ಬೆಂಗಳೂರಿನಲ್ಲಿ ಅತ್ಯಾಧುನಿಕ ಸಮಾವೇಶ ಕೇಂದ್ರ, ಬಿಝಿನೆಸ್ ಪಾರ್ಕ್ಗೆ ಶಂಕುಸ್ಥಾಪನೆ
ಬೆಂಗಳೂರು, ಫೆ. 22: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದಲ್ಲಿ ತಲೆಯೆತ್ತಲಿರುವ ಬಹುನಿರೀಕ್ಷಿತ ಬೆಂಗಳೂರು ಅಂತಾರಾಷ್ಟ್ರೀಯ ಸಮಾವೇಶ ಕೇಂದ್ರ (ಬಿಐಸಿಸಿ- ಬೆಂಗಳೂರು ಇಂಟರ್ನ್ಯಾಷನಲ್ ಕನ್ವೆನ್ಷನ್ ಸೆಂಟರ್) ಮತ್ತು ಬೆಂಗಳೂರು ಸಿಗ್ನೇಚರ್ ಬಿಝಿನೆಸ್ ಪಾರ್ಕ್ (ಬಿಎಸ್ಬಿಪಿ)ಗೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ವಿಮಾನ ನಿಲ್ದಾಣದ ಪಕ್ಕದಲ್ಲಿರುವ ಭುವನಹಳ್ಳಿಯಲ್ಲಿ ನಡೆಯಲಿರುವ ಈ ಸಮಾರಂಭಕ್ಕೆ ಭಾರೀ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವ ಶ್ರೀ ಆರ್.ವಿ.ದೇಶಪಾಂಡೆ ಅವರು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಲಿದ್ದಾರೆ.
ಮಧ್ಯಾಹ್ನ 3.30ಕ್ಕೆ ನಡೆಯಲಿರುವ ಈ ಸಮಾರಂಭದಲ್ಲಿ ಸಚಿವ ಕೃಷ್ಣ ಬೈರೇಗೌಡ, ದೇವನಹಳ್ಳಿ ಶಾಸಕ ಪಿಳ್ಳಮುನಿಶಾಮಪ್ಪ, ಸಂಸದ ವೀರಪ್ಪ ಮೊಯಿಲಿ, ಸರಕಾರದ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ ಮುಂತಾದವರು ಉಪಸ್ಥಿತರಿರಲಿದ್ದಾರೆ.

"ಉದ್ಯಮಲೋಕದವರು ಸಭೆ, ಸಮಾರಂಭ, ಸಮಾಲೋಚನೆ, ಸಮಾವೇಶ, ವಸ್ತುಪ್ರದರ್ಶನ ನಡೆಸಲು ಅನುಕೂಲವಾಗಲೆಂಬ ಉದ್ದೇಶದಿಂದ ಸಮಾವೇಶ ಕೇಂದ್ರ ಮತ್ತು ಸಿಗ್ನೇಚರ್ ಬಿಝಿನೆಸ್ ಪಾರ್ಕ್ ಕ್ರಮವಾಗಿ 35 ಎಕರೆ ಮತ್ತು 407 ಎಕರೆ ಪ್ರದೇಶದಲ್ಲಿ ತಲೆಯೆತ್ತಲಿದೆ,'' ಎಂದು ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ.
'ಮಹತ್ವಾಕಾಂಕ್ಷಿ ಸಿಗ್ನೇಚರ್ ಬಿಝಿನೆಸ್ ಪಾರ್ಕ್, ವಿಶ್ವದರ್ಜೆಯ ಸೌಲಭ್ಯಗಳನ್ನು ಒಳಗೊಂಡಿರುತ್ತದೆ. ಉದ್ಯಾನನಗರಿ ಮತ್ತು ಗ್ರೀನ್ಹೌಸ್ ಪರಿಕಲ್ಪನೆಯಡಿ ನಿರ್ಮಿಸಲಿರುವ ಈ ಎರಡೂ ಯೋಜನೆಗಳಿಗೆ ಅಂದಾಜು 935 ಕೋಟಿ ರೂ. ವೆಚ್ಚವಾಗಲಿದೆ," ಎಂದು ಅವರು ಮಾಹಿತಿ ನೀಡಿದ್ದಾರೆ.
"ಸಿಗ್ನೇಚರ್ ಬಿಝಿನೆಸ್ ಪಾರ್ಕ್ನಲ್ಲಿ 8,000 ಆಸನ ಸಾಮರ್ಥ್ಯದ ಸಮಾವೇಶ ಕೇಂದ್ರ, 6,500 ಚದರ ಮೀಟರ್ ವಿಸ್ತೀರ್ಣದ ವಸ್ತುಪ್ರದರ್ಶನಾಲಯ, ಕನಿಷ್ಠ 20 ಜನರಿಂದ ಹಿಡಿದು ಗರಿಷ್ಠ 1,000 ಜನ ಪಾಳ್ಗೊಳ್ಳಬಹುದಾದ ಸಭಾಂಗಣಗಳು, ಪಂಚತಾರಾ ಮತ್ತು ತ್ರಿತಾರಾ ಹೋಟೆಲುಗಳು, ಸರ್ವೀಸ್ ಅಪಾರ್ಟ್ಮೆಂಟ್ಗಳು ಇರಲಿವೆ,'' ಎಂದು ದೇಶಪಾಂಡೆ ವಿವರ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ಅವರು "ಐಟಿ, ಬಿಟಿ, ಬಿಪಿಓ, ಔಷಧೋದ್ಯಮ ಮುಂತಾದ ಕ್ಷೇತ್ರಗಳ ದೇಶದ ಕೇಂದ್ರ ಸ್ಥಾನವಾಗಿರುವ ಬೆಂಗಳೂರಿನ ಉದ್ಯಮಿಗಳಿಗೆ ಇಂಥದೊಂದು ಸಮಾವೇಶ ಕೇಂದ್ರ ಮತ್ತು ಸಿಗ್ನೇಚರ್ ಬಿಝಿನೆಸ್ ಪಾರ್ಕ್ ತುಂಬಾ ಅಗತ್ಯವಾಗಿತ್ತು. ಇದರಿಂದ ಇಲ್ಲಿನ ಉದ್ಯಮ ಪರಿಸರ ಮತ್ತಷ್ಟು ಬೆಳೆಯಲಿದೆ," ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
ರಾಜ್ಯ ಸರಕಾರದ ಮೂಲಸೌಲಭ್ಯ ಅಭಿವೃದ್ಧಿ ಇಲಾಖೆ (ಐಡಿಡಿ) ಮತ್ತು ಕರ್ನಾಟಕ ರಾಜ್ಯ ಕೈಗಾರಿಕಾ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ (ಕೆಎಸ್ಐಐಡಿಸಿ) ಜತೆಗೂಡಿ ಈ ಕಾರ್ಯಕ್ರಮ ಹಮ್ಮಿಕೊಂಡಿವೆ.












Click it and Unblock the Notifications