ಕಾಂಡೋಮ್ಸ್, ಗರ್ಭಪಾತ ಮಾತ್ರೆ ಪತ್ತೆ ವಿಚಾರ: ಸರ್ಕಾರ ಆತ್ಮಾವಲೋಕನ ಮಾಡಿಕೊಳ್ಳಬೇಕು
ಬೆಂಗಳೂರು, ನ.30: ಮಂಗಳವಾರ ರಾಜ್ಯದಲ್ಲಿ ಭಾರೀ ಚರ್ಚೆಗೆ ಕಾರಣವಾದ ವಿಷಯವೆಂದರೆ ಅದು ಶಾಲಾ ಮಕ್ಕಳ ಬ್ಯಾಗ್ಗಳಲ್ಲಿ ಕಾಂಡೋಮ್ಸ್, ಗರ್ಭಪಾತ ಗುಳಿಗೆ, ನೀರಿನ ಬಾಟಲ್ಗಳಲ್ಲಿ ಮದ್ಯ ಮಿಶ್ರಿತ ನೀರು ಸಿಕ್ಕಿರುವುದು. ಇದರ ಕುರಿತು ಮಕ್ಕಳನ್ನು ದೋಷಿಸುವುದು ಅನ್ಯಾಯ, ಸರ್ಕಾರ ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಶಿಕ್ಷಣ ತಜ್ಞರು, ವೈದ್ಯಕೀಯ ತಜ್ಞರು ಜಂಟಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
"ಇಂದು ಮಾಧ್ಯಮದಲ್ಲಿ ಮಕ್ಕಳ ಶಾಲಾ ಬ್ಯಾಗ್ಗಳನ್ನು ಪರಿಶೀಲಿಸಿದಾಗ ಅವುಗಳಲ್ಲಿ ಕಾಂಡೋಮ್ಸ್, ಗರ್ಭಪಾತ ಗುಳಿಗೆ, ನೀರಿನ ಬಾಟಲ್ಗಳಲ್ಲಿ ಮದ್ಯ ಮಿಶ್ರಿತ ನೀರು ಇತ್ಯಾದಿಗಳು ಸಿಕ್ಕಿರುವ ವಿಷಯವನ್ನು ಮಾಧ್ಯಮಗಳು ಮುಖಪುಟದಲ್ಲಿ ಪ್ರಕಟಿಸಿವೆ. ಮಕ್ಕಳ ಶಿಕ್ಷಣದ ಕ್ರಮ ಹಾಗೂ ವಿಧಾನಗಳ ಬಗ್ಗೆ ಕುಟುಂಬ, ಸಮಾಜ ಹಾಗೂ ಸರಕಾರಗಳು ಗಂಭೀರವಾಗಿ ಯೋಚಿಸುವುದಕ್ಕೆ ಇದು ಪ್ರಚೋದನೆಯಾಗಬೇಕು ಎನ್ನುವುದು ನಿಜವಾದರೂ, ಈ ಬಗ್ಗೆ ಭಾವೋದ್ರೇಕದಿಂದ ವರದಿ ಮಾಡುವುದು ಮತ್ತು ಮಕ್ಕಳನ್ನೇ ದೂಷಿಸುವುದು ಸರಿಯಲ್ಲ. ಇದರಿಂದ ಮಕ್ಕಳಿಗೆ ಇನ್ನಷ್ಟು ಹಾನಿಯೇ ಆಗಬಹುದು" ಎಂದು ತಜ್ಞರು ಅಭಿಪ್ರಾಯ ಹೊರಹಾಕಿದ್ದಾರೆ.
ವಿದ್ಯಾರ್ಥಿಗಳ ಬ್ಯಾಗ್ನಲ್ಲಿ ಕಾಂಡೋಮ್ ಪತ್ತೆ: ಅಧಿಕಾರಿಗಳಿಗೆ ಶಾಕ್
ಇಂತಹ ಘಟನೆಗೆ ಪ್ರತ್ಯಕ್ಷ, ಪರೋಕ್ಷವಾಗಿ ಸರ್ಕಾರವೇ ಕಾರಣ
ಹಲವು ರೀತಿಯಲ್ಲಿ ಇಂಥಹ ಬೆಳವಣಿಗೆಗಳಿಗೆ ಪ್ರತ್ಯಕ್ಷ ಹಾಗು ಪರೋಕ್ಷವಾಗಿ ಕಾರಣವಾಗಿರುವ ಸರ್ಕಾರವೇ ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವುದು ಎಲ್ಲಕ್ಕಿಂತ ತುರ್ತು ಅಗತ್ಯವಾಗಿದೆ ಎಂದು ತಿಳಿಸಿದ್ದಾರೆ.
ಮೊದಲನೆಯದಾಗಿ, ಕೋವಿಡ್ ಕಾಲದಲ್ಲಿ ಒಂದೆರಡು ವರ್ಷ ಶಾಲೆಗಳನ್ನು ಅವೈಜ್ಞಾನಿಕವಾಗಿ ಮುಚ್ಚಿದ್ದರಿಂದ ಮಕ್ಕಳ ಮಾನಸಿಕ, ದೈಹಿಕ, ಬೌದ್ಧಿಕ ಆರೋಗ್ಯ ಹಾಗೂ ಬೆಳವಣಿಗೆಗಳ ಮೇಲೆ ಗಂಭೀರ ಪರಿಣಾಮಗಳಾಗಿವೆ. ಶಾಲೆಗಳಲ್ಲಿ ಮಕ್ಕಳ ಮೇಲೆ ನಿಗಾವಣೆಯಿಲ್ಲದೆ ಸಮಸ್ಯೆಗಳಾಗುತ್ತವೆ ಎಂದು ನಾವು ಕೆಲವರು ಜೂನ್ 2020ರಿಂದಲೇ ಪದೇ ಪದೇ ಎಚ್ಚರಿಕೆ ನೀಡಿದ್ದೆವು ಎಂದಿದ್ದಾರೆ.
ಆನ್ಲೈನ್ ಶಿಕ್ಷಣದಿಂದ ಹಲವು ತೊಂದರೆಗಳು
ಮಕ್ಕಳಿಗೆ ನೇರ ಶಿಕ್ಷಣವಷ್ಟೇ ನೀಡಬೇಕೆಂದೂ, ಮೊಬೈಲ್ ಸಾಧನಗಳ ಮೂಲಕ ಆನ್ ಲೈನ್ ಪಾಠಗಳನ್ನು ಮಾಡುವುದು ಹಲತರದ ತೊಂದರೆಗಳನ್ನುಂಟು ಮಾಡಲಿವೆ ಎಂದೂ ಎಚ್ಚರಿಸಿದ್ದೆವು. ಅವನ್ನೆಲ್ಲ ಕಡೆಗಣಿಸಿ ಮಾಡಬಾರದ್ದನ್ನು ಮಾಡಿದ್ದರ ದುಷ್ಪರಿಣಾಮಗಳನ್ನೇ ಈಗ ಕಾಣುತ್ತಿದ್ದೇವೆ. ಇವುಗಳಿಗೆ ಕಾರಣರಾದ ಆಡಳಿತ, ಶಾಲಾ ವ್ಯವಸ್ಥಾಪಕರು ಮುಂತಾದವರು ಹೊಣೆ ಹೊರಬೇಕಲ್ಲದೆ ಮಕ್ಕಳನ್ನು ದೂಷಿಸಿ ದೊಡ್ಡದಾಗಿ ಚರ್ಚಿಸುವುದು ಅನ್ಯಾಯವಾಗುತ್ತದೆ ಎಂದು ತಜ್ಞರು ಹೇಳಿದ್ದಾರೆ.
ಶಾಲೆಗಳಲ್ಲಿ ಮಕ್ಕಳಿಗೆ ಲೈಂಗಿಕ ಶಿಕ್ಷಣ ನೀಡಬೇಕು
ಎರಡನೆಯದಾಗಿ, ಬಹಳ ವರ್ಷಗಳಿಂದಲೂ ಹಲವು ಪ್ರಗತಿಪರರು, ಶಿಕ್ಷಣ ತಜ್ಞರು ಮತ್ತು ವೈದ್ಯಕೀಯ ಕ್ಷೇತ್ರದ ಗಣ್ಯರು ಶಾಲೆಗಳಲ್ಲಿ ಮಕ್ಕಳಿಗೆ ಲೈಂಗಿಕ ಶಿಕ್ಷಣವನ್ನು ನೀಡಬೇಕೆಂದು ಒತ್ತಾಯಿಸುತ್ತಲೇ ಬಂದಿದ್ದಾರೆ. ಮಕ್ಕಳು ಹದಿಹರಯದಲ್ಲಿ ತಮ್ಮ ಶಾರೀರಿಕ ಹಾಗು ಮಾನಸಿಕ ಬೆಳವಣಿಗೆಗಳನ್ನು ವೈಜ್ಞಾನಿಕವಾಗಿ ಅರ್ಥೈಸಿಕೊಂಡರೆ ಯಾವುದೇ ಗೊಂದಲ ಹಾಗು ಆತಂಕಗಳಿಗೆ ಈಡಾಗದೆ ಅವನ್ನು ನಿಭಾಯಿಸಲು ಶಕ್ತರಾಗುತ್ತಾರೆ ಎಂದಿದ್ದಾರೆ.
ಆದರೆ, ನಮ್ಮ ಸರ್ಕಾರಗಳು ಲೈಂಗಿಕ ಶಿಕ್ಷಣವನ್ನು ಅವೈಜ್ಞಾನಿಕ ಹಾಗು ಮಡಿವಂತಿಕೆಯ ದೃಷ್ಟಿಯಿಂದ ನೋಡುವ ಮೂಲಕ ಶಾಲೆಗಳಲ್ಲಿ ಲೈಂಗಿಕ ಶಿಕ್ಷಣವನ್ನು ವಿರೋಧಿಸಿದ ಕಾರಣ ಇಂದು ಮಕ್ಕಳು ಯಾವುದನ್ನು ಮಾಡಬೇಕು ಯಾವುದನ್ನು ಮಾಡಬಾರದು ಎಂಬ ಗೊಂದಲಕ್ಕೆ ಸಿಲುಕುತ್ತಿರುವುದು ಮತ್ತು ಪ್ರಯೋಗಗಳಿಗೆ ಮುಂದಾಗುವಂತಾಗಿದೆ ಎಂದು ಸರ್ಕಾರದ ಕ್ರಮಕ್ಕೆ ಕಿಡಿಕಾರಿದ್ದಾರೆ.
'ಸರ್ಕಾರವು ಈಗಲಾಗದರೂ ಎಚ್ಚೆತ್ತು ಶಾಲೆಗಳಲ್ಲಿ ಲೈಂಗಿಕ ಶಿಕ್ಷಣವನ್ನು ನೀಡಲು ಮುಂದಾಗುವುದು ಸರಿಯಾದ ಕ್ರಮವೆಂದು ನಾವು ಭಾವಿಸುತ್ತೇವೆ. ಈಗಾಗಲೇ ಹಲವು ದೇಶಗಳಲ್ಲಿ ಇದು ಜಾರಿಯಲ್ಲಿದ್ದು ಅಂತರಾಷ್ಟ್ರೀಯ ಸಂಸ್ಥೆಗಳಾದ ಯುನಿಸೆಫ್ ಮತ್ತು ಯುನೆಸ್ಕೊ ಸಂಸ್ಥೆಗಳು ಇದಕ್ಕೆ ಸೂಕ್ತ ಪಠ್ಯಕ್ರಮ ಹಾಗು ಮಾಡ್ಯೂಲ್ ಗಳನ್ನು ತಯಾರಿಸಿವೆ, ಅವನ್ನೇ ಇಲ್ಲೂ ಬಳಸಲು ಸಾಧ್ಯವಿದೆ' ಎಂದು ಮಾಹಿತಿ ನೀಡಿದ್ದಾರೆ.
ಬಹಿರಂಗವಾಗಿ ಹೇಳಿಕೆ ನೀಡುವ ಬದಲು ಗೌಪ್ಯತೆ ಕಾಪಾಡಬೇಕು
ಮೂರನೆಯದಾಗಿ, ಇಂಥಹ ಸಂದರ್ಭಗಳಲ್ಲಿ ಸೂಕ್ಷ್ಮವಾಗಿ ಮತ್ತು ತಜ್ಞತೆಯನ್ನು ಹೊಂದಿರುವವರ ಮಾರ್ಗದರ್ಶನದಲ್ಲಿ ಪರಿಹಾರೋಪಾಯಗಳನ್ನು ಕಂಡುಕೊಳ್ಳಬೇಕೇ ಹೊರತು ರಜೆ ನೀಡಿ ಕೌನ್ಸಿಲಿಂಗ್ಗೆ ಕಳಿಸುತ್ತೇವೆಂದು ಬಹಿರಂಗವಾಗಿ ಸಾರಿ ಹೇಳುವುದು ಅಥವಾ ಸಲಹೆ ನೀಡುವುದು ಅತ್ಯಂತ ಅವಿವೇಕದ ನಿರ್ಧಾರವಾಗುತ್ತದೆ ಎಂದಿದ್ದಾರೆ.
"ಅಂಥಹ ಮಕ್ಕಳನ್ನು ಗುರುತಿಸಿ, ಅವರ ಗೌಪ್ಯತೆಯನ್ನು ಕಾಪಾಡಿ ತಜ್ಞರ ಸಹಾಯದಿಂದ ಅವರು ಅದನ್ನು ಅರ್ಥೈಸಿಕೊಳ್ಳಲು ಮತ್ತು ಅವುಗಳಿಂದಾಗಬಹುದಾದ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಿಕೊಡಬೇಕು. ಅದು ಬಿಟ್ಟು ಅದನ್ನು ಸಾರ್ವಜನಿಕವಾಗಿ ಚರ್ಚಿಸುವುದಾಗಲಿ ಅಥವಾ ಸುದ್ದಿಯಾಗಿ ವೈಭವೀಕರಿಸುವುದಾಗಲಿ ಮಕ್ಕಳ ಮಾನಸಿಕ ಆರೋಗ್ಯಕ್ಕೂ, ಜೀವಕ್ಕೂ ಅಪಾಯ ತಂದೊಡ್ಡುವ ಸಾಧ್ಯತೆಯಿದೆಯೆಂದು ಸಮಾಜ ಹಾಗು ಸರ್ಕಾರ ಅರಿಯಬೇಕಿದೆ' ಎಂದು ಸಲಹೆ ನೀಡಿದ್ದಾರೆ.
ಜಂಟಿ ಮಾಧ್ಯಮ ಹೇಳಿಕೆಗೆ ಪ್ರೊ. ನಿರಂಜನಾರಾಧ್ಯ.ವಿ.ಪಿ, ಡಾ. ಶ್ರೀನಿವಾಸ ಕಕ್ಕಿಲ್ಲಾಯ, ಡಾ. ಜಿ . ರಾಮಕೃಷ್ಣ, ಡಾ. ಕೆ ಎಂ ಮರಳುಸಿದ್ದಪ್ಪ, ಪ್ರೊ. ಎಸ್ ಜಿ ಸಿದ್ಧರಾಮಯ್ಯ, ಪ್ರೊ.ಕಾಳೇಗೌಡ ನಾಗವಾರ, ಡಾ. ವಸುಂಧರಾ ಭೂಪತಿ, ಡಾ. ವಿಜಯ, ಸುರೇಂದ್ರ ರಾವ್ ಸಹಿ ಮಾಡಿದ್ದಾರೆ.