನು ಬಳಸಿಕೊಂಡು ಹೈದರ್ ಅಲಿಯನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ.
ಇನ್ನೂ ಹಳೆಯ ವೈಷಮ್ಯ ಹೊಂದಿದ್ದ ನಾಜ್ ಹಾಗೂ ಹೈದರ್ ಒಬ್ಬರಿಗೊಬ್ಬರು ಕತ್ತಿ ಮಸಿಯುತ್ತಿದ್ದರು. ಹೈದರ್ ಅಲಿ ಕೂಡ ನಾಜ್ ನನ್ನು ಕೊಲೆ ಮಾಡಲು ಪ್ಲ್ಯಾನ್ ರೂಪಿಸಿದ್ದನಂತೆ. ಈ ವಿಚಾರ ತಿಳಿದು ನಾಜ್ ಸುಪಾರಿ ಕೊಟ್ಟು ಕೊಲೆ ಮಾಡಿಸಿದ್ದಾನೆ.
ಕೊನೆ ನಡೆದಿದ್ದು ಹೇಗೆ?
ಬೆಂಗಳೂರಿನ ರೆಸಿಡೆನ್ಸಿ ರಸ್ತೆಯ ಬಾರ್ನಲ್ಲಿ ತಡರಾತ್ರಿವರೆಗೆ ಪಾರ್ಟಿ ಮಾಡಿದ್ದ ಹೈದರ್ ಅಲಿ, ಸ್ನೇಹಿತನ ಜತೆ ಕಾರಿನಲ್ಲಿ ಆನೆಪಾಳ್ಯದ ತನ್ನ ಮನೆಗೆ ಹೋಗುತ್ತಿದ್ದರು. ಆಗ ನಾಲ್ಕೈದು ದುಷ್ಕರ್ಮಿಗಳು ಮತ್ತೊಂದು ಕಾರಿನಲ್ಲಿ ಹಿಂಬಾಲಿಸಿ ಬಂದು ಅಶೋಕನಗರ ಪೊಲೀಸ್ ಠಾಣಾ ವ್ಯಾಪ್ತಿಯ ಫುಟ್ಬಾಲ್ ಸ್ಟೇಡಿಯಂ ಬಳಿ ಶನಿವಾರ (22.ಫೆ) ಮಧ್ಯರಾತ್ರಿ ಅಡ್ಡಗಟ್ಟಿದ್ದಾರೆ.
ಆಗ ಕಾರಿನಿಂದ ಕೆಳಗಿಳಿದು ತಪ್ಪಿಸಿಕೊಳ್ಳಲು ಮುಂದಾದ ಹೈದರ್ ಅಲಿಯನ್ನು ಅಟ್ಟಾಡಿಸಿಕೊಂಡು ಹೋಗಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ್ದಾರೆ. ಈ ವೇಳೆ ಹೈದರ್ ಅಲಿಯನ್ನು ರಕ್ಷಿಸಲು ಮುಂದಾದ ಆತನ ಸ್ನೇಹಿತನ ಮೇಲೂ ದುಷ್ಕರ್ಮಿಗಳು ಹಲ್ಲೆ ನಡೆಸಿ ಬಳಿಕ ಪರಾರಿಯಾಗಿದ್ದಾರೆ.
ಈ ಪ್ರಕರಣ ದಾಖಲಿಸಿಕೊಂಡ ಅಶೋಕನಗರ ಪೊಲೀಸರು ನಲಪಾಡ್ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ನಾಜ್ ಸೇರಿದಂತೆ ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಇನ್ನೂ ಈ ನಾಜ್ ಶಿವಮೊಗ್ಗದಿಂದ ಗಡಿಪಾರು ಮಾಡಲಾಗಿದ್ದ ಆರೋಪಿಗಳನ್ನು ಬಳಿಸಿಕೊಂಡು ಈ ಕೊಲೆ ಮಾಡಿಸಿದ್ದಾನೆ ಎಂದು ತಿಳಿದು ಬಂದಿದೆ.
ಕೊಲೆಗೆ ಬಿಬಿಎಂಪಿ ಚುನಾವಣೆ ಕಾರಣ?
ಈ ಕೊಲೆಗೆ ಬಿಬಿಎಂಪಿ ಚುನಾವಣೆ ಕಾರಣ ಎಂದು ಹೇಳಳಾಗುತ್ತಿದೆ. ಶಾಂತಿನಗರ ಶಾಸಕ ಹ್ಯಾರಿಸ್ ಆಪ್ತನಾಗಿದ್ದ ಹೈದರ್ ಕ್ಷೇತ್ರದ ಪ್ರಭಾವಿ ಕಾಂಗ್ರೆಸ್ ಮುಖಂಡ. ಈ ಬಾರಿ ಬಿಬಿಎಂಪಿ ಚುನಾವಣೆಗೆ ಹೈದರ್ ಸಹೋದರ ಸಲೀಮ್ಗೆ ಟಿಕೆಟ್ ಖಚಿತ ಎಂದು ಏರಿಯಾದಲ್ಲಿ ಚರ್ಚೆ ಮಾಡಿದ್ದರಂತೆ ಹೈದರ್. ಈ ವಿಚಾರ ಕೆಲ ಕಾಂಗ್ರೆಸ್ ಮುಖಂಡರಿಗೆ ಸಹಿಸಲಾಗಿಲ್ಲ. ಇದೇ ಕಾರಣಕ್ಕೆ ಕೊಲೆ ನಡೆದಿದೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಸತ್ಯಾಸತ್ಯತೆಯ ಬಗ್ಗೆ ವಿಚಾರಣೆ ಬಳಿಕವಷ್ಟೇ ನಿಖರ ಮಾಹಿತಿ ತಿಳಿಯಲಿದೆ.












Click it and Unblock the Notifications