ಬ್ರಿಟನ್ ಪ್ರಧಾನಿ ತೆರೆಸಾ ಅವರನ್ನು ಸ್ವಾಗತಿಸಿದ ಸಿದ್ದರಾಮಯ್ಯ
ಬೆಂಗಳೂರು, ನವೆಂಬರ್, 8: ಬ್ರಿಟನ್ ಪ್ರಧಾನಿ ತೆರೆಸಾ ಮೇ ಅವರು ಮಂಗಳವಾರ ಬೆಳಿಗ್ಗೆ 10:30ಕ್ಕೆ ಇಲ್ಲಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಬಂದಿಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೆರೆಸಾ ಮೇ ಅವರನ್ನು ನಿಲ್ದಾಣದಲ್ಲಿ ಸ್ವಾಗತಿಸಿದರು. ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆ, ಪ್ರವಾಸೋದ್ಯಮ ಸಚಿವ ಪ್ರಿಯಾಂಕ್ ಖರ್ಗೆ ಸೇರಿದಂತೆ ಮತ್ತಿತರ ಗಣ್ಯರು ಬ್ರಿಟನ್ ಪ್ರಧಾನಿಗೆ ಹೂಗುಚ್ಛ ನಿಡಿ ಭವ್ಯ ಸ್ವಾಗತ ಕೋರಿದರು.
ಥೆರೆಸಾ ಮೇ ಅವರಿಗೆ ಸಂಪ್ರದಾಯಬದ್ಧವಾಗಿ ಕಳಸ ನೀಡಿ ಸಚಿವ ಪ್ರಿಯಾಂಕ್ ಖರ್ಗೆ ಅವರು ವಿಶೇಷವಾಗಿ ವಿಮಾನನಿಲ್ದಾಣದಲ್ಲಿ ಸ್ವಾಗತಿಸಿದರು

ವಿಮಾನ ನಿಲ್ದಾಣ ಸಮೀಪವಿರುವ ತಾಜ್ ಹೋಟೆಲ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ತೆರೆಸಾ ಅವರು ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ ಎಂದು ಬೃಹತ್ ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆ ಅವರು ತಿಳಿಸಿದರು.
ಬ್ರಿಟನ್ ಪ್ರಧಾನಿ ಭೇಟಿ ನಿಮಿತ್ತ ಮಂಗಳವಾರ ಬೆಳಿಗ್ಗೆ 10:30ರಿಂದ ಸಂಜೆ 5ರವರೆಗೆ ಕೆಲವು ರಸ್ತೆಗಳಲ್ಲಿ ವಾಹನ ಸಂಚಾರ, ನಿಲುಗಡೆಗೆ ನಿಷೇಧ ಹೇರಲಾಗಿದೆ.

ಬ್ರಿಟನ್ ಐರೋಪ್ಯ ಒಕ್ಕೂಟದಿಂದ ಹೊರಬಂದ ನಂತರ ಪ್ರಧಾನಿ ಹುದ್ದೆಗೇರಿರುವ ತೆರೆಸಾ ಅವರು ಭಾರತದ ಜತೆ ಸ್ನೇಹ ಹಸ್ತ ಚಾಚಿದ್ದಾರೆ. ಅವರ ಬೆಂಗಳೂರು ಭೇಟಿ ಮಹತ್ವದ್ದಾಗಿದೆ.
ಬ್ರಿಟನ್ ಪ್ರಧಾನಿ ಅವರೊಂದಿಗೆ ವೀಸಾ ಶುಲ್ಕ ಕಡಿಮೆ ಮಾಡುವುದು, ವೀಸಾ ನಿಯಮಾವಳಿ ಸಡಿಲಿಕೆ, ಕರ್ನಾಟಕದಲ್ಲಿ ಬಂಡವಾಳ ಹೂಡಿಕೆ ಕುರಿತಂತೆ ಚರ್ಚೆ ನಡೆಸಲಾಗುವುದು ಎಂದು ಅವರು ಹೇಳಿದರು.
ಥೇರೆಸಾ ಮೇ ಅವರು ಬೆಂಗಳೂರು ಭೇಟಿ ನಿಮಿತ್ತ ಸಾವಿರ ವರ್ಷದಷ್ಟು ಹಳೆಯದಾದ ಹಲಸೂರು ಶ್ರೀ ಸೋಮೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಲಿದ್ದಾರೆ. ಜತೆಗೆ ಸ್ಟೋನ್ ಹಿಲ್ ಇಂಟರ್ ನ್ಯಾಷನಲ್ ಸ್ಕೂಲ್ ದತ್ತು ತೆಗೆದುಕೊಂಡಿರುವ ಸರ್ಕಾರಿ ಶಾಲೆಗೂ ಅವರು ಭೇಟಿ ನೀಡಲಿದ್ದಾರೆ.
ತೆರೆಸಾ ಮೇ ಅವರು ದೇವಸ್ಥಾನಕ್ಕೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಮುಜರಾಯಿ ಇಲಾಖೆಯ ಅಧಿಕಾರಿಗಳು ಸೋಮೇಶ್ವರ ದೇವಸ್ಥಾನದಲ್ಲಿ ದೇವರ ದರ್ಶನಕ್ಕೆ ಸಕಲ ವ್ಯವಸ್ಥೆ ಮಾಡಿದ್ದಾರೆ.
ಮಂಗಳವಾರ ಮಧ್ಯಾಹ್ನ 3 ಗಂಟೆಗೆ ಅವರು ದೇವಸ್ಥಾನಕ್ಕೆ ಭೇಟಿ ನೀಡಲಿದ್ದು, ಭೇಟಿ ಅವಿಸ್ಮರಣೀಯವಾಗಿರಲು ಎಲ್ಲ ವ್ಯವಸ್ಥೆ ಮಾಡಲಾಗಿದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದರು.












Click it and Unblock the Notifications