ಬೆಂಗಳೂರು ನಗರದಲ್ಲಿ ತೆರಿಗೆ ಕಟ್ಟುವವರಿಗೆ ಸಿಹಿಸುದ್ದಿ
ಬೆಂಗಳೂರು, ಜನವರಿ 29: ಬೆಂಗಳೂರು ನಗರದಲ್ಲಿ ತೆರಿಗೆ ಸಂಗ್ರಹ ಮಾಡಲು ಬಿಬಿಎಂಪಿ ಹಲವಾರು ಕಸರತ್ತು ನಡೆಸುತ್ತಿದೆ. ಕೋಟ್ಯಾಂತರ ರೂಪಾಯಿ ವಾಣಿಜ್ಯ ತೆರಿಗೆ ಬಾಕಿ ಉಳಿದಿದೆ. ಇದನ್ನು ಸಂಗ್ರಹ ಮಾಡಿ ಅಭಿವೃದ್ಧಿ ಕಾರ್ಯಗಳಿಗೆ ಬಳಕೆ ಮಾಡಬೇಕು. ಇಲ್ಲವಾದಲ್ಲಿ ಸರ್ಕಾರದಿಂದ ಅನುದಾನ ಬಿಡುಗಡೆಗೆ ಕಾದು ಕೂರಬೇಕು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಅಧಿಕಾರಿಗಳ ಆಡಳಿತವಿದೆ. ಮಾಹಿತಿಯ ಪ್ರಕಾರ ಸುಮಾರು 2 ಸಾವಿರ ಕೋಟಿ ರೂ. ವಾಣಿಜ್ಯ ಕಟ್ಟಡಗಳ ತೆರಿಗೆ ಬಾಕಿ ಉಳಿದಿದೆ. ತೆರಿಗೆ ವಸೂಲಿಗೆ ವಿನಾಯಿತಿಗಳನ್ನು ನೀಡಲು ಸಹ ಬಿಬಿಎಂಪಿ ಚಿಂತನೆ ನಡೆಸಿದೆ.

ಬೆಂಗಳೂರು ನಗರ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಮೂಲ ಸೌಕರ್ಯ ಒದಗಿಸುವುದು, ಸಂಚಾರ ವ್ಯವಸ್ಥೆ ನಿರ್ವಹಣೆ ಸೇರಿದಂತೆ ಹಲವು ಸವಾಲುಗಳಿವೆ. ಇವುಗಳಿಗೆ ತಕ್ಕಂತೆ ಯೋಜನೆ ರೂಪಿಸಿ ಕಾಮಗಾರಿ ಕೈಗೊಳ್ಳಲು ಅನುದಾನ ಬೇಕು. ಆದರೆ ತೆರಿಗೆದ ಕೊರತೆ ಕಾರಣ ಖಜಾನೆ ತುಂಬುತ್ತಿಲ್ಲ.
ತೆರಿಗೆ ಸಂಗ್ರಹಕ್ಕೆ ವಿನಾಯಿತಿ?; ಡಿ. ಕೆ. ಶಿವಕುಮಾರ್ ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಮೇಲೆ ತೆರಿಗೆ ಸಂಗ್ರಹಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಆದ್ದರಿಂದ ತೆರಿಗೆ ಸಂಗ್ರಹ ಮಾಡಲು ಕೆಲವು ವಿನಾಯಿತಿಗಳನ್ನು ನೀಡಲು ಬಿಬಿಎಂಪಿ ಮುಂದಾಗಿದೆ. ಇದಕ್ಕಾಗಿ ಅಂತಿಮ ಒಪ್ಪಿಗೆಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುತ್ತದೆ.
ಬಿಬಿಎಂಪಿಯ ಆದಾಯದಲ್ಲಿ ಪ್ರಮುಖ ಮೂಲವೇ ವಾಣಿಜ್ಯ ಕಟ್ಟಡಗಳಿಂದ ಬರುವ ತೆರಿಗೆ. ನಗರದಲ್ಲಿ ಇಷ್ಟೊಂದು ಕಟ್ಟಡಗಳಿದ್ದರೂ ಸಹ ಹಲವು ಕಟ್ಟಡಗಳು ಕೋಟ್ಯಾಂತರ ರೂಪಾಯಿ ತೆರಿಗೆ ಬಾಕಿ ಉಳಿಸಿಕೊಂಡಿವೆ. ಹೀಗಾಗಿ ನಿರೀಕ್ಷಿತ ಪ್ರಮಾಣದಲ್ಲಿ ತೆರಿಗೆ ಸಂಗ್ರಹವಾಗುತ್ತಿಲ್ಲ.
ತೆರಿಗೆ ಪಾವತಿ ಮಾಡುವವರಿಗೆ ಮೂರು ಮಾದರಿ ವಿನಾಯಿತಿಗಳನ್ನು ನೀಡಲು ಬಿಬಿಎಂಪಿ ಚಿಂತನೆ ನಡೆಸಿದೆ. ಬಾಕಿ ಉಳಿಸಿಕೊಂಡ ತೆರಿಗೆ ಪಾವತಿಸುವವರಿಗೆ ಬಡ್ಡಿ ಅಥವ ದಂಡವನ್ನು ಮನ್ನಾ ಮಾಡುವುದು ಪಾಲಿಕೆಯ ಮೊದಲ ಪ್ರಸ್ತಾವನೆ.
ಬಾಕಿ ತೆರಿಗೆ ಪಾವತಿ ಮಾಡುವವರಿಗೆ ದುಪ್ಪಟ್ಟು ಬದಲು ಒಂದು ಪಟ್ಟು ಮಾತ್ರ ದಂಡ ಅಥವ ಬಡ್ಡಿ ಹಾಕುವುದು 2ನೇ ಪ್ರಸ್ತಾವನೆಯಾಗಿದೆ. ತೆರಿಗೆ ಪಾವತಿ ಮಾಡುವವರಿಂದ ಬಡ್ಡಿ ಅಥವ ದಂಡ ಒಂದನ್ನು ಮಾತ್ರ ವಸೂಲಿ ಮಾಡುವುದು 3ನೇ ಪ್ರಸ್ತಾವನೆಯಾಗಿದೆ.
ಈ ಮೂರು ಪ್ರಸ್ತಾವನೆಗಳನ್ನು ಸರ್ಕಾರಕ್ಕೆ ಸಲ್ಲಿಕೆ ಮಾಡಲಾಗುತ್ತದೆ. ಸರ್ಕಾರ ಯಾವುದಕ್ಕೆ ಒಪ್ಪಿಗೆ ಸೂಚಿಸಲಿದೆ ಎಂದು ಕಾದು ನೋಡಬೇಕು. ಹೀಗೆ ವಿನಾಯಿತಿ ನೀಡುವ ಮೂಲಕ ಬಾಕಿ ಉಳಿದಿರುವ ತೆರಿಗೆ ಸಂಗ್ರಹವನ್ನು ಮಾಡುವುದು ಬಿಬಿಎಂಪಿಯ ಚಿಂತನೆಯಾಗಿದೆ.
ಸದ್ಯ 198 ವಾರ್ಡ್ಗಳನ್ನು ಹೊಂದಿರುವ ಬಿಬಿಎಂಪಿ ಪ್ರತಿ ಆರ್ಥಿಕ ವರ್ಷಕ್ಕೆ ತನ್ನದೇ ಆದ ಬಜೆಟ್ ಮಂಡಿಸುತ್ತದೆ. ಈ ಬಜೆಟ್ ರಾಜ್ಯದಿಂದ ಬರುವ, ಕೇಂದ್ರದಿಂದ ಬರುವ ಅನುದಾನ ಮತ್ತು ಬಿಬಿಎಂಪಿಗೆ ಬರುವ ತೆರಿಗೆ ಸಂಗ್ರಹದ ಆದಾಯದ ಮೇಲೆ ನಿರ್ಧರಿತವಾಗಿರುತ್ತದೆ.
ಕಳೆದ ವರ್ಷ ಮಾರ್ಚ್ 2ರಂದು ಬಿಬಿಎಂಪಿ 11,163.97 ಕೋಟಿ ವೆಚ್ಚದೊಂದಿಗೆ 2023-24ನೇ ಹಣಕಾಸು ವರ್ಷಕ್ಕೆ ಬಜೆಟ್ ಅನ್ನು ಮಂಡಿಸಿತ್ತು. ಪಾಲಿಕೆ ಬಜೆಟ್ ಗಾತ್ರ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಲೇ ಇರುತ್ತದೆ. ಇದಕ್ಕೆ ಸರಿಯಾಗಿ ತೆರಿಗೆ ಸಂಗ್ರಹ ಸಹ ಆಗಬೇಕು. ಆದರೆ ಬಾಕಿ ಉಳಿದಿರುವ ತೆರಿಗೆ ವಸೂಲಿ ಮಾಡುವುದೇ ಪಾಲಿಕೆಗೆ ಸವಾಲಿನ ಕೆಲಸ.
ಹೆಚ್ಚು ತೆರಿಗೆ ಬಾಕಿ ಉಳಿಸಿಕೊಂಡಿರುವ ಕಟ್ಟಡಗಳ ಮುಂದೆ ಬ್ಯಾನರ್ ಹಾಕುವುದು, ಬೀಗ ಹಾಕುವುದು ಮುಂತಾದ ಕಾರ್ಯಾಚರಣೆಗಳನ್ನು ಪಾಲಿಕೆ ಮಾಡುತ್ತಲೇ ಬಂದಿದೆ. ಆದರೆ ಇದರಿಂದಲೂ ತೆರಿಗೆ ಸಂಗ್ರಹದಲ್ಲಿ ಹೆಚ್ಚಿನ ಏರಿಕೆ ಕಂಡುಬಂದಿಲ್ಲ.
ಬಿಬಿಎಂಪಿಗೆ ತೆರಿಗೆ ಬಿಟ್ಟರೆ ನಗರದಲ್ಲಿ ಅಳವಡಿಕೆ ಮಾಡುವ ಜಾಹೀರಾತು ಫಲಕ/ ಹೋರ್ಡಿಂಗ್ಗಳ ಮೂಲಕವು ಅನುದಾನ ಬರುತ್ತದೆ. ಆದರೆ ಅಕ್ರಮವಾಗಿ ಜಾಹೀರಾತು ಅಳವಡಿಸಿರುವ ಕುರಿತು ಹಲವು ದೂರುಗಳು ಕೇಳಿ ಬರುತ್ತಿವೆ. ಈ ಕುರಿತು ಕರ್ನಾಟಕ ಹೈಕೋರ್ಟ್ ಸಹ ಪಾಲಿಕೆಗೆ ಹಲವು ಬಾರಿ ಎಚ್ಚರಿಕೆಯನ್ನು ನೀಡಿದೆ.












Click it and Unblock the Notifications