ಪರಿಸರ ಪ್ರೇಮಿಗಳ ಮನವಿಗೆ ಸಿಎಂ ಸ್ಪಂದನೆ, ಬದುಕಿದ 800 ಮರಗಳು
ಬೆಂಗಳೂರು, ಜೂನ್ 07: ಕೊಡಗಿನ ಕೆ.ನಿಡುಗಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 800 ಮರಗಳನ್ನು ಕಡಿಯಲು ನೀಡಿದ್ದ ಅರಣ್ಯ ಇಲಾಖೆ ನೀಡಿದ್ದ ಅನುಮತಿಯನ್ನು ನಿರಾಕರಿಸಲು ಸಿಎಂ ಕುಮಾರಸ್ವಾಮಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ರೆಸಾರ್ಟ್ ಒಂದರ ನಿರ್ಮಾಣಕ್ಕಾಗಿ 800 ಮರಗಳನ್ನು ಕಡಿದು ಹಾಕಲು ಅರಣ್ಯ ಇಲಾಖೆಯೇ ಅನುಮತಿ ನೀಡಿದೆ ಎನ್ನಲಾಗಿತ್ತು. ಇದಕ್ಕೆ ಪರಿಸರ ಪ್ರೇಮಿಗಳು ರಾಜ್ಯದಾದ್ಯಂತ ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ ಈಗ ಇದಕ್ಕೆ ಕುಮಾರಸ್ವಾಮಿ ಬ್ರೇಕ್ ಹಾಕಿದ್ದಾರೆ.
ಈ ಬಗ್ಗೆ ಟ್ವಿಟ್ಟರ್ನಲ್ಲಿ ಸ್ಪಷ್ಟನೆ ನೀಡಿರುವ ಕುಮಾರಸ್ವಾಮಿ, ಕೊಡಗಿನಲ್ಲಿ 800 ಮರಗಳನ್ನು ಕಡಿಯುವ ಬಗ್ಗೆ ಮಾಧ್ಯಮಗಳಲ್ಲಿ ಬಿತ್ತರವಾದ ವರದಿ ಹಿನ್ನೆಲೆಯಲ್ಲಿ ಈಗಲೇ ಮರಗಳನ್ನು ಕಡಿಯುವುದನ್ನು ನಿಲ್ಲಿಸಲು ಸೂಚಿಸಲಾಗಿದೆ ಎಂದು ಹೇಳಿದ್ದಾರೆ.

ಅಲ್ಲದೆ ಮರಗಳನ್ನು ಕಡಿಯಲು ಕಾರಣ ಇನ್ನಿತರೆ ವಿಷಯಗಳ ಬಗ್ಗೆ ಶೀಘ್ರವೇ ಮುಖ್ಯಮಂತ್ರಿ ಕಚೇರಿಗೆ ವರದಿ ನೀಡುವಂತೆಯೂ ಅವರು ಸೂಚನೆ ನೀಡಿದ್ದಾರೆ.
ಕೆಲವು ತಿಂಗಳ ಹಿಂದಷ್ಟೆ ಕೊಡಗು ಪ್ರಕೃತಿ ವಿನಾಶಕ್ಕೆ ಗುರಿಯಾಗಿತ್ತು, ಇದಕ್ಕೆ ಅಲ್ಲಾಗುತ್ತಿರುವ ಅರಣ್ಯ ನಾಶವೇ ಕಾರಣ ಎಂದು ಪರಿಸರ ತಜ್ಞರು ಎಚ್ಚರಿಸಿದ್ದರು. ಹೀಗಿದ್ದಾಗಿಯೂ ಮರಗಳನ್ನು ಕಡಿಯಲು ಮುಂದಾಗಿದ್ದು ಭಾರಿ ಆಕ್ರೋಶ ಹುಟ್ಟುಹಾಕಿತ್ತು.
ಆದರೆ ಕೂಡಲೇ ಎಚ್ಚೆತ್ತುಕೊಂಡಿರುವ ಕುಮಾರಸ್ವಾಮಿ ಅವರು ಮರಗಳನ್ನು ಕಡಿಯುವುದನ್ನು ನಿಲ್ಲಿಸುವಂತೆ ಹೇಳಿದ್ದಾರೆ.












Click it and Unblock the Notifications