ವಿಧಾನಸಭಾ ಚುನಾವಣೆ: ಮತದಾನ ಮಾಡಿದರೆ ತಪಾಸಣೆ ವೆಚ್ಚದಲ್ಲಿ ರಿಯಾಯಿತಿ!
ಬೆಂಗಳೂರು, ಮೇ 11: ಮತದಾನ ಪ್ರಮಾಣವನ್ನು ಹೆಚ್ಚಿಸಲು ಚುನಾವಣಾ ಆಯೋಗ ಇನ್ನಿಲ್ಲದ ಪ್ರಯತ್ನ ಮಾಡುತ್ತಿದೆ. ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ಇದಕ್ಕೆ ಪೂರಕವಾಗಿ ಕೆಲವು ಖಾಸಗಿ ಸಂಸ್ಥೆಗಳು ತಾವು ನೀಡುವ ಸೇವೆಗಳಲ್ಲಿ ಹಲವು ವಿನಾಯಿತಿ ಮತ್ತು ರಿಯಾಯಿತಿಗಳನ್ನು ಘೋಷಣೆ ಮಾಡುವ ಮೂಲಕ ಸಾರ್ವಜನಿಕರಲ್ಲಿ ಮತ ಜಾಗೃತಿ ಮೂಡಿಸುತ್ತಿದೆ. ಚಾಮರಾಜಪೇಟೆಯಲ್ಲಿರುವ ಬೃಂದಾವಣ ಆಸ್ಪತ್ರೆಯು ಮತದಾನ ಮಾಡಿದವರಿಗೆ ತಪಾಸಣೆ ಹಾಗೂ ಪ್ರಯೋಗಾಲಯದ ವೆಚ್ಚದಲ್ಲಿ ಶೇ.10ರಷ್ಟು ರಿಯಾಯಿತಿಯನ್ನು ಘೋಷಿಸಿದೆ.
ಮೇ 12 ಶನಿವಾರ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸೆಗಾಗಿ ಆಸ್ಪತ್ರೆಗೆ ಬರುವವರು ಮತದಾನದ ಗುರುತು ತೋರಿಸಿದರೆ ಚಿಕಿತ್ಸಾ ವೆಚ್ಚದಲ್ಲಿ ರಿಯಾಯಿತಿ ನೀಡಲು ಮುಂದಾಗಿದೆ. ಆಲ್ಟ್ರಾಸೌಂಡ್, ರಕ್ತಪರೀಕ್ಷೆ, ಮೂತ್ರ ಪರೀಕ್ಷೆ, ಎಕ್ಸ್-ರೇ ಇತರೆ ಪರೀಕ್ಷೆಗಳ ವೆಚ್ಚದಲ್ಲಿ ಶೇ.10ರಷ್ಟು ರಿಯಾಯಿತಿ ನೀಡಲಾಗುತ್ತದೆ.

20 ರೂ.ಗೆ. ಮಸಾಲೆ ದೋಸೆ: ಮಲ್ಲೇಶ್ವರದ 18ನೇ ಅಡ್ಡರಸ್ತೆಯಲ್ಲಿರುವ ಸರ್ಕಾರಿ ಪದವಿಪೂರ್ವ ಕಾಲೇಜು ಬಳಿಯ ಹೋಟೆಲ್ ಒಂದರಲ್ಲಿ ಮತ ಚಲಾವಣೆ ಮಾಡಿದವರಿಗೆ 20ರೂ.ಗೆ ಮಸಾಲೆ ದೋಸೆ ನೀಡುವುದಾಗಿ ಫಲಕ ಅಳವಡಿಸಿದ್ದಾರೆ.
ಹೋಟೆಲ್ಗಳಲ್ಲಿ ವಿನಾಯಿತಿ: ನಗರದ ಕೆಲವು ಹೋಟೆಲ್ಗಳು ಹಲವು ವಿನಾಯಿತಿಗಳನ್ನು ನೀಡುವ ಮೂಲಕ ಮತದಾನ ಜಾಗೃತಿಯಲ್ಲಿ ತೊಡಗಿವೆ. ಮತದಾನ ಮಾಡಿದವರಿಗೆ ಉಚಿತ ಕಾಫಿ ನೀಡುವುದಾಗಿ ನೃಪತುಂಗ ರಸ್ತೆಯಲ್ಲಿರುವ ನಿಸರ್ಗ ಗ್ರ್ಯಾಂಡ್ ಹೋಟೆಲ್ ಘೋಷಣೆ ಮಾಡಿದೆ.












Click it and Unblock the Notifications