ಸಿಎಂ ಬದಲಾವಣೆ ಚಟುವಟಿಕೆ ನಿಜ ಆದರೆ ನಾನು ಕೊರೊನಾ ಕಾರ್ಯದಲ್ಲಿ ನಿರತ- ಆರ್ ಅಶೋಕ್
ಬೆಂಗಳೂರು, ಮೇ 26: ಕರ್ನಾಟಕ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಬದಲಾವಣೆ ಸಾಧ್ಯತೆ ಬಗ್ಗೆ ಈ ಸುದ್ದಿಯಾಗುತ್ತಿದೆ. ಈ ನಡುವೆ ಮುಂದಿನ ಮುಖ್ಯಮಂತ್ರಿ ಯಾರು ಆಗಬಹುದು ಎಂಬ ಪ್ರಶ್ನೆಯೂ ಮೂಡಿದೆ. ಪ್ರಸ್ತುತ ಗೃಹ ಸಚಿವರಾಗಿರುವ ಬಸವರಾಜು ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ರಾಜ್ಯ ಬೃಹತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಈ ಪೈಪೋಟಿಯಲ್ಲಿ ಇದ್ದಾರೆ ಎಂದು ಕೂಡಾ ಹೇಳಲಾಗುತ್ತಿದೆ.
ಆದರೆ ಈ ಸುದ್ದಿಗಳು ಸುಳ್ಳು, ಅಂತಹ ಯಾವುದೇ ಚರ್ಚೆ ನಡೆಯುತ್ತಿಲ್ಲ ಎಂದು ಹಲವು ಬಿಜೆಪಿ ನಾಯಕರು ಹೇಳಿದ್ದಾರೆ. ಈ ವಿಚಾರ ಪ್ರಸ್ತುತ ಅಲ್ಲ. ಅಷ್ಟಕ್ಕೂ ಸಿಎಂ ಕುರ್ಚಿ ಖಾಲಿಯಿಲ್ಲ ಎಂದು ಸಚಿವ ವಿ. ಸೋಮಣ್ಣ ಹೇಳಿದರೆ, ಯಡಿಯೂರಪ್ಪನವರೇ ನಮ್ಮ ಮುಖ್ಯಮಂತ್ರಿ ಎಂದು ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ತಿಳಿಸಿದ್ದಾರೆ.
ಆದರೆ ಈ ನಡುವೆ ಬೆಂಗಳೂರಿನಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಕಂದಾಯ ಸಚಿವ ಆರ್.ಅಶೋಕ್, ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರದ ಚಟುವಟಿಕೆಗಳು ನಡೆದಿರುವುದು ಶೇ.100 ರಷ್ಟು ನಿಜ ಎಂದು ಹೇಳಿದ್ದಾರೆ.

ನಾನು ನಿನ್ನೆಯಿಂದ ಮುಖ್ಯಮಂತ್ರಿ ಬದಲಾವಣೆ ಸುದ್ದಿಯನ್ನು ಗಮನಿಸುತ್ತಿದ್ದೇನೆ, ಮುಖ್ಯಮಂತ್ರಿ ಬದಲಾವಣೆ ಕುರಿತು ಸಚಿವರು, ಶಾಸಕರು ದೆಹಲಿಯಲ್ಲಿ ಸಭೆ ಸೇರಿರುವುದು ನಿಜ. ಆದರೆ ನಾನು ಮಾತ್ರ ಕೊರೊನಾ ನಿರ್ವಹಣೆ ಕಾರ್ಯದಲ್ಲಿದ್ದೇನೆ. ನನಗೆ ಈ ಸಂದರ್ಭದಲ್ಲಿ ಇದು ಮುಖ್ಯ ಎಂದು ಕೂಡಾ ತಿಳಿಸಿದ್ದಾರೆ.
ಮುಖ್ಯಮಂತ್ರಿ ಬದಲಾವಣೆ ವಿಚಾರದಲ್ಲಿ ಹಲವಾರು ಸಭೆಗಳು ನಡೆಯುತ್ತಿವೆ. ಕೆಲವರು ಪ್ರತ್ಯೇಕ ಸಭೆಗಳನ್ನು ಕೂಡಾ ಸೇರಿದ್ದಾರೆ. ಅದು ಕೂಡಾ ನನ್ನ ಗಮನಕ್ಕೆ ಬಂದಿದೆ. ಕೆಲವು ನಾಯಕರು ದೆಹಲಿಗೆ ಹೋಗಿದ್ದಾರೆ. ಆದರೆ ನಾನು ಈ ಎಲ್ಲಾ ಬೆಳವಣಿಗೆಯನ್ನು ಬದಿಗಿರಿಸಿದ್ದೇನೆ ಎಂದು ಹೇಳಿರುವ ಕಂದಾಯ ಸಚಿವ ಅಶೋಕ್, ನಾನು ಏನಿದ್ದರೂ ಈಗ ಕೊರೊನಾ ನಿಯಂತ್ರಣ, ಆಕ್ಸಿಜನ್, ಬೆಡ್ ವ್ಯವಸ್ಥೆಯ ಕಾರ್ಯ ಮಾಡುತ್ತಿದ್ದೇನೆ. ನನಗೆ ಕೊರೊನಾ ವಿರುದ್ದದ ಹೋರಾಟವೇ ಮುಖ್ಯ ಎಂದಿದ್ದಾರೆ.
ಸಿಎಂ ಯಡಿಯೂರಪ್ಪ ಪುತ್ರ ಬಿ.ವೈ ವಿಜಯೇಂದ್ರ ರಾಜ್ಯ ಸರ್ಕಾರದ ಆಡಳಿತ ಮತ್ತು ವಿವಿಧ ಇಲಾಖೆಗಳಲ್ಲಿ ನಿರಂತರ ಹಸ್ತಕ್ಷೇಪದಿಂದ ಅನೇಕ ಬಿಜೆಪಿ ಸಚಿವರು ಹಾಗೂ ಶಾಸಕರು ಬೇಸತ್ತಿದ್ದಾರೆ ಎಂದು ಹೇಳಲಾಗಿದೆ. ಇದರಿಂದಾಗಿ ಈಗ ಯಡಿಯೂರಪ್ಪರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸುವ ಚರ್ಚೆ ನಡೆಯುತ್ತಿದೆ ಎನ್ನಲಾಗಿದೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications