ಲೇವಾದೇವಿದಾರರಿಂದ ಮನೆ ವಾಪಸ್: ಸಿಎಂಗೆ ಕೃತಜ್ಞತೆ ಸಲ್ಲಿಸಿದ ಮಹಿಳೆ
Recommended Video

ಬೆಂಗಳೂರು, ಸೆಪ್ಟೆಂಬರ್ 6: ಮನೆ ಕಳೆದುಕೊಂಡು ಬೇಸರದಿಂದ ಬಂದು ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿಯವರು ಬಳಿ ತಮ್ಮ ಅಳಲು ತೋಡಿಕೊಂಡಿದ್ದ ಗಿರಿನಗರದ ಕನ್ನಿಯಮ್ಮ ಅವರ ಮುಖದಲ್ಲಿ ಇಂದು ಮಂದಹಾಸ ಮೂಡಿದೆ. ಆಕೆಯ ಅಹವಾಲನ್ನು ಆಲಿಸಿ ನ್ಯಾಯ ಒದಗಿಸಿಕೊಡಲಾಗಿದೆ.
ಪತಿ ಮಾಡಿದ ಕೈಸಾಲ ಪ್ರಾಮಾಣಿಕವಾಗಿ ತೀರಿಸುತ್ತಾ ಬಂದಿದ್ದರೂ ಊರಲ್ಲಿ ಇಲ್ಲದ ಸಂದರ್ಭದಲ್ಲಿ ಸಾಲ ಕೊಟ್ಟ ವ್ಯಕ್ತಿ ಆಕೆಯ ಮನೆಯ ಬೀಗ ಒಡೆದು ಮನೆಯನ್ನ ಸ್ವಾಧೀನ ಪಡಿಸಿಕೊಂಡು ಅಕ್ರಮವಾಗಿ ಮತ್ತೊಬ್ಬರಿಗೆ ಬಾಡಿಗೆ ಕೊಟ್ಟಿದ್ದರು.
ಸೆಪ್ಟೆಂಬರ್1 ರಂದು ನಡೆದ ಜನತಾದರ್ಶನದಲ್ಲಿ ಮುಖ್ಯಮಂತ್ರಿಗಳ ಬಳಿ ಮನೆ ವಾಪಸ್ ಕೊಡಿಸುವಂತೆ ಕನ್ನಿಯಮ್ಮ ಅಹವಾಲು ಸಲ್ಲಿಸಿದ್ದರು. ಕೂಡಲೇ ಪೊಲೀಸ್ ಆಯುಕ್ತ ಸುನೀಲ್ ಕುಮಾರ್ ಅವರಿಗೆ ಕರೆ ಮಾಡಿ ಮನೆ ಒತ್ತುವರಿ ತೆರವು ಗೊಳಿಸಿ ಮಹಿಳೆಗೆ ರಕ್ಷಣೆ ಒದಗಿಸುವಂತೆ ಸೂಚಿಸಿದ್ದರು. ಅದರಂತೆ ಪೊಲೀಸರು ಕ್ರಮ ವಹಿಸಿ ಕನ್ನಿಯಮ್ಮನಿಗೆ ನ್ಯಾಯ ಒದಗಿಸಿದರು.

ಇಂದು ಆಕೆ ಕೃಷ್ಣಾದಲ್ಲಿ ಬಂದು ಮುಖ್ಯಮಂತ್ರಿಗಳಿಗೆ ಕೃತಜ್ಞತೆ ಸಲ್ಲಿಸಿದರು. ಪೊಲೀಸ್ ಆಯುಕ್ತ ಟಿ. ಸುನೀಲ್ ಕುಮಾರ್ ಹಾಗೂ ಡಿಸಿಪಿ ಶರಣಪ್ಪ ಹಾಜರಿದ್ದರು. ಜನತಾದರ್ಶನಕ್ಕೆ ಬಂದು ತನ್ನ ಕಷ್ಟ ಹೇಳಿಕೊಂಡಿದ್ದ ಮಹಿಳೆಯೊಬ್ಬರಿಗೆ ಕೇವಲ 24 ಗಂಟೆಯಲ್ಲಿ ನ್ಯಾಯ ದೊರಕಿಸಿಕೊಟ್ಟಿದ್ದರು.
ಸೆಪ್ಟೆಂಬರ್ 1ರಂದು ಸಿಎಂ ಅವರ ಜನತಾದರ್ಶನಕ್ಕೆ ಬಂದಿದ್ದ ಮಧ್ಯಪ್ರದೇಶದ ಮೂಲದ ಬೆಂಗಳೂರಿನ ನಿವಾಸಿ ವಂದನಾ ಅವರು, ತಮಗೆ ವಿಕೆಸಿ ಬಿಲ್ಡರ್ಸ್ ಎಂಬ ಸಂಸ್ಥೆಯಿಂದ ಮೋಸವಾಗುತ್ತಿರುವ ಬಗ್ಗೆ ಅವಲತ್ತುಕೊಂಡಿದ್ದರು. ಆಕೆಗೆ 24ಗಂಟೆಯಲ್ಲೇ ನ್ಯಾಯ ದೊರಕಿಸಿಕೊಟ್ಟಿದ್ದರು.












Click it and Unblock the Notifications