ಪುನೀತ್ ರಾಜಕುಮಾರ್ ಮೊದಲ ಪುಣ್ಯಸ್ಮರಣೆ; ಸಿಎಂ ನಮನ
ಬೆಂಗಳೂರು ಅಕ್ಟೋಬರ್ 29: ದೊಡ್ಮನೆಯ ಮುದ್ದಿನ ಕಂದ ಕರುನಾಡ ಕೂಸು ಪುನೀತ್ ರಾಜಕುಮಾರ್ ಅವರು ನಮ್ಮನ್ನ ಅಗಲಿ ಇಂದಿಗೆ (ಅಕ್ಟೋಬರ್ 29) ಒಂದು ವರ್ಷ. ಇಂದು ಪುನೀತ್ ರಾಜಕುಮಾರ್ ಅವರ ಮೊದಲ ಪುಣ್ಯಸ್ಮರಣೆ. ಹೀಗಾಗಿ ರಾಜ್ಯದೆಲ್ಲೆಡೆ ಯುವರಾಜ ಪುನೀತ್ ರಾಜಕುಮಾರ್ ಅವರನ್ನು ನೆನೆದು ನಮನ ಸಲ್ಲಿಸಲಾಗುತ್ತಿದೆ. ಕರುನಾಡ ಜನತೆ ಅಪ್ಪುಗೆಯ ಅಪ್ಪು ಅವರನ್ನು ನೆನೆದು ಕಂಬನಿ ಮಿಡಿಯುತ್ತಿದೆ. ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಟ್ವೀಟ್ ಮಾಡುವ ಮೂಲಕ ನಮನ ಸಲ್ಲಿಸಿದ್ದಾರೆ.
"ಬಾಲನಟನಾಗಿ ಚಿತ್ರರಂಗ ಪ್ರವೇಶಿಸಿ, ಪವರ್ ಸ್ಟಾರ್ ಆಗಿ ಕನ್ನಡಿಗರ ಜನಮಾನಸದಲ್ಲಿ ಶಾಶ್ವತ ಸ್ಥಾನ ಪಡೆದಿರುವ ಪ್ರೀತಿಯ ಅಪ್ಪು, ಡಾ. ಪುನೀತ್ ರಾಜಕುಮಾರ್ ರವರ ಪುಣ್ಯಸ್ಮರಣೆಯಂದು ಅವರಿಗೆ ಪ್ರೀತಿ ಪೂರ್ವಕ ನಮನಗಳು'' ಎಂದು ಸಿಎಂ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.
ಪುನೀತ್ ರಾಜುಕುಮಾರ್ ಅವರ ಮೊದಲ ಪುಣ್ಯಸ್ಮರಣೆಯಾದ ಇಂದು ನಾಡಿನೆಲ್ಲೆಡೆ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಕಂಠೀರವ ಸ್ಟೇಡಿಯಮ್ನಲ್ಲಿ ರಾತ್ರಿಯಿಂದಲೇ ಅಭಿಮಾನಿಗಳು ಭೇಟಿ ನೀಡಿ ಅಪ್ಪು ಸಮಾಧಿಗೆ ನಮನ ಸಲ್ಲಿಸುತ್ತಿದ್ದಾರೆ.
"ಬಾಲನಟನಾಗಿ ಚಿತ್ರರಂಗ ಪ್ರವೇಶಿಸಿ, ಪವರ್ ಸ್ಟಾರ್ ಆಗಿ ಕನ್ನಡಿಗರ ಜನಮಾನಸದಲ್ಲಿ ಶಾಶ್ವತ ಸ್ಥಾನ ಪಡೆದಿರುವ ಪ್ರೀತಿಯ ಅಪ್ಪು,
— CM of Karnataka (@CMofKarnataka) October 29, 2022
ಡಾ. ಪುನೀತ್ ರಾಜಕುಮಾರ್ ರವರ ಪುಣ್ಯಸ್ಮರಣೆಯಂದು ಅವರಿಗೆ ಪ್ರೀತಿ ಪೂರ್ವಕ ನಮನಗಳು. pic.twitter.com/7lTdgQ22vt
ಕಂಠೀರವ ಸ್ಟೇಡಿಯಮ್ನಲ್ಲಿ ಗೀತನಮನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಗಾನನಮನ ಮೂಲಕ ಅಪ್ಪುಗೆ ನಮನ ಸಲ್ಲಿಸಲಾಗುತ್ತಿದೆ. ಕಳೆದ ರಾತ್ರಿಯಿಂದಲೇ ಕಾರ್ಯಕ್ರಮ ಆಯೋಜಿಸಲಾಗಿದ್ದು ಈ ದಿನ ಪೂರ್ತಿ ಕಾರ್ಯಕ್ರಮ ನಡೆಯಲಿದೆ.
ಇಂದು ಕಂಠೀರವ ಸ್ಟೇಡಿಯಮ್ಗೆ ಬರುವ ಅಭಿಮಾನಿಗಳ ಸಂಖ್ಯೆ ಹೆಚ್ಚಾಗಲಿದ್ದು ಪೊಲೀಸ್ ಬಿಗ್ ಬಂದೋಬಸ್ತ್ ಮಾಡಲಾಗಿದೆ.
ಕಂಠೀರವ ಸ್ಟುಡಿಯೊ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್
ಪ್ರಥಮ ವರ್ಷದ ಪುಣ್ಯತಿಥಿ ಹಿನ್ನೆಲೆಯಲ್ಲಿ ಪುನೀತ್ ಸಮಾಧಿ ಸ್ಥಳ ಬೆಂಗಳೂರಿನ ಕಂಠೀರವ ಸ್ಟುಡಿಯೊದಲ್ಲಿ ಇನ್ನು ಕೆಲವೇ ಹೊತ್ತಿನಲ್ಲಿ ಕುಟುಂಬಸ್ಥರು ಪೂಜೆ, ಶಾಸ್ತ್ರ ನೆರವೇರಿಸಲಿದ್ದಾರೆ. ಅಪ್ಪುಗೆ ಇಷ್ಟವಾದ ತಿಂಡಿ, ತಿನಿಸುಗಳನ್ನು ಇಟ್ಟು ಕುಟುಂಬಸ್ಥರು ಸಮಾಧಿ ಮುಂದೆ ಪೂಜೆ ಮಾಡಲಿದ್ದಾರೆ. ಕಂಠೀರವ ಸ್ಟುಡಿಯೊ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಅಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರು ಇಂದು ಆಗಮಿಸುವ ಸಾಧ್ಯತೆಯಿದ್ದು ಪುಣ್ಯತಿಥಿ ಹಿನ್ನೆಲೆಯಲ್ಲಿ ಆಗಮಿಸುವವರಿಗೆ ಉಪಹಾರ, ಊಟ, ನೀರಿನ ವ್ಯವಸ್ಥೆ ಏರ್ಪಡಿಸಲಾಗಿದೆ.
ಕನ್ನಡ ಚಿತ್ರರಂಗದವರು, ಅಪ್ಪು ಆಪ್ತರು ಪೂಜೆಯಲ್ಲಿ ಭಾಗಿ
ಇಂದು ಬೆಳಿಗ್ಗೆ 9 ಗಂಟೆಗೆ ಕುಟುಂಬದವರು ಸಮಾಧಿಗೆ ಬರಲಿದ್ದಾರೆ. ಸಮಾಧಿ ಬಳಿ ಪುನೀತ್ಗೆ ಇಷ್ಟವಾದ ತಿನಿಸುಗಳನ್ನಿಟ್ಟು ಪೂಜೆ ಮಾಡಲಿದ್ದಾರೆ. ಇಡೀ ದೊಡ್ಮನೆ ಕುಟುಂಬ ಈ ಪೂಜೆಗೆ ಬರಲಿದೆ. ಜೊತೆಗೆ ಕನ್ನಡ ಚಿತ್ರರಂಗದವರು, ಅಪ್ಪು ಆಪ್ತರು, ಸ್ನೇಹಿತರು ಪೂಜೆಯಲ್ಲಿ ಭಾಗಿ ಆಗಲಿದ್ದಾರೆ.
ಅಪ್ಪು ಅಭಿಮಾನಿಗಳಿಗೆ ಊಟದ ವ್ಯವಸ್ಥೆ
ಅಪ್ಪು ಸಮಾಧಿಗೆ ಪೂಜೆ ಮಾಡಿದ ನಂತರದಲ್ಲಿ ಕುಟುಂಬ ಮನೆಗೆ ಮರಳಲಿದೆ. ಅಲ್ಲಿಯೂ ಪೂಜೆ ಇರಲಿದೆ. ವರ್ಷದ ಕಳಶ ಪೂಜೆಯನ್ನು ಕುಟುಂಬ ಮಾಡಲಿದೆ. ಬಳಿಕ ಬಂಧು ಬಳಗಕ್ಕೆ ಭೋಜನ ವ್ಯವಸ್ಥೆ ಇರಲಿದೆ. ಪುನೀತ್ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ಕಂಠೀರವ ಸ್ಟುಡಿಯೋದಲ್ಲಿ ಅಭಿಮಾನಿಗಳಿಗೆ ಅನ್ನದಾನವಿರಲಿದೆ. ಎಷ್ಟೇ ಸಂಖ್ಯೆಯಲ್ಲಿ ಅಭಿಮಾನಿಗಳುಪ ಬಂದರೂ ಊಟದ ವ್ಯವಸ್ಥೆ ಮಾಡಲು ಸಿದ್ಧತೆ ನಡೆದಿದೆ.
ಊಟ-ಉಪಾಹಾರ ವ್ಯವಸ್ಥೆ
ಇತ್ತ ಪುನೀತ್ ನಿವಾಸವಿರುವ ಬೆಂಗಳೂರಿನ ಸದಾಶಿವನಗರದಲ್ಲಿ ಪೆಂಡಾಲ್ ಹಾಕಲಾಗಿದ್ದು ಅಲ್ಲಿ ಕೂಡ ಆಗಮಿಸುವವರಿಗೆ ಊಟ-ಉಪಾಹಾರ ವ್ಯವಸ್ಥೆ ಮಾಡಲಾಗಿದೆ. ಇನ್ನು ಡಾ ರಾಜ್ ಕುಮಾರ್ ಕುಟುಂಬದ ಕೂಸು ಮೈಸೂರಿನ ಶಕ್ತಿದಾಮದ ಮಕ್ಕಳು ಅಪ್ಪು ಪುಣ್ಯಸ್ಮರಣೆ ಅಂಗವಾಗಿ ಕಾರ್ಯಕ್ರಮ ಏರ್ಪಡಿಸಲಿದ್ದಾರೆ. ಮೈಸೂರಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಪುನೀತ್ ಗತಿಸಿ ಒಂದು ವರ್ಷವಾದರೂ ಕರುನಾಡಿನ ಜನತೆಗೆ ದುಃಖ, ಕಣ್ಣೀರು ಮಾತ್ರ ಕಡಿಮೆಯಾಗಿಲ್ಲ. ಕಳೆದ ಒಂದು ವರ್ಷದಿಂದ ಕಣ್ಣೀರಿನಲ್ಲಿಯೇ ಸಾಗುತ್ತಿದ್ದಾರೆ. ನಟನೆಗಿಂತ ಹೆಚ್ಚಾಗಿ ಸಾಮಾಜಿಕ ಕೆಲಸ ಕಾರ್ಯಗಳಿಂದ ಪುನೀತ್ ಜನತೆಗೆ ಹತ್ತಿರವಾದರು. ಅವರ ಪುಣ್ಯಸ್ಮರಣೆ ಅಂಗವಾಗಿ ರಾಜ್ಯದ ವಿವಿಧ ಕಡೆ ಅನ್ನದಾನ, ರಕ್ತದಾನ ಏರ್ಪಡಿಸಲಾಗಿದೆ.