ಬೆಂಗಳೂರಿನ ರಸ್ತೆಗೆ ಮಲಾಲಾ ಹೆಸರು, ಬಿಜೆಪಿ ವಿರೋಧ
ಬೆಂಗಳೂರು, ಅ, 29 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ರಸ್ತೆಯೊಂದಕ್ಕೆ ಮಲಾಲಾ ಯೂಸುಫ್ಝಾಯ್ ಹೆಸರಿಡುವ ಪ್ರಸ್ತಾವನೆ ಬಿಬಿಎಂಪಿ ಮುಂದಿದ್ದು ಸದ್ಯ ಇದು ವಿವಾದಕ್ಕೆ ಕಾರಣವಾಗಿದೆ. ಬಿಬಿಎಂಪಿಯ ಬಿಜೆಪಿ ಸದಸ್ಯರು ಮಲಾಲಾ ಹೆಸರಿಡಲು ವಿರೋಧ ವ್ಯಕ್ತಪಡಿಸಿದ್ದು, ಸ್ಥಳೀಯ ಜನರೊಂದಿಗೆ ಚರ್ಚಿಸಿ ಈ ಕುರಿತು ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ಮೇಯರ್ ಕಟ್ಟೆ ಸತ್ಯನಾರಾಯಣ ಹೇಳಿದ್ದಾರೆ.
ಸೋಮವಾರ ಬಿಬಿಎಂಪಿ ವ್ಯಾಪ್ತಿಯ ರಸ್ತೆ, ಉದ್ಯಾನವನಗಳಿಗೆ ನೂತನವಾಗಿ ನಾಮಕಾರಣ ಮಾಡುತ್ತೇವೆ ಎಂದು ಕಾಂಗ್ರೆಸ್ ಮುಖಂಡರಾದ ನೆ.ಲ.ನರೇಂದ್ರ ಬಾಬು, ವಿ.ಮನೋಹರ್ ಮಂತಾದ ನಾಯಕರ ನಿಯೋಗ ಬಿಬಿಎಂಪಿ ಮೇಯರ್ ಕಟ್ಟೆ ಸತ್ಯನಾರಾಯಣ ಅವರಿಗೆ ಪ್ರಸ್ತಾವನೆ ಸಲ್ಲಿಸಿದೆ. ರಸ್ತೆಗಳಿಗೆ ನಾಮಕಾರಣ ಮಾಡುವ ವ್ಯಕ್ತಿಗಳ ಪಟ್ಟಿಯಲ್ಲಿ ಪಾಕಿಸ್ತಾನದಲ್ಲಿ ಮಕ್ಕಳ ಶಿಕ್ಷಣದ ಹಕ್ಕಿಗಾಗಿ ಧ್ವನಿ ಎತ್ತಿದ ಮಲಾಲಾ ಯೂಸುಫ್ಝಾಯ್ ಹೆಸರಿದ್ದು, ವಿವಾದಕ್ಕೆ ಕಾರಣವಾಗಿದೆ.

ಲೋಕಸಭೆ ಚುನಾವಣೆ ಹತ್ತಿರವಾಗುತ್ತಿರುವ ಸಂದರ್ಭದಲ್ಲಿ ಮಲಾಲಾ ಹೆಸರನ್ನು ರಸ್ತೆಗೆ ನಾಮಕರಣ ಮಾಡಿ, ಅಲ್ಪ ಸಂಖ್ಯಾತರನ್ನು ಸೆಳೆಯಲು ಕಾಂಗ್ರೆಸ್ ತಂತ್ರ ರೂಪಿಸಿದೆ ಎಂದು ಬಿಜೆಪಿಯ ಬಿಬಿಎಂಪಿ ಸದಸ್ಯರು ದೂರಿದ್ದಾರೆ. ಕರ್ನಾಟಕದಲ್ಲೇ ಬಹಳಷ್ಟು ಸಾಧಕರಿದ್ದು ಅವರ ಹೆಸರನ್ನು ರಸ್ತೆಗೆ ನಾಮಕರಣ ಮಾಡಬಹುದು. ಮಲಾಲಾ ಹೆಸರು ಅಗತ್ಯವಿಲ್ಲ ಎಂದು ಬಿಜೆಪಿ ಹೇಳಿದೆ.
ಬಿಬಿಎಂಪಿ 2008ರಲ್ಲಿ ರೂಪಿಸಿರುವ ನಿಯಮದಂತೆ ಜೀವಂತವಾಗಿರುವ ವ್ಯಕ್ತಿಗಳ ಹೆಸರನ್ನು ರಸ್ತೆಗಳಿಗೆ ಇಡುವಂತಿಲ್ಲ. ಆದರೆ, ಬಿಬಿಎಂಪಿಯ ಕಾಂಗ್ರೆಸ್ ಸದಸ್ಯರು ರಸ್ತೆಗೆ ಮಲಾಲಾ ಹೆಸರನ್ನು ನಾಮಕಾರಣ ಮಾಡುತ್ತೇವೆ ಎಂದು ಮೇಯರ್ ಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಈ ಕುರಿತು ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಮಾತಿನ ಸಮರ ನಡೆಯುತ್ತಿದೆ.
ಮಲಾಲಾ ವಿವಾದದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮೇಯರ್ ಕಟ್ಟೆ ಸತ್ಯನಾರಾಯಣ ಕಾಂಗ್ರೆಸ್ ಸದಸ್ಯರು ರಸ್ತೆಯೊಂದಕ್ಕೆ ಮಲಾಲಾ ಹೆಸರಿಡುವ ಕುರಿತು ಪ್ರಸ್ತಾವನೆ ಸಲ್ಲಿಸಿದ್ದಾರೆ. ಪ್ರಸ್ತಾವನೆಯನ್ನು ಕಂದಾಯ ವಿಭಾಗಕ್ಕೆ ವರ್ಗಾಯಿಸಲಾಗುವುದು. ರಸ್ತೆಗೆ ನಾಮಕರಣ ಮಾಡುವ ಮುನ್ನ ಸ್ಥಳೀಯ ನಿವಾಸಿಗಳ ಅಭಿಪ್ರಾಯ ಸಂಗ್ರಹಿಸಲಾಗುವುದು. ಅವರು ಒಪ್ಪಿಗೆ ನೀಡಿದರೆ ಮಾತ್ರ ನಾಮಕರಣ ಮಾಡಲಾಗುವುದು ಎಂದು ಹೇಳಿದ್ದಾರೆ.
ಕಾಂಗ್ರೆಸ್ ವಕ್ತಾರ ಬಿ.ಎಲ್.ಶಂಕರ್ ಬಿಬಿಎಂಪಿ ಸದಸ್ಯರ ಪ್ರಸ್ತಾವನೆಯನ್ನು ಸಮರ್ಥಿಸಿಕೊಂಡಿದ್ದು, ಮಲಾಲಾ ಪಾಕಿಸ್ತಾನದ ಪ್ರಜೆಯಾಗಿರಬಹುದು. ಆದರೆ, ಅವರು ಮಕ್ಕಳ ಶಿಕ್ಷಣದ ಹಕ್ಕುಗಳಿಗಾಗಿ ಹೋರಾಟ ನಡೆಸಿದ್ದಾರೆ. ವಿಶ್ವಕ್ಕೆ ಅವರು ಪ್ರೇರಣೆ ನೀಡುವ ಶಕ್ತಿ ಹೊಂದಿದ್ದಾರೆ. ಆದ್ದರಿಂದ ಅವರ ಹೆಸರು ನಾಮಕರಣ ಮಾಡುವುದರಲ್ಲಿ ತಪ್ಪೇನಿಲ್ಲ ಎಂದು ತಿಳಿಸಿದ್ದಾರೆ.












Click it and Unblock the Notifications