ಬಿಡಿಎ ಅಧ್ಯಕ್ಷ ಸ್ಥಾನದ ಪೈಪೋಟಿ ಅಂತ್ಯ: ರಾಕೇಶ್ ಸಿಂಗ್ ನೇಮಿಸಿ ಸರ್ಕಾರ ಆದೇಶ
ಬೆಂಗಳೂರು, ಜೂನ್ 08: ಬೆಂಗಳೂರು, ಜೂನ್ 08: ಕಾಂಗ್ರೆಸ್ ಪಕ್ಷ ಸರ್ಕಾರ ರಚನೆ ಮಾಡಿದಾಗಿನಿಂದಲೂ ಸಿಎಂ ಯಾರು?, ಸಂಪುಟ ವಿಸ್ತರಣೆ, ಬೆಂಗಳೂರು ನಗರಾಭಿವೃದ್ಧಿ ಯಾರಿಗೆ, ಉಸ್ತುವಾರಿ ಯಾರಿಗೆ ಎಂಬೆಲ್ಲ ಸವಾಲುಗಳನ್ನು ಸ್ವೀಕರಿಸುತ್ತಲೇ ಬಂದಿದೆ. ಇದೀಗ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನಕ್ಕೆ ನಡೆದಿದ್ದ ಪೈಪೋಟಿಗೆ ರಾಜ್ಯ ಸರ್ಕಾರದ ಆದೇಶ ಬ್ರೇಕ್ ನೀಡಿದೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್ ಅವರನ್ನು ನೇಮಕ ಮಾಡಿ ಗುರುವಾರ ರಾಜ್ಯ ಕಾಂಗ್ರೆಸ್ ಸರ್ಕಾರ ಆದೇಶ ಹೊರಡಿಸಿದೆ.

ರಾಕೇಶ್ ಸಿಂಗ್ ಅವರು ಈ ಹಿಂದೆ ಬಿಡಿಎ ಆಯುಕ್ತರಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ. ಅವರನ್ನೇ ನೇಮಕ ಮಾಡುವ ಮೂಲಕ ಸ್ಥಳೀಯ ಶಾಸಕರ ಮಧ್ಯೆ ನಡೆದಿದ್ದ ಬಿಡಿಎ ಅಧ್ಯಕ್ಷ ಸ್ಥಾನದ ಸ್ಪರ್ಧೆಗೆ ಸರ್ಕಾರ ಮಂಗಳ ಹಾಡಿದೆ. ಅಲ್ಲದೇ ಪ್ರತಿ ಬಾರಿ ಈ ಬಿಡಿಎ ಅಧ್ಯಕ್ಷ ಸ್ಥಾನ ರಾಜಕಾರಣಿಗಳ ಪಾಲಾಗುತ್ತಿತ್ತು. ಈ ಬಾರಿ ಐಎಎಸ್ ಅಧಿಕಾರಿಯೊಬ್ಬರನ್ನು ಆ ಸ್ಥಾನಕ್ಕೆ ನೇಮಿಸುವ ಮೂಲಕ ಕಾಂಗ್ರೆಸ್ ಹಳೆ ಪದ್ಧತಿಗೂ ಅಂತ್ಯ ಹಾಡಿದೆ.
ಸರ್ಕಾರ ರಚನೆಯಾದ ಬಳಿಕೆ ಕಾಂಗ್ರೆಸ್ನಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ನಡೆಯುತ್ತಿತ್ತು. ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿರುವ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಬಿಡಿಎ ಅಧ್ಯಕ್ಷಗಿರಿ ನೀಡುವಂತೆ ಶಾಸಕರಾದ ಶಾಂತಿನಗರದ ಎನ್.ಎ.ಹ್ಯಾರಿಸ್ ಹಾಗೂ ವಿಜಯನಗರದ ಎಂ.ಕೃಷ್ಣಪ್ಪ ಅವರು ದುಂಬಾಲು ಬಿದ್ದಿದ್ದರು ಎನ್ನಲಾಗಿದೆ.
ವಿಶ್ವಮಟ್ಟದಲ್ಲಿ ಹೆಸರು ಮಾಡಿರುವ ರಾಜಧಾನಿ ಸಿಲಿಕಾನ್ ಸಿಟಿ ಬೆಂಗಳೂರಿನ ನಿರ್ವಹಣೆ ಅಭಿವೃದ್ಧಿ ವಿಚಾರದಲ್ಲಿ ಬಿಬಿಎಂಪಿ ಮತ್ತು ಬಿಡಿಎ ಮಹತ್ವದ ಪಾತ್ರ ನಿರ್ವಹಿಸುತ್ತವೆ. ಅದರಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA)ವು ಮುಖ್ಯವಾಗಿದ್ದು, ಅದರ ಅಧ್ಯಕ್ಷ ಸ್ಥಾನದ ಮೇಲೆ ಲಾಭಿ ನಡೆಸಿದ್ದ ಶಾಸಕರಿಗೆ ಸರ್ಕಾರದ ನೇಮಕ ಆದೇಶದಿಂದ ಹಿನ್ನಡೆಯಾಗಿದೆ.

ನಗರಾಭಿವೃದ್ಧಿ ಸಚಿವ ಡಿಕೆಶಿ ನಿರಂತರ ಸಭೆ
ಬೆಂಗಳೂರು ನಗರಾಭಿವೃದ್ಧಿ ಸಚಿವ ಸ್ಥಾನ ಪಡೆಯುತ್ತಿದ್ದಂತೆ ಡಿಸಿಎಂ ಡಿಕೆ ಶಿವಕುಮಾರ್ ಸಖತ್ ಆಕ್ಟಿವ್ ಆಗಿದ್ದಾರೆ. ಬೆಂಗಳೂರು ಮೆಟ್ರೋ ರೈಲು ನಿಗಮ (BMRCL), ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB), ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA), ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಅಧಿಕಾರಿಗಳ ಜೊತೆ ನಿರಂತರ ಸಭೆ ನಡೆಸುತ್ತಿದ್ದಾರೆ.
ಸಚಿವರು ಈಗಾಗಲೇ ಪ್ರಗತಿಯಲ್ಲಿರುವ ಅಭಿವೃದ್ಧಿ ಕಾಮಗಾರಿ, ವಿಳಂಬ ಆಗುತ್ತಿರುವ ಕಾಮಗಾರಿಗಳ ಮಾಹಿತಿ ಪಡೆಯುತ್ತಿದ್ದಾರೆ. ಹಿಂದಿನಿಂದಲೂ ವಿವಿಧ ಪಕ್ಷಗಳ ನಾಯಕರು ಬೆಂಗಳೂರನ್ನು ಸಿಂಗಾಪುರ ಮಾಡುವುದಾಗಿ, ಸಮಗ್ರ, ಮಾದರಿ ನಗರವಾಗಿ, ಸಮಸ್ಯೆಗಳ ನಿವಾರಿಸುವ ಬಗ್ಗೆ ಮಾತನಾಡಿದ್ದರು. ಇದೀಗ ಡಿಕೆಶಿ ಅವರು ಬೆಂಗಳೂರಿಗೆ ಆಧುನಿಕ ಟಚ್ ಕೊಡುವುದಾಗಿ ಹೇಳಿದ್ದಾರೆ. ಈ ಸಂಬಂಧ ಸಮಸ್ಯೆಗಳ ನಿವಾರಣೆಗ ಅಧಿಕಾರಿಗಳಿಗೆ ಅಗತ್ಯ ಸೂಚನೆ ಸಹ ನೀಡಿದ್ದಾರೆ.
ಬೆಂಗಳೂರು ಸಂಚಾರ ದಟ್ಟಣೆ ಕಡಿಮೆ ಮಾಡಲು ರಿಂಗ್ ರಸ್ತೆ ವಿಸ್ತರಣೆ, ಮೇಲ್ಸೇತುವೆ, ಅಂಡರ್ ನಿರ್ಮಾಣಕ್ಕೆ ಆದ್ಯತೆ ಕೊಡುವ ಬಗ್ಗೆ ಡಿಕೆ ಶಿವಕುಮಾರ್ ಮಾತನಾಡಿದ್ದಾರೆ. ಇನ್ನು ಬಿಡಿಎ ವ್ಯಾಪ್ತಿಯ ಶಿವರಾಮ್ ಕಾರಂತ ಬಡಾವಣೆ ಮತ್ತು ಕೆಂಪೇಗೌಡ ಬಡಾವಣೆಯಲ್ಲಿ ಸೂಕ್ತ ರೀತಿಯಲ್ಲಿ ನಿವೇಶನ ಹಂಚಿಕೆ ಮಾಡಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ.












Click it and Unblock the Notifications