ಶಾಸಕ ಸುಧಾಕರ್ಗೆ ಮಂಡಳಿ ಅಧ್ಯಕ್ಷ ಸ್ಥಾನ ನೀಡಲು ಸಿಎಂ ಒಪ್ಪಿಗೆ
ಬೆಂಗಳೂರು, ಜನವರಿ 25: ಸಿಎಂ ಕುಮಾರಸ್ವಾಮಿ ಅವಕೃಪೆಗೆ ಒಳಗಾಗಿ ವಾಯುಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನದಿಂದ ವಂಚಿತರಾಗಿದ್ದ ಕಾಂಗ್ರೆಸ್ ಶಾಸಕ ಸುಧಾಕರ್ಗೆ ಕೊನೆಗೂ ಅದೇ ಸ್ಥಾನ ದೊರೆಯಲಿದೆ.
ವಾಯುಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಸುಧಾಕರ್ ಅವರನ್ನು ನೇಮಿಸಿ ಕುಮಾರಸ್ವಾಮಿ ಆದೇಶ ಹೊರಡಿಸಿಸಲು ಒಪ್ಪಿಗೆ ಸೂಚಿಸಿದ್ದಾರೆ. ಆ ಮೂಲಕ ಕಾಂಗ್ರೆಸ್ನ ಒತ್ತಡಕ್ಕೆ ಮತ್ತೊಮ್ಮೆ ಕುಮಾರಸ್ವಾಮಿ ಮಣಿದಿದ್ದಾರೆ.
ತಿಂಗಳ ಹಿಂದೆಯೇ ಕಾಂಗ್ರೆಸ್ ಪಕ್ಷವು 20 ಶಾಸಕರ ನಿಗಮ ಮಂಡಳಿಗಳ ನೇಮಕ ಪಟ್ಟಿಯನ್ನು ಕುಮಾರಸ್ವಾಮಿ ಅವರ ಅಂಕಿತಕ್ಕೆ ಕೊಟ್ಟಿತ್ತು. ಅದರಲ್ಲಿ ಸುಧಾಕರ್ ಹಾಗೂ ಸೋಮಣ್ಣ ಅವರ ಹೆಸರನ್ನು ಬಿಟ್ಟು ಮಿಕ್ಕೆಲ್ಲವುದಕ್ಕೂ ಕುಮಾರಸ್ವಾಮಿ ಒಪ್ಪಿಗೆ ನೀಡಿದ್ದರು.

ಆ ನಂತರ ಸುಧಾಕರ್ ಅವರು ಜೆಡಿಎಸ್ ಮೇಲಿನ ತಮ್ಮ ಬಿರುಮಾತುಗಳನ್ನು ಇನ್ನಷ್ಟು ಜೋರು ಮಾಡಿದ್ದರು. ಕುಮಾರಸ್ವಾಮಿ ವಿರುದ್ಧ ಸಹ ಆಕ್ರೋಶ ಹೊರಹಾಕಿದ್ದರು. ಆ ನಂತರ ಸೋಮಣ್ಣ ಅವರಿಗೆ ಬಿಡಿಎ ಅಧ್ಯಕ್ಷ ಸ್ಥಾನಕ್ಕೆ ಅಂಕಿತಹಾಕಲಾಯಿತಾದರೂ, ಸುಧಾಕರ್ ಅವರ ಸ್ಥಾನ ತ್ರಿಶಂಕುವಿನಲ್ಲಿತ್ತು.
ಕೊನೆಗೆ ನಿನ್ನೆ ಸುಧಾಕರ್ ಅವರ ನೇಮಕಕ್ಕೂ ಸಿಎಂ ಅಸ್ತು ಅಂದಿದ್ದು, ಇದಕ್ಕೆ ಕಾಂಗ್ರೆಸ್ ಹೇರುತ್ತಿದ್ದ ಒತ್ತಡವೇ ಕಾರಣ ಎನ್ನಲಾಗುತ್ತಿದೆ. ಸಮನ್ವಯ ಸಮಿತಿ ಸಭೆಯಲ್ಲಿ ಈ ಬಗ್ಗೆ ಚರ್ಚೆ ಆಗಿರುವ ಕಾರಣ ಸಿಎಂ ಅವರು ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.
ನನ್ನ ಹೆಸರನ್ನು ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಮಾಜಿ ಸಿದ್ದರಾಮಯ್ಯ ಅವರು ಸೂಚಿಸಿದ್ದರು, ಅದಕ್ಕೆ ಕುಮಾರಸ್ವಾಮಿ ಬ್ರೇಕ್ ಹಾಕಿದ್ದರು, ಈಗ ನೇಮಕಕ್ಕೆ ಒಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. ಅವರು ಒಪ್ಪಿಗೆ ಸೂಚಿಸದ ಮೇಲೆ ಆ ಬಗ್ಗೆ ಮಾತನಾಡುತ್ತೇನೆ ಎಂದು ಸುಧಾಕರ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.












Click it and Unblock the Notifications