ಅಂಬರೀಶ್ ವಿರುದ್ಧ ಲೋಕಾಯುಕ್ತಕ್ಕೆ ದೂರು
ಬೆಂಗಳೂರು, ಜೂ. 22 : ವಸತಿ ಸಚಿವ ಅಂಬರೀಶ್ ಅಕ್ರಮವಾಗಿ ನಿವೇಶನ ಪಡೆದುಕೊಂಡಿದ್ದಾರೆ ಎಂಬ ವಿವಾದ ಈಗ ಲೋಕಾಯುಕ್ತ ಅಂಗಳಕ್ಕೆ ತಲುಪಿದೆ. ಅಂಬರೀಶ್ ಬೆಂಗಳೂರು, ಮಂಡ್ಯ ಮತ್ತು ಮೈಸೂರು ಅಭಿವೃದ್ಧಿ ಪ್ರಾಧಿಕಾರಗಳಿಂದ ಅಕ್ರಮವಾಗಿ ಮೂರು ನಿವೇಶನ ಪಡೆದುಕೊಂಡಿದ್ದಾರೆ ಎಂದು ಕೆ.ಆರ್.ರವೀಂದ್ರ ಅವರು ಲೋಕಾಯುಕ್ತರಿಗೆ ದೂರು ನೀಡಿದ್ದಾರೆ.
ಮಂಡ್ಯ ನಗರದ ಕಲ್ಲಹಳ್ಳಿ ನಿವಾಸಿ ಕೆ.ಆರ್. ರವೀಂದ್ರ ಎಂಬುವವರು ಲೋಕಾಯುಕ್ತ ಸಂಸ್ಥೆಗೆ ಶನಿವಾರ ಖಾಸಗಿ ದೂರು ಸಲ್ಲಿಸಿದ್ದು, ಸಚಿವ ಅಂಬರೀಶ್ ಕರ್ನಾಟಕ ರಾಜ್ಯ ನಗರಾಭಿವೃದ್ಧಿ ನಿವೇಶನ ಹಂಚಿಕೆ ನಿಯಮ-1991 ಉಲ್ಲಂಘಿಸಿ ಮತ್ತು ಸುಳ್ಳು ಮಾಹಿತಿ ನೀಡಿ ಮೂರು ನಿವೇಶನಗಳನ್ನು ಅಕ್ರಮವಾಗಿ ಪಡೆದುಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.

ಬೆಂಗಳೂರು, ಮಂಡ್ಯ ಮತ್ತು ಮೈಸೂರು ಅಭಿವೃದ್ಧಿ ಪ್ರಾಧಿಕಾರಗಳಿಂದ ಅಕ್ರಮವಾಗಿ ನಿವೇಶನ ಪಡೆದಿರುವ ಅಂಬರೀಶ್ ವಿರುದ್ಧ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಅಕ್ರಮವಾಗಿ ಪಡೆದುಕೊಂಡ ಮೂರು ನಿವೇಶನಗಳ ಮಂಜೂರಾತಿಯನ್ನು ರದ್ದುಪಡಿಸಬೇಕು ಎಂದು ರವೀಂದ್ರ ಅವರು ದೂರಿನಲ್ಲಿ ಮನವಿ ಮಾಡಿದ್ದಾರೆ. [ಸಚಿವ ಅಂಬರೀಶ್ ಮೂರು ಸೈಟ್ ಪಡೆದಿದ್ದಾರಂತೆ]
ದೂರಿನಲ್ಲಿ ಏನಿದೆ : ರವೀಂದ್ರ ಅವರು ಸಲ್ಲಿಸಿರುವ ದೂರಿನಲ್ಲಿ ಸಚಿವ ಅಂಬರೀಶ್ ಮೈಸೂರು ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಕುವೆಂಪು ನಗರದಲ್ಲಿ 50*80 ಅಡಿ ನಿವೇಶನವನ್ನು ಪಡೆದುಕೊಂಡಿದ್ದಾರೆ. 1986ರಲ್ಲಿ ಹಂಚಿಕೆಯಾದ ನಿವೇಶವನ್ನು 2004ರಲ್ಲಿ ಅಮರನಾಥ್ ಅವರ ಹೆಸರಿನಲ್ಲಿ ಕ್ರಯ ಮಾಡಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಮೈಸೂರು ಅಭಿವೃದ್ಧಿ ಪ್ರಾಧಿಕಾರದಿಂದ ನಿವೇಶನ ಪಡೆದಿದ್ದರೂ, 1987ರಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಜೆ.ಪಿ.ನಗರ 2ನೇ ಹಂತದಲ್ಲಿ 120*80 ಅಡಿ ವಿಸ್ತೀರ್ಣದ ನಿವೇಶನವನ್ನು ಪಡೆದುಕೊಂಡಿದ್ದಾರೆ. ಒಂದು ಪ್ರಾಧಿಕಾರದಲ್ಲಿ ನಿವೇಶನ ಹಂಚಿಕೆಯಾದ ನಂತರ ಮತ್ತೂಂದು ಪ್ರಾಧಿಕಾರದಿಂದ ನಿವೇಶನ ಪಡೆದುಕೊಳ್ಳುವಂತಿಲ್ಲ. ಆದರೆ, ಸಚಿವರು ಈ ನಿಯಮವನ್ನು ಉಲ್ಲಂಘಿಸಿದ್ದಾರೆ.
ಬೆಂಗಳೂರು ಮತ್ತು ಮೈಸೂರು ಪ್ರಾಧಿಕಾರದಿಂದ ಎರಡು ನಿವೇಶನ ಪಡೆದುಕೊಂಡಿರುವ ಅಂಬರೀಶ್, 2002ರಲ್ಲಿ ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದಿಂದ ವಿವೇಕಾನಂದ ನಗರದಲ್ಲಿ 50*80 ವಿಸ್ತೀರ್ಣದ ನಿವೇಶನವನ್ನು ಪಡೆದುಕೊಂಡಿದ್ದಾರೆ. ಈ ನಿವೇಶನ ಪಡೆದುಕೊಳ್ಳುವುವಾಗ ತಾವು ಈವರೆಗೂ ಯಾವುದೇ ಪ್ರಾಧಿಕಾರದಿಂದ ನಿವೇಶನ ಪಡೆದುಕೊಂಡಿಲ್ಲ ಎಂದು ಸುಳ್ಳು ಪ್ರಮಾಣ ಪತ್ರ ಸಲ್ಲಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.












Click it and Unblock the Notifications