ಬಿಬಿಎಂಪಿ ಉಪ ಚುನಾವಣೆ : ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಕಣಕ್ಕೆ
ಬೆಂಗಳೂರು, ಮೇ 07 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಉಪ ಚುನಾವಣೆಯಲ್ಲಿಯೂ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡು ಅಭ್ಯರ್ಥಿ ಕಣಕ್ಕಿಳಿಸಲಿವೆ. ಮೇ 29ರಂದು ಎರಡು ವಾರ್ಡ್ಗಳಿಗೆ ಉಪ ಚುನಾವಣೆ ನಡೆಯಲಿದೆ.
ಕಾವೇರಿಪುರ ಮತ್ತು ಸಗಾಯಪುರ ವಾರ್ಡ್ಗಳ ಸದಸ್ಯರ ನಿಧನದ ಹಿನ್ನಲೆಯಲ್ಲಿ ಉಪ ಚುನಾವಣೆ ಎದುರಾಗಿದೆ. ಮೇ 9ರಂದು ಅಧಿಸೂಚನೆ ಪ್ರಕಟವಾಗಲಿದ್ದು, ಮೇ 29ರಂದು ಮತದಾನ ನಡೆಯಲಿದ್ದು, ಮೇ 31ರಂದು ಫಲಿತಾಂಶ ಪ್ರಕಟವಾಗಲಿದೆ.
ಬಿಬಿಎಂಪಿ ಚುನಾವಣಾ ಫಲಿತಾಂಶ : ಸಮಗ್ರ ಮಾಹಿತಿ
ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡು ಬಿಬಿಎಂಪಿಯಲ್ಲಿ ಅಧಿಕಾರವನ್ನು ಹಂಚಿಕೊಂಡಿವೆ. ಉಪ ಚುನಾವಣೆಯಲ್ಲಿಯೂ ಮೈತ್ರಿ ಮಾಡಿಕೊಂಡು ಅಭ್ಯರ್ಥಿ ಕಣಕ್ಕಿಳಿಸಲು ಎರಡೂ ಪಕ್ಷಗಳು ಒಪ್ಪಿಗೆ ನೀಡಿವೆ. ಆದ್ದರಿಂದ, ಬಿಜೆಪಿ ಮತ್ತು ಮೈತ್ರಿಕೂಟದ ನಡುವೆ ನೇರ ಪೈಪೋಟಿ ನಡೆಯಲಿದೆ.
63 ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ದಿನಾಂಕ ಪ್ರಕಟ
ಕಾವೇರಿಪುರ ವಾರ್ಡ್ನಲ್ಲಿ ಜೆಡಿಎಸ್ನ ರಮೀಳಾ ಅವರು ಸದಸ್ಯರಾಗಿದ್ದರು. ಸಗಾಯಪುರ ವಾರ್ಡ್ನಲ್ಲಿ ಕಾಂಗ್ರೆಸ್ ಬೆಂಬಲಿತ ಪಕ್ಷೇತರ ಸದಸ್ಯ ಏಳುಮಲೈ ಸದಸ್ಯರಾಗಿದ್ದರು. ಕಾವೇರಿಪುರದಲ್ಲಿ ಜೆಡಿಎಸ್, ಸಗಾಯಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕಣಕ್ಕಿಳಿಯಲಿದ್ದಾರೆ.
ಬಿಬಿಎಂಪಿ ಉಪಮೇಯರ್ ರಮೀಳಾ ಉಮಾಶಂಕರ್ ನಿಧನ
ಅಭ್ಯರ್ಥಿ ಆಯ್ಕೆಯ ಹೊಣೆ
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಕಾವೇರಿಪುರ ಮತ್ತು ಸಗಾಯಪುರ ವಾರ್ಡ್ನಲ್ಲಿ ಕಣಕ್ಕಿಳಿಯಲಿದ್ದಾರೆ. ಅಭ್ಯರ್ಥಿ ಆಯ್ಕೆ ಮಾಡುವ ಹೊಣೆಯನ್ನು ವರಿಷ್ಠರು ಜೆಡಿಎಸ್ ಬೆಂಗಳೂರು ನಗರ ಘಟಕದ ಅಧ್ಯಕ್ಷ ಆರ್.ಪ್ರಕಾಶ್ ಅವರಿಗೆ ನೀಡಿದ್ದಾರೆ.
ವಾರ್ಡ್ವಾರು ಮೀಸಲಾತಿ
ಕಾವೇರಿಪುರ ವಾರ್ಡ್ ಒಬಿಸಿ -ಎ(ಮಹಿಳೆ)ಗೆ ಮೀಸಲಾಗಿದೆ. ಸಗಾಯಪುರ ವಾರ್ಡ್ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. ಬುಧವಾರ ಅಥವ ಗುರುವಾರ ಕಾಂಗ್ರೆಸ್ ಮತ್ತು ಜೆಡಿಎಸ್ ಎರಡೂ ವಾರ್ಡ್ಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡುವ ಸಾಧ್ಯತೆ ಇದೆ.
ಉಮೇಶ್ ಶೆಟ್ಟಿ ಅವರಿಂದ ಚರ್ಚೆ
ಕಾವೇರಿಪುರ ವಾರ್ಡ್ ಉಪ ಚುನಾವಣೆ ಬಗ್ಗೆ ಬಿಜೆಪಿಯಲ್ಲಿಯೂ ಚರ್ಚೆ ನಡೆದಿದೆ. ಗೋವಿಂದರಾಜನಗರ ವಾರ್ಡ್ ಬಿಬಿಎಂಪಿ ಸದಸ್ಯ ಕೆ.ಉಮೇಶ್ ಶೆಟ್ಟಿ ಅವರು ಉಪ ಚುನಾವಣೆ ಬಗ್ಗೆ ಪಕ್ಷದ ನಾಯಕರ ಜೊತೆ ಸಭೆ ನಡೆಸಿದರು. ವಾರ್ಡ್ ಮಟ್ಟದ ಪದಾಧಿಕಾರಿಗಳು ಮತ್ತು ಬೂತ್ ಮಟ್ಟದ ಪದಾಧಿಕಾರಿಗಳು, ಕಾರ್ಯಕರ್ತರು ಭಾಗವಹಿಸಿದ್ದರು.
ಉಪ ಚುನಾವಣೆ ದಿನಾಂಕ
ಬಿಬಿಎಂಪಿಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿದೆ. ರಾಜ್ಯದಲ್ಲಿಯೂ ಸಹ ಮೈತ್ರಿ ಸರ್ಕಾರವಿದೆ. ಆದ್ದರಿಂದ, ಮೇ 29ರಂದು ನಡೆಯಲಿರುವ ಉಪ ಚುನಾವಣೆಯಲ್ಲಿಯೂ ಎರಡೂ ಪಕ್ಷಗಳು ಮೈತ್ರಿ ಮಾಡಿಕೊಂಡು ಅಭ್ಯರ್ಥಿಯನ್ನು ಕಣಕ್ಕಿಳಿಸಲಿವೆ.
ಬಿಜೆಪಿಗೆ ಅಧಿಕಾರ ಕೈ ತಪ್ಪಿತ್ತು
2015ರಲ್ಲಿ ನಡೆದ ಬಿಬಿಎಂಪಿ ಚುನಾವಣೆಯಲ್ಲಿ ಬಿಜೆಪಿ 100 ಸ್ಥಾನಗಳಲ್ಲಿ ಜಯಗಳಿಸಿತ್ತು. ಕಾಂಗ್ರೆಸ್ 76 ಮತ್ತು ಜೆಡಿಎಸ್ 14 ಸ್ಥಾನ ಗೆದ್ದಿತ್ತು. 8 ಪಕ್ಷೇತರ ಅಭ್ಯರ್ಥಿಗಳ ಸಹಾಯ ಪಡೆದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡು ಪಾಲಿಕೆಯಲ್ಲಿ ಅಧಿಕಾರ ಹಿಡಿದವು. ಆದ್ದರಿಂದ, ಬಿಜೆಪಿಗೆ ಅಧಿಕಾರ ಕೈ ತಪ್ಪಿದೆ.