ಅಲುಗಾಡಲು ಆರಂಭವಾದ ಸರ್ಕಾರ, ಎಚ್ಡಿಕೆ-ಕೆ.ಸಿ.ವೇಣುಗೋಪಾಲ್ ಭೇಟಿ
ಬೆಂಗಳೂರು, ಜನವರಿ 15: ಇಬ್ಬರು ಪಕ್ಷೇತರ ಶಾಸಕರು ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ ಪಡೆದಿದ್ದು, ಮೈತ್ರಿ ಸರ್ಕಾರಕ್ಕೆ ಅಲುಗಾಡುವ ಅನುಭವ ಆರಂಭವಾಗಿದೆ.
ಶಾಸಕರಾದ ಆರ್.ಶಂಕರ್ ಮತ್ತು ಎಚ್.ನಾಗೇಶ್ ಅವರುಗಳು ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ ಪಡೆದ ಬೆನ್ನಲ್ಲೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರನ್ನು ಭೇಟಿ ಮಾಡಿದ್ದಾರೆ.
ನಿನ್ನೆ ತಡರಾತ್ರಿ ತುರ್ತಾಗಿ ಬೆಂಗಳೂರಿಗೆ ಬಂದಿಳಿದ ವೇಣುಗೋಪಾಲ್ ಅವರು ಇಂದು ಬೆಳಿಗ್ಗೆಯಿಂದ ಕಾಂಗ್ರೆಸ್ನ ಹಲವು ಸಚಿವರು, ಮುಖಂಡರ ಜೊತೆ ಸತತ ಸಭೆ ನಡೆಸಿದ್ದರು. ಈಗ ಕುಮಾರಸ್ವಾಮಿ ಅವರ ಜೊತೆ ಸಭೆ ನಡೆಸುತ್ತಿದ್ದಾರೆ.
ಸರ್ಕಾರ ಉಳಿಸಿಕೊಳ್ಳಲು ಈಗಿರುವ ಕೆಲವು ಸಚಿವರು ರಾಜೀನಾಮೆ ನೀಡಿ ಅತೃಪ್ತರಿಗೆ ಅವಕಾಶ ಮಾಡಿಕೊಡಬೇಕಾಗುತ್ತದೆ, ಹಾಗಾಗಿ ಈಗಿನ ಸಭೆಯಲ್ಲಿ ಇದೇ ವಿಷಯ ಚರ್ಚೆ ಆಗುವ ಸಾಧ್ಯತೆ ಇದೆ.

ಜೆಡಿಎಸ್ನ ಕೆಲವರು ಹಾಗೂ ಕಾಂಗ್ರೆಸ್ನ ಕೆಲವರಿಂದ ರಾಜೀನಾಮೆ ಪಡೆದು ಅತೃಪ್ತ ಶಾಸಕರಿಗೆ ಅವಕಾಶ ಕೊಡುವ ಬಗ್ಗೆ ವೇಣುಗೋಪಾಲ್ ಹಾಗೂ ಕುಮಾರಸ್ವಾಮಿ ಚರ್ಚಿಸಲಿದ್ದಾರೆ ಎನ್ನಲಾಗಿದೆ.
ಇದೇ ದಿನ ವೇಣುಗೋಪಾಲ್ ಅವರು ದೇವೇಗೌಡ ಅವರನ್ನು ಸಹ ಭೇಟಿ ಆಗಲಿದ್ದು, ರಾಜ್ಯ ಕಾಂಗ್ರೆಸ್ ಮುಖಂಡರು ವೇಣುಗೋಪಾಲ್, ದೇವೇಗೌಡ ಹಾಗೂ ಕುಮಾರಸ್ವಾಮಿ ಅವರುಗಳು ಸಭೆ ನಡೆಸಲಿದ್ದಾರೆ.
ಯಾವುದೇ ಬೆಲೆ ತೆತ್ತಾದರೂ ಸರ್ಕಾರವನ್ನು ಉಳಿಸಿಕೊಳ್ಳಲೇ ಬೇಕು ಎಂದು ಕಾಂಗ್ರೆಸ್ ಹೈಕಮಾಂಡ್ ಸೂಚನೆ ಕೊಟ್ಟಿದ್ದು, ಹೀಗಾಗಿ ಕಾಂಗ್ರೆಸ್ ಮುಖಂಡರು ಸರ್ಕಾರವನ್ನು ಉಳಿಸಿಕೊಳ್ಳಲು ಸರ್ವ ಪ್ರಯತ್ನವನ್ನೂ ಮಾಡುತ್ತಿದ್ದಾರೆ.












Click it and Unblock the Notifications