ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಬಗ್ಗೆ ಸಾಮಾನ್ಯ ಜನ ಏನಂತಾರೆ?
Recommended Video

ಬೆಂಗಳೂರು, ಸೆಪ್ಟೆಂಬರ್ 07 : ಪೆಟ್ರೋಲ್ ಬೆಲೆ ನಿಲ್ಲದೆ ಓಡುತ್ತಿದೆ. ಈಗಾಗಲೇ ಅದು ಬೆಂಗಳೂರಿನಲ್ಲಿ 83.09 ರೂಪಾಯಿ ದಾಟಿ ಇನ್ನೂ ಮುನ್ನುಗ್ಗುತ್ತಿದೆ. ಎಲ್ಲಿ ಬಂದು ನಿಲ್ಲುತ್ತದೆಯೋ? ಬಲ್ಲವರಾರು?
ಪೆಟ್ರೋಲ್ ಬೆಲೆ ಏರಿಕೆಯಿಂದ ನೇರವಾಗಿ ಸಂಕಷ್ಟಕ್ಕೆ ಸಿಲುಕಿರುವ ಸಾಮಾನ್ಯ ಪ್ರಜೆ ಈ ಬಗ್ಗೆ ಯಾವ ಅಭಿಪ್ರಾಯ ಹೊಂದಿದ್ದಾನೆ ಎಂಬುದನ್ನು ಅರಿಯಲೆಂದು 'ಒನ್ಇಂಡಿಯಾ ಕನ್ನಡ' ಸಾಮಾನ್ಯರನ್ನು ಮಾತನಾಡಿಸಿದೆ.
ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಬಗ್ಗೆ ಒನ್ಇಂಡಿಯಾ ಕನ್ನಡದೊಂದಿಗೆ ಮಾತನಾಡಿದ ಬಹುತೇಕ ಸಾಮಾನ್ಯ ಜನ ಇಂಧನ ಬೆಲೆ ಏರಿಕೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೂಡಲೇ ಸರ್ಕಾರ ಇಂಧನ ಬೆಲೆಯನ್ನು ಇಳಿಸಿ ಸಾಮಾನ್ಯ ಜನರಿಗೆ ನೆಮ್ಮದಿಯಾಗಿ ಬದುಕಲು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದ್ದಾರೆ. ಯಾರು ಏನು ಹೇಳಿದ್ದಾರೆಂದು ಮುಂದೆ ಓದಿರಿ....
ಈ ನಡುವೆ, ಸೆಪ್ಟೆಂಬರ್ 10ರಂದು ಸೋಮವಾರ ವಿರೋಧ ಪಕ್ಷಗಳು ರುಪಾಯಿ ಮೌಲ್ಯ ಕುಸಿತ ಮತ್ತು ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯನ್ನು ಖಂಡಿಸಿ ಭಾರತ ಬಂದ್ ಗೆ ಕರೆ ನೀಡಿವೆ. ಈ ಬಂದ್ ಗೆ ಹಲವಾರು ಪಕ್ಷಗಳು ಬೆಂಬಲ ಸೂಚಿಸಿದ್ದು, ಪೆಟ್ರೋಲ್ ದರ ಇಳಿಸದಿದ್ದರೆ ಬಂದ್ ಆಗುವುದು ಖಚಿತವಾಗಿದೆ.

ಗಾಡಿ ಹೊರಗೆ ತೆಗೆಯಲು ಭಯವಾಗುತ್ತದೆ
ಪೆಟ್ರೋಲ್ ಬೆಲೆ ಕಡಿಮೆ ಮಾಡುತ್ತೇವೆ ಎಂದು ಹೇಳಿಯೇ ಬಿಜೆಪಿ ಅಧಿಕಾರಕ್ಕೆ ಬಂತು ಆದರೆ ಈಗ ಅವರು ಕೊಟ್ಟ ಮಾತನ್ನೇ ಮರೆತಿದ್ದಾರೆ ಎಂದು ನೋವಿನ ಧನಿಯಲ್ಲಿ ಹೇಳಿದವರು ಧನರಾಜ್. ಅವರಿಗೆ ಬರುವ ಕಡಿಮೆ ಸಂಬಳದಲ್ಲಿ ಅರ್ಧ ಪೆಟ್ರೋಲ್ಗೆ ಖರ್ಚಾಗುತ್ತಿದೆ ಎನ್ನುತ್ತಿದ್ದಾರೆ ಅವರು.

ಕೂಲಿ ಮಾಡುವವರು ನಾವು ಬದುಕೋದು ಹೇಗೆ?
ಕೂಲಿ ಮಾಡಿ ಬದುಕುವವರು ನಾವು, ಹೆಚ್ಚು ಗಳಿಸಲು ಅವಕಾಶ ಸಿಗುತ್ತದೆ ಎಂಬ ಕಾರಣಕ್ಕೆ ಯಾವುದೋ ಸಣ್ಣ ವಾಹನವನ್ನು ಕೊಂಡುಕೊಂಡಿರುತ್ತೇವೆ. ಆದರೆ ನಮ್ಮ ಸಂಪಾದನೆಯಲ್ಲಿ ಹೆಚ್ಚಿನ ಅಂಶ ಪೆಟ್ರೋಲ್ಗೆ ಖರ್ಚಾದರೆ ಹೇಗೆ ಎಂದು ನೊಂದು ನುಡಿದರು ಒಬ್ಬ ಮಹಿಳೆ.

ಇಂಧನದ ಮೇಲಿನ ತೆರಿಗೆ ಇಳಿಸಲಿ ಸರ್ಕಾರ
ಅಂತರರಾಷ್ಟ್ರೀಯ ಮಾರುಕಟ್ಟೆಯನ್ನು ಕಚ್ಚಾ ತೈಲ ಬೆಲೆಯನ್ನು ನಿಯಂತ್ರಿಸುವುದು ನಮ್ಮ ಸರ್ಕಾರಗಳ ಪರಿಧಿಯಲ್ಲಿಲ್ಲ ಹಾಗಾಗಿ ನಮ್ಮ ಸರ್ಕಾರಗಳು ಇಂಧನದ ಮೇಲೆ ಹೇರುತ್ತಿರುವ ತೆರಿಗೆ ಕಡಿಮೆ ಮಾಡಿಯಾದರೂ ಜನಗಳಿಗೆ ಬೀಳುತ್ತಿರುವ ತೆರಿಗೆಯನ್ನು ತಪ್ಪಿಸಬೇಕು ಎಂದು ಸರಿಯಾಗಿ ವಿಶ್ಲೇಷಿಸದರು ಮಾರುತಿ ವ್ಯಾನ್ನಲ್ಲಿ ಆತುರಾತರವಾಗಿ ಎಲ್ಲಿಗೋ ಹೊರಟಿದದ್ದ ಮಹನೀಯರೊಬ್ಬರು.

ಬಡವರ ಜೀವನ ಕಷ್ಟ ಸ್ವಾಮಿ
'ಡೀಸೆಲ್ ರೇಟ್, ಪೆಟ್ರೋಲ್ ರೇಟ್ ಜಾಸ್ತಿ ಮಾಡುತ್ತಿದ್ದರೆ ನಮಗೆ ಜೀವನ ಮಾಡಲು ಕಷ್ಟ ಆಗ್ತದೆ ಎಂದು ಎಚ್ಚರಿಕೆ ನೀಡುವ ಧನಿಯಲ್ಲಿ ಟಿಟಿ ಡ್ರೈವರ್ ಒಬ್ಬರು ಹೇಳಿದರು. ಅವರ ಬಾಯಿ ತುಂಬಿಕೊಂಡಿದ್ದ ಗುಟ್ಕಾವನ್ನು ಉಗಿಯದಿದ್ದರೂ ಸರ್ಕಾರಗಳಿಗೆ ಮಾತಿನಲ್ಲೇ ಉಗಿದು ಇಂಧನ ಬೆಲೆಗೆ ಒತ್ತಾಯಿಸಿದರು.

ಮೋದಿ ಕೊಟ್ಟ ಮಾತು ಮರೆತಿದ್ದಾರೆ
ಮೋದಿ ಅವರ ಐದು ವರ್ಷದ ಆಡಳಿತ ಮುಗಿಯುತ್ತಾ ಬಂತು ಆದರೆ ಅವರು ಕೊಡುತ್ತೇನೆಂದು ಹೇಳಿದ್ದ ಯಾವುದೇ ಸೌಕರ್ಯ ಇನ್ನೂ ಕೊಟ್ಟಿಲ್ಲ ಅದರ ಬದಲಿಗೆ ಪೆಟ್ರೋಲ್ ಬೆಲೆ ಏರಿಕೆ ಕೆಂಡವನ್ನು ಸಾಮಾನ್ಯರ ಮೇಲೆ ಎಸೆದಿದ್ದಾರೆ ಎಂಬರ್ಥದ ಮಾತುಗಳನ್ನು ಪೆಟ್ರೋಲ್ ಹಾಕಿಸಲು ಬಂದಿದ್ದ ವ್ಯಕ್ತಿಯೊಬ್ಬರು ಹೇಳಿದರು. ಮನಸ್ಸಿನಲ್ಲಿ ಆಕ್ರೋಶವಿದ್ದರೂ ಅವರ ಮಾತಿನಲ್ಲಿ ಸಮಾಧಾನವಿತ್ತು.












Click it and Unblock the Notifications