ಸಿಎಂ ರಾಜೀನಾಮೆ ಸುದ್ದಿ ಪ್ರಸಾರ; ಟಿವಿ5 ವಿರುದ್ಧ ದೂರು ದಾಖಲಿಸಿದ ಜೆಡಿಎಸ್
ಬೆಂಗಳೂರು, ನವೆಂಬರ್ 28: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅನಾರೋಗ್ಯಕ್ಕೆ ಒಳಗಾಗಿದ್ದು, ಬೆಳಗಾವಿಯ ಅಧಿವೇಶಾನದ ನಂತರ ರಾಜೀನಾಮೆ ನೀಡಲಿದ್ದಾರೆ. ಚಿಕಿತ್ಸೆಗಾಗಿ ವಿದೇಶಕ್ಕೆ ತೆರಳಲಿದ್ದಾರೆ ಎಂದು ಬುಧಬಾರ ಸಂಜೆಯಿಂದ ಟಿವಿ5 ಕನ್ನಡ ಸುದ್ದಿ ವಾಹಿನಿ ಸುಳ್ಳು ಸುದ್ದಿ ಪ್ರಕಟಿಸಿದೆ ಎಂದು ಆರೋಪಿಸಿ ಜೆಡಿಎಸ್ ಬೆಂಗಳೂರು ನಗರ ಜಿಲ್ಲಾ ಅಧ್ಯಕ್ಷ ಆರ್.ಪ್ರಕಾಶ್ ದೂರು ನೀಡಿದ್ದಾರೆ.
ಹಾಸನ, ಮೈಸೂರು ಜಿಲ್ಲೆಗಳಲ್ಲಿ ಬುಧವಾರ ಮುಖ್ಯಮಂತ್ರಿಗಳು ಹಲವು ಅಧಿಕೃತ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಅವರು ಆರೋಗ್ಯವಾಗಿದ್ದು, ಸರಕಾರ ಎಲ್ಲ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರತಿ ದಿನ ಹದಿನಾಲ್ಕರಿಂದ ಹದಿನಾರು ಗಂಟೆಗಳ ಕಾಲ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಟಿವಿ5 ಸುದ್ದಿ ವಾಹಿನಿ ವರದಿಗಾರ ದಶರಥ್ ಪ್ರಸ್ತುತ ಪಡಿಸಿದ ಸುದ್ದಿಯಲ್ಲಿ ಮುಖ್ಯಮಂತ್ರಿಗಳ ಆರೋಗ್ಯ ಹಾಗೂ ಅಧಿಕಾರಾವಧಿ ಬಗ್ಗೆ ಅನಗತ್ಯ ಗೊಂದಲ ಉಂಟು ಮಾಡುವ ಪ್ರಯತ್ನ ಮಾಡಿದ್ದಾರೆ. ಮುಖ್ಯಮಂತ್ರಿ ಸ್ಥಾನವು ಸಾಂವಿಧಾನಿಕ ಹುದ್ದೆ. ಇಂಥ ಅಪಪ್ರಚಾರದಿಂದ ಸಮಾಜದಲ್ಲಿ ಶಾಂತಿ-ಸುವ್ಯವಸ್ಥೆಗೆ ಧಕ್ಕೆ ತರುವ ಹುನ್ನಾರವಾಗಿದೆ. ಇದರ ಹಿಂದೆ ಪಟ್ಟಭದ್ರ ಹಿತಾಸಕ್ತಿಗಳ ಕೈವಾಡವಿದೆ ಎಂದು ಆರೋಪಿಸಿದ್ದಾರೆ.
ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಿ, ಟಿವಿ5 ವರದಿಗಾರರು ಹಾಗೂ ಸುದ್ದಿ ವಾಹಿನಿ ಮುಖ್ಯಸ್ಥರ ವಿರುದ್ಧ ಕಾನೂನು ಪ್ರಕಾರ ಕೈಗೊಳ್ಳಬೇಕು ಎಂದು ಜನತಾದಳ ಜಾತ್ಯತೀತ ಪಕ್ಷದ ಪರವಾಗಿ ಕೇಳಿಕೊಳ್ಳುತ್ತೇನೆ ಎಂದು ಪಕ್ಷದ ಬೆಂಗಳೂರು ನಗರ ಜಿಲ್ಲೆಯ ಅಧ್ಯಕ್ಷ ಆರ್.ಪ್ರಕಾಶ್ ದೂರು ಸಲ್ಲಿಸಿದ್ದಾರೆ.












Click it and Unblock the Notifications