ಸರ್ಕಸ್ ಬಾಲಕಿ ಮತ್ತು ಕತ್ತೆ ಮದುವೆ: ಅಸೆಂಬ್ಲಿಯಲ್ಲಿ ಸ್ವಾರಸ್ಯಕರ ಚರ್ಚೆ
ಬೆಂಗಳೂರು, ಜು.11: ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ಕತ್ತೆ ಮದುವೆಯಂತೆ ಎಂದು ಬಿಜೆಪಿ ಟೀಕಿಸಿದರೆ, ಸರ್ಕಸ್ನ ಬಾಲಕಿಯನ್ನು ಮದುವೆಯಾಗಲು ಕಾದ ಕತ್ತೆಯಂತಾಗಿದೆ ಎಂದು ಜೆಡಿಎಸ್ ತಿರುಗೇಟು ನೀಡಿದ ಹಾಸ್ಯಮಯ ಪ್ರಸಂಗ ವಿಧಾನಸಭೆಯಲ್ಲಿ ಬುಧವಾರ ನಡೆಯಿತು.
ಬಜೆಟ್ ಚರ್ಚೆ ವೇಳೆ ಜೆಡಿಎಸ್ ಶಾಸಕ ಎಟಿ ರಾಮಸ್ವಾಮಿ ಭಾಷಣ ಆರಂಭಿಸಿ ಬಿಜೆಪಿಯವರು ನಮ್ಮ ಸರ್ಕಾರವನ್ನು ಕುರುಡರು, ಕುಂಟರ ಸರ್ಕಾರ ಎಂದು ಟೀಕಿಸಿದ್ದಾರೆ, ಆದರೆ ಒಂದು ಪ್ರಜಾಪ್ರಭುತ್ವದ ತಳಹದಿಯಲ್ಲಿರುವ ಸರ್ಕಾರವನ್ನು ಈ ರೀತಿ ಹೀಯಾಳಿಸಬಾರದು, ಬಿಜೆಪಿಯವರು ತುಂಬಾ ಆತುರದಲ್ಲಿದ್ದಂತಿದೆ.
ಪೆಟ್ರೋಲ್ ತೆರಿಗೆ ಹೆಚ್ಚಳ: ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಭಾರಿ ವಿರೋಧ
ಕಾಂಗ್ರೆಸ್- ಜೆಡಿಎಸ್ ಸರ್ಕಾರ ರಚನೆಯಾದ ಬಳಿಕ ತೀವ್ರ ಅವಸರ ಮಾಡದೆ ಕೆಲ ಸಮಯ ಆಡಳಿತವನ್ನು ಕಾದು ನೋಡಬೇಕು. ಅತಿ ಆತುರ ಮಾಡಿದರೆ ಅಪಘಾತ ಗ್ಯಾರಂಟಿ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.
ಇದೇ ವೇಳೆ ತಾವು ಬಾಲ್ಯದಲ್ಲಿ ಸರ್ಕಸ್ ನೋಡಿದ ಘಟನೆಯನ್ನು ವಿವಿರಿಸಿ ಸರ್ಕಸ್ನಲ್ಲಿ ಬಾಲಕಿಯೊಬ್ಬಳು ಹಗ್ಗದ ಮೇಲೆ ನಡೆಯುತ್ತಿದ್ದಳು ಆ ಬಾಲಕಿ ಸರ್ಕಸ್ನಲ್ಲಿ ನಡೆಯುವ ಮುನ್ನ ಆಕೆಯ ತಂದೆ ನೀನು ಹಗ್ಗದಿಂದ ಜಾರಿ ಬಿದ್ದರೆ ಕತ್ತೆ ಜೊತೆಗೆ ಮದುವೆ ಮಾಡುವುದಾಗಿ ಬೆದರಿಸುತ್ತಿದ್ದರು.
ಈ ಮಾತನ್ನು ಕೇಳಿಸಿಕೊಂಡ ಕತ್ತೆ ಬಾಲಕಿ ಯಾವತ್ತೋ ಒಂದು ದಿನ ಬೀಳುತ್ತಾಳೆ ತನ್ನನ್ನು ಮದುವೆಯಾಗುತ್ತಾಳೆ ಎಂದು ಕಾದು ಕುಳಿತಿತ್ತು. ಆದರೆ ಬಾಲಕಿ ಯುವತಿಯಾಗಿ ಮದುವೆ ಆಗುವ ವರೆಗೆ ಎಲ್ಲಿಯೂ ಬೀಳಲಿಲ್ಲ ಹೀಗಾಗಿ ಕತೆತ ವಯಸ್ಸಾಗಿ ಸತ್ತು ಹೋಯಿತು ಹೀಗೆ ಬಿಜೆಪಿಯವರು ಜೆಡಿಎಸ್ ಕಾಂಗ್ರೆಸ್ ಸರ್ಕಾರ ಬೀಳುತ್ತೆ ಎಂದು ಕಾದು ಕುಳಿತುಕೊಳ್ಳಬೇಕಾಗುತ್ತದೆ ಎಂದು ಟಾಂಗ್ ನೀಡಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಶಾಸಕ ಸಿಟಿ ರವಿ ನಮ್ಮ ಕಡೆ ಮದುವೆಯಾಗದಿದ್ದರೆ ಕತ್ತೆಗಳ ಮದುವೆ ಮಾಡಿಸುತ್ತಾರೆ ಹಾಗೆ ಜೆಡಿಎಸ್ ಮತ್ತ ಕಾಂಗ್ರೆಸ್ ನಡುವೆ ಮಳೆ ಬಾರದ ಸಂದರ್ಭದಲ್ಲಿ ಮದುವೆಯಾದಂತಾಗಿದೆ ಎಂದು ಎದುರೇಟು ನೀಡಿದರು.
ಇದನ್ನು ಬಲವಾಗಿ ಸಮರ್ಥಿಸಿಕೊಂಡ ಸಚಿವ ಬಂಡೆಪ್ಪ ಕಾಶೆಂಪೂರ್ ಕತ್ತೆಗಳ ಮದುವೆಯಾದರೆ ಆಗಲಿ ಅದರೆ ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದೆ, ಮಳೆಯಾದರೆ ಮಾತ್ರ ಸುಭೀಕ್ಷವಾಗಿರುತ್ತದೆ ಎಂದು ಕಾಂಗ್ರೆಸ್-ಜೆಡಿಎಸ್ ಮೈತ್ರಿಯನ್ನು ಪರೋಕ್ಷವಾಗಿ ಸಮರ್ಥಿಸಿಕೊಂಡರು.
ಆಗ ಶಾಸಕ ರಾಮಸ್ವಾಮಿ ಕತ್ತೆಗಳ ವಿಚಾರ ಹಾಗಿರಲಿ ಮನುಷ್ಯರಾದ ನಾವು ಒಂದು ಪ್ರಜಾಪ್ರಭುತ್ವ ಸರ್ಕಾರವನ್ನು ಒಪ್ಪಿಕೊಂಡು ಜನರ ಒಳಿತಿಗಾಗಿ ಕೆಲಸ ಮಾಡಬೇಕಾಗುತ್ತದೆ ಎನ್ನುವ ಮೂಲಕ ಚರ್ಚೆಗೆ ತೆರೆ ಎಳೆದರು.