ಉಪಚುನಾವಣೆ: ತ್ಯಾಗಕ್ಕೆ ತಯಾರಾಗಿ, ಸಚಿವರಿಗೆ ಯಡಿಯೂರಪ್ಪ ಸೂಚನೆ
ಬೆಂಗಳೂರು, ನವೆಂಬರ್ 21: ಉಪಚುನಾವಣೆ ಕುರಿತಂತೆ ತಮ್ಮ ಸಂಪುಟ ಸಹೋದ್ಯೋಗಿಗಳಿಗೆ ಯಡಿಯೂರಪ್ಪ ಎಚ್ಚರಿಕೆ ನೀಡಿದ್ದು, ಉಪಚುನಾವಣೆಯಲ್ಲಿ ಶಕ್ತಿ ಮೀರಿ ಶ್ರಮವಿಹಿಸೆಂದು ಸೂಚಿಸಿದ್ದಾರೆ.
ಉಪಚುನಾವಣೆಯಲ್ಲಿ ಕನಿಷ್ಟ 8 ಸ್ಥಾನ ಗೆದ್ದರಷ್ಟೆ ಸರ್ಕಾರ ಉಳಿಯುತ್ತದೆ. ಹಾಗಾಗಿ ಸಚಿವರುಗಳು ತಮ್ಮ ಸ್ಥಾನದಲ್ಲಿ ಮುಂದುವರೆಯಬೇಕೆಂಬ ಆಸೆ ಇದ್ದರೆ ಉಪಚುನಾವಣೆಯಲ್ಲಿ ಕೆಲಸ ಮಾಡಿ ಅಭ್ಯರ್ಥಿಗಳನ್ನು ಗೆಲ್ಲಿಸಿ ಎಂದು ಯಡಿಯೂರಪ್ಪ ಖಡಕ್ ಎಚ್ಚರಿಕೆ ನೀಡಿದ್ದಾರೆ.
ನಿನ್ನೆ ನಡೆದ ಸಂಪುಟ ಸಭೆಯಲ್ಲಿ ಮಾತನಾಡಿರುವ ಯಡಿಯೂರಪ್ಪ ಅವರು, ಇದೇ ನಮ್ಮ ಕೊನೆಯ ಸಭೆ ಆಗಬಾರದೆಂದರೆ ಎಲ್ಲ ಸಚಿವರುಗಳೂ ಉಪಚುನಾವಣೆ ಅಖಾಡಕ್ಕೆ ಇಳಿಯಿರಿ ಎಂದು ಹೇಳಿದ್ದಾರೆ.

ಅಷ್ಟೆ ಅಲ್ಲದೆ ಉಪಚುನಾವಣೆ ಫಲಿತಾಂಶದ ಬಳಿಕ ಕೆಲವು ಸಚಿವರುಗಳು ತಮ್ಮ ಸಚಿವ ಸ್ಥಾನವನ್ನು ತ್ಯಾಗ ಮಾಡಬೇಕಾಗಿ ಬರುತ್ತದೆ ಎಂದೂ ಸಹ ಯಡಿಯೂರಪ್ಪ ಹೇಳಿದ್ದಾರೆ. ಗೆದ್ದ ಅಭ್ಯರ್ಥಿಗಳನ್ನು ಸಚಿವರನ್ನಾಗಿ ಮಾಡುವುದಾಗಿ ಈಗಾಗಲೇ ಯಡಿಯೂರಪ್ಪ ಭರವಸೆ ನೀಡಿದ್ದಾರೆ. ಹಾಗಾಗಿ ಕೆಲವು ಹಾಲಿ ಸಚಿವರುಗಳು ಸ್ಥಾನ ತ್ಯಾಗ ಮಾಡಲೇಬೇಕಾಗಿದೆ.
ಕಾಂಗ್ರೆಸ್-ಜೆಡಿಎಸ್ ಶಾಸಕರು ರಾಜೀನಾಮೆ ಕೊಟ್ಟಿದ್ದರಿಂದಲೇ ನಮ್ಮ ಸರ್ಕಾರ ಬಂದು ನೀವೆಲ್ಲಾ ಸಚಿವರಾಗಿದ್ದೀರಿ, ಹಾಗಾಗಿ ಉಪಚುನಾವಣೆಯಲ್ಲಿ ಅವರನ್ನು ಗೆಲ್ಲಿಸುವುದು ನಿಮ್ಮ ಕರ್ತವ್ಯವೆಂದು ಭಾವಿಸಿ ಎಂದು ಯಡಿಯೂರಪ್ಪ ಹೇಳಿದ್ದಾರೆ.
ಬಿಜೆಪಿಯ ಕೆಲವು ಸಚಿವರು ಅನರ್ಹರಿಗೆ ಟಿಕೆಟ್ ಕೊಟ್ಟಿರುವ ಬಗ್ಗೆ ಅಸಮಾಧಾನಗೊಂಡಿದ್ದು, ಉಪಚುನಾವಣೆಯಲ್ಲಿ ಭಾಗವಹಿಸದೇ ಇರುವ ಬಗ್ಗೆ ಯಡಿಯೂರಪ್ಪ ಅಸಮಾಧಾನಗೊಂಡಿರುವ ಕಾರಣ ನಿನ್ನೆಯ ಸಭೆಯಲ್ಲಿ ಈ ಮಾತುಗಳನ್ನು ಹೇಳಿದ್ದಾರೆ.












Click it and Unblock the Notifications