ಹಂಪಿ ವಿವಿ ಉಪ ಕುಲಪತಿಯ 'ಸೂಟ್ ಕೇಸ್' ಆಪಾದನೆ ವಿರುದ್ಧ ಸಿಎಂ ಗರಂ
ಹಂಪಿ ವಿವಿ ಉಪ ಕುಲಪತಿ ಮಲ್ಲಿಕಾ ಘಂಟಿ ಆರೋಪ ತಳ್ಳಿಹಾಕಿದ ಸಿದ್ದರಾಮಯ್ಯ. ಸರ್ಕಾರದಲ್ಲಿ ಸೂಟ್ ಕೇಸ್ ಇಲ್ಲದಿದ್ರೆ ಏನೂ ಆಗಲ್ಲ ಎಂದಿದ್ದ ಮಲ್ಲಿಕಾ ಘಂಟಿ.
ಬೆಂಗಳೂರು, ಸೆಪ್ಟೆಂಬರ್ 14: ಹಂಪಿ ವಿಶ್ವವಿದ್ಯಾಲಯದ ಉಪ ಕುಲಪತಿ ಮಲ್ಲಿಕಾ ಘಂಟಿ ಅವರು, ಸರ್ಕಾರದ ವಿರುದ್ಧ ಮಾಡಿರುವ ಲಂಚದ ಆರೋಪವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತಳ್ಳಿಹಾಕಿದ್ದಾರೆ.
ಮಲ್ಲಿಕಾ ಘಂಟಿ ಹತ್ಯೆಗೆ ಸಂಚು ರೂಪಿಸಿದ್ದ ಕುವೆಂಪು ವಿವಿ ಸಿಬ್ಬಂದಿ
ಮಲ್ಲಿಕಾ ಘಂಟಿ ಅವರು, ಇತ್ತೀಚೆಗೆ ಸಮಾರಂಭವೊಂದರಲ್ಲಿ ಭಾಷಣ ಮಾಡುವಾಗ ''ಸರ್ಕಾರದಲ್ಲಿ ಸೂಟ್ ಕೇಸ್ ನೀಡದೆ ಯಾವ ಕೆಲಸವೂ ನಡೆಯುವುದಿಲ್ಲ. ಎಲ್ಲಿ ಎಲ್ಲವೂ ಹಣದ ಮೇಲೆಯೇ ನಿಂತಿರುತ್ತೆ'' ಎಂದು ಹೇಳಿದ್ದರು.
ಇದಕ್ಕೆ ಗುರುವಾರ ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ, ''ಮಲ್ಲಿಕಾ ಅವರು ಯಾವ ಹಿನ್ನೆಲೆಯಲ್ಲಿ ಈ ಮಾತು ಹೇಳಿದ್ದಾರೆಂದು ನನಗೆ ತಿಳಿದಿಲ್ಲ. ಆದರೂ, ಅವರ ಆರೋಪಗಳು ನಿರಾಧಾರ. ಸರ್ಕಾರದಲ್ಲಿ ಸೂಟ್ ಕೇಸ್ ಸಂಸ್ಕೃತಿಯಿಲ್ಲ'' ಎಂದು ತಿಳಿಸಿದರು.
ಮಲ್ಲಿಕಾ ಘಂಟಿ ಅವರ ಹೇಳಿಕೆಗೆ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಜವಾಬ್ದಾರಿಯುತ ಹುದ್ದೆಗಳಲ್ಲಿ ಇರುವವರು ತಮ್ಮ ಜವಾಬ್ದಾರಿಯನ್ನು ಅರಿತು ಮಾತನಾಡಬೇಕು. ಈ ಹಿನ್ನೆಲೆಯಲ್ಲಿ ಮಲ್ಲಿಕಾ ಘಂಟಿ ಅವರು ನೀಡಿರುವ ಹೇಳಿಕೆ ಆಕ್ಷೇಪಾರ್ಹವಾದದು. ಈ ಬಗ್ಗೆ ನೋಟಿಸ್ ಜಾರಿಗೊಳಿಸಲಾಗುವುದು'' ಎಂದು ಅವರು ತಿಳಿಸಿದರು.