ತ್ಯಾಜ್ಯ ನೀರು ಸಂಸ್ಕರಣಾ ಘಟಕದಿಂದ 3 ಜಿಲ್ಲೆಯ ಕೆರೆಗಳಿಗೆ ನೀರು
ಬೆಂಗಳೂರು, ಆಗಸ್ಟ್ 10 : ಬೆಂಗಳೂರು ನಗರದ ಹೆಬ್ಬಾಳ- ನಾಗವಾರ ವ್ಯಾಲಿಯಲ್ಲಿನ ತ್ಯಾಜ್ಯ ನೀರು ಸಂಸ್ಕರಣಾ ಘಟಕದಿಂದ ಚಿಕ್ಕಬಳ್ಳಾಪುರ, ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳ ವ್ಯಾಪ್ತಿಯಲ್ಲಿನ ವಿವಿಧ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಸರ್ಕಾರ ಮುಂದಾಗಿದೆ.
ಕೆರೆಗಳಿಗೆ ನೀರು ತುಂಬಿಸುವ ಏತ ನೀರಾವರಿ ಯೋಜನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗಸ್ಟ್ 11ರಂದು ಬೆಳಿಗ್ಗೆ 11ಕ್ಕೆ ದೇವನಹಳ್ಳಿ ಟೌನ್ ನಲ್ಲಿರುವ ಜೂನಿಯರ್ ಕಾಲೇಜು ಕ್ರೀಡಾಂಗಣದಲ್ಲಿ ಉದ್ಘಾಟಿಸುವರು ಎಂದು ಕೃಷಿ ಸಚಿವ ಕೃಷ್ಣ ಬೈರೇಗೌಡ ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಹಾಗೂ ಸಣ್ಣ ನೀರಾವರಿ ಸಚಿವ ಟಿ.ಬಿ. ಜಯಚಂದ್ರ ಅವರು ತಿಳಿಸಿದರು.

ಈ ಯೋಜನೆಯಿಂದ ಬೆಂಗಳೂರು ನಗರದ ಹೆಬ್ಬಾಳ-ನಾಗವಾರ ಕಣಿವೆಯ ಸಂಸ್ಕರಿಸಿದ ತ್ಯಾಜ್ಯ ನೀರನ್ನು ಚಿಕ್ಕಬಳ್ಳಾಪುರ, ಬೆಂಗಳೂರು ನಗರ ಮತ್ತು ಗ್ರಾಮಾಂತರ ಮೂರು ಜಿಲ್ಲೆಗಳ 65 ಕೆರೆಗಳಿಗೆ ನೀರು ತುಂಬಿಸುವ ಏತ ನೀರಾವರಿ ಯೋಜನೆಗೆ ಸುಮಾರು 883.54 ಕೋಟಿ ರು. ವೆಚ್ಚದಲ್ಲಿ ಈ ಯೋಜನೆಯನ್ನು ಸರ್ಕಾರ ಕೈಗೆತ್ತಿಕೊಂಡಿದೆ ಎಂದರು.
ಈ ಯೋಜನೆಯಿಂದ ಮೂರು ಸಂಸ್ಕರಣಾ ಘಟಕಗಳಿಂದ ಪ್ರತಿನಿತ್ಯ 210 ದಶಲಕ್ಷ ಲೀಟರ್ ನೀರು ಲಭ್ಯವಾಗಲಿದ್ದು, ಈ ನೀರನ್ನು ಕೊಂಡೊಯ್ಯಲು 5 ಪಂಪ್ ಹೌಸ್ಗಳ ಮುಖಾಂತರ ಪಂಪ್ ಮಾಡಲಾಗುತ್ತಿದೆ.

ಏರು-ಗುರುತ್ವ ಕೊಳವೆಗಳ ಮೂಲಕ ಎತ್ತರದ ಪ್ರದೇಶದಲ್ಲಿನ ಕೆರೆಗೆ ತುಂಬಿಸಿ ನಂತರ ಸರಣಿಯಲ್ಲಿನ ಕೆರೆಗಳಿಗೆ ಸ್ವಾಭಾವಿಕ ನಾಲೆಯ ಮೂಲಕ ನೀರನ್ನು ತುಂಬಿಸಲು ಯೋಜಿಸಲಾಗಿದೆ.
ಒಟ್ಟಾರೆಯಾಗಿ ಲಭ್ಯವಾಗುವ 210 ಎಂ.ಎಲ್.ಡಿ. ನೀರನ್ನು ಹೆಣ್ಣೂರು-ಬಾಗಲೂರು ರಸ್ತೆಯ ಮಾರ್ಗವಾಗಿ ಏರು-ಗುರುತ್ವ ಕೊಳವೆಗಳ ಮೂಲಕ ಬಾಗಲೂರು ಕೆರೆಗೆ ಹರಿಸಲು ಯೋಜಿಸಲಾಗಿದೆ.
ಬೆಂಗಳೂರು ಉತ್ತರ ತಾಲ್ಲೂಕು ವ್ಯಾಪ್ತಿಯ 12 ಕೆರೆಗಳು, ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲ್ಲೂಕಿನ 9 ಕೆರೆಗಳು, ಚಿಕ್ಕಬಳ್ಳಾಪುರ ಜಿಲ್ಲೆಯ 44 ಕೆರೆಗಳು ಒಟ್ಟು 65 ಕೆರೆಗಳು ಈ ಯೋಜನೆಯಡಿ ಬರುತ್ತವೆ.
ಈ ಯೋಜನೆಯಿಂದ ವರ್ಷಕ್ಕೆ ಸುಮಾರು 2.70 ಟಿಎಂಸಿ ನೀರು ಲಭ್ಯವಾಗಲಿದ್ದು, ಈ ನೀರಿನೊಂದಿಗೆ ಈ ಭಾಗದ ಕೆಳಭಾಗದ ಅನೇಕ ಕೆರೆಗಳು ತುಂಬಲಿದ್ದು ಕೆಳಭಾಗದ ಗ್ರಾಮಗಳ ರೈತಾಪಿ ವರ್ಗಕ್ಕೂ ಯೋಜನೆಯಿಂದ ಅನುಕೂಲವಾಗಲಿದೆ.












Click it and Unblock the Notifications