ಬೆಂಗಳೂರಿನ ಮತ್ತೊಬ್ಬ ಎ.ಸಿ.ಪಿ ವಿರುದ್ಧ ದೂರು ದಾಖಲು
ಬೆಂಗಳೂರು, ನವೆಂಬರ್ 25 : ಬೆಂಗಳೂರಿನಲ್ಲಿ ಎ.ಸಿ.ಪಿಗಳಿಗೆ ಸಮಯ ಸರಿ ಇದ್ದಂತಿಲ್ಲ, ಶೆಟ್ಟಿ ಲಂಚ್ ಹೋಮ್ ಪ್ರಕರಣದಲ್ಲಿ ಎಸಿಪಿ ಮಂಜುನಾಥ್ ಅವರದ್ದೇ ತಪ್ಪು ಎಂದು ಪೊಲೀಸ್ ಇಲಾಖೆಯೇ ಹೇಳಿಕೆ ನೀಡಿ, ಕ್ರಮಕ್ಕೆ ಮುಂದಾದ ಬೆನ್ನಲ್ಲೆ. ನಗರದ ಮತ್ತೊಬ್ಬ ಎ.ಸಿ.ಇ ಮೇಲೆ ಆರೋಪ ಕೇಳಿಬಂದಿದೆ.
ಹಲಸೂರು ಎ.ಸಿ.ಪಿ ಸಜ್ಜದ್ ಖಾನ್ ಅವರು ವ್ಯಕ್ತಿಯೊಬ್ಬನನ್ನು ಅಕ್ರಮವಾಗಿ ಬಂಧನದಲ್ಲಿಟ್ಟ ಬಗ್ಗೆ ಆರೋಪ ಹೊರಿಸಲಾಗಿದೆ. ಸಜ್ಜದ್ ಖಾನ್ ಅವರು ಹಣ ಪಡೆದು ವಿಚಾರಣೆ ನೆಪದಲ್ಲಿ ವ್ಯಕ್ತಿಯೊಬ್ಬನನ್ನು ಅಕ್ರಮವಾಗಿ ಬಂಧನದಲ್ಲಿಟ್ಟಿದ್ದರು ಎಂದು ಪೊಲೀಸ್ ಆಯುಕ್ತರಿಗೆ ದೂರು ನೀಡಲಾಗಿದೆ.
ದೂರಿನ ಕುರಿತು ಪರಿಶೀಲನೆ ನಡೆಸಿ ವರದಿ ನೀಡುವಂತೆ ಪೂರ್ವ ವಿಭಾಗದ ಡಿಸಿಪಿಗೆ ಹೆಚ್ಚುವರಿ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಸೂಚಿಸಿದ್ದಾರೆ.

ಹಿನ್ನೆಲೆ ಇದು
ಕೇರಳದ ನಾಜರ್ ಎಂಬುವಾತ ಮುರುಗೇಶ ಪಾಳ್ಯದಲ್ಲಿ ನಜೀರ್ ಎಂಬುವರ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಆದರೆ ಇದ್ದಕ್ಕಿದ್ದಂತೆ ಕೆಲಸ ಬಿಟ್ಟು ಕೇರಳಕ್ಕೆ ತೆರಳಿದ್ದ. ಇದರಿಂದ ಕೆರಳಿದ ಅಂಗಡಿ ಮಾಲೀಕ ನಜೀರ್, 'ನಾಜೀರ್ ನನಗೆ 15 ಲಕ್ಷ ವಂಚಿಸಿದ್ದಾನೆ' ಎಂದು ಎಸಿಪಿ ಸಜ್ಜದ್ ಖಾನ್ ಬಳಿ ದೂರು ನೀಡಿದ್ದರು.
ದೂರು ಪಡೆದ ಸಜ್ಜದ್ ಖಾನ್ ಕೇರಳಕ್ಕೆ ತೆರಳಿ ವಿಚಾರಣೆ ನೆಪದಲ್ಲಿ ನಾಜರ್ ನನ್ನು ಕರೆತಂದು, ಕಾನೂನು ರೀತಿ ವಿಚಾರಣೆ ಮಾಡದೆ ಬೈಯಪ್ಪಹಳ್ಳಿ ಪೊಲೀಸ್ ಠಾಣೆಯಲ್ಲಿ ಕೂಡಿ ಹಾಕಿ ಹಿಂಸೆ ನೀಡಿದ್ದು, ಹಣ ನೀಡದಿದ್ದರೆ ಯಾವುದಾದರೊಂದು ಕೇಸು ಹಾಕಿ ಜೈಲು ಪಾಲು ಮಾಡುತ್ತೇನೆ ಎಂದು ಹೆದರಿಸಿದ್ದಾರೆ ಎಂದು ಸ್ವತಃ ನಾಜರ್ ಆಯಕ್ತರಿಗೆ ದೂರು ನೀಡಿದ್ದಾರೆ.
ಈ ಆರೋಪವನ್ನು ತಳ್ಳಿ ಹಾಕಿರುವ ಎಸಿಪಿ ಸಜ್ಜದ್ ಖಾನ್ 'ನಾವು ಯಾವ ರೀತಿಯಲ್ಲಿ ಕಾನೂನು ದುರ್ಬಳಕೆ ಮಾಡಿಲ್ಲ, ದೂರಿನನ್ವಯ ವಿಚಾರಣೆ ನಡೆಸಿದ್ದೇವೆ ಅಷ್ಟೇ' ಎಂದಿದ್ದಾರೆ.











Click it and Unblock the Notifications