ಖಾಸಗಿ ಆಸ್ಪತ್ರೆ ಬಿಲ್ ಮಂಡನೆಗೂ ಮುನ್ನ ಮರು ಪರಿಶೀಲನೆ: ಸಿಎಂ ಭರವಸೆ
ಬೆಂಗಳೂರು, ನವೆಂಬರ್ 13 : ಬೆಳಗಾವಿಯಲ್ಲಿ ಖಾಸಗಿ ವೈದ್ಯರ ಪ್ರತಿಭಟನೆ ವಿಚಾರ ಐಎಂಎ ಪದಾಧಿಕಾರಿಗಳೊಂದಿಗೆ ಸಂಧಾನ ಸಭೆ ಸಫಲ. ಸದನದಲ್ಲಿ ಮಸೂದೆ ಮಂಡನೆಗೂ ಮುನ್ನ ಸಭೆ ನಡೆಸಿ ತಿದ್ದುಪಡಿ ತರಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮ್ಮತಿ ಸೂಚಿಸಿದ್ದಾರೆ.
ಬೆಳಗಾವಿ : ಖಾಸಗಿ ವೈದ್ಯರ ಮುಷ್ಕರ, ಸಿಎಂ ಮಧ್ಯಸ್ಥಿಕೆಗೆ ಮನವಿ
ಕರ್ನಾಟಕ ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಕಾಯ್ದೆ 2017ಕ್ಕೆ (ಕೆಪಿಎಂಇ) ಮಾಡಿರುವ ತಿದ್ದುಪಡಿಯಲ್ಲಿನ ಕೆಲವು ಅಂಶಗಳನ್ನು ಕೈಬಿಡುವಂತೆ ಆಗ್ರಹಿಸಿ ಭಾರತೀಯ ವೈದ್ಯ ಸಂಘದ (ಐಎಂಎ) ರಾಜ್ಯ ಘಟಕದ ಸದಸ್ಯರು ಪ್ರತಿಭಟನೆ ನಡೆಸುತ್ತಿದ್ದರು. ಪ್ರತಿಭಟನೆ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ ನಿಮಗೆ ತೊಂದರೆ ಕೊಡುವ ಉದ್ದೇಶ ಸರ್ಕಾರಕ್ಕೆ ಇಲ್ಲ ಹಾಗಾಗಿ ಮುಷ್ಕರ ಹಿಂಪಡೆಯಿರಿ ಎಂದು ಮನವಿ ಮಾಡಿದ್ದಾರೆ.
ಮುಷ್ಕರ ನಿರತ ವೈದ್ಯ ಸಂಘಟನೆಯ ಪದಾಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ ಸಂದರ್ಭದಲ್ಲಿ ಸಿದ್ದರಾಮಯ್ಯನವರು ಮನವಿ ಮಾಡಿದರು. ಅಧಿವೇಶನದಲ್ಲಿ ಸರ್ಕಾರ ಮಂಡಲಿಸಲಿರುವ ವಿಧೇಯಕ ಕುರಿತು ಯಾವುದೇ ಭಯ ಬೇಡ. ವೈದ್ಯರಿಗೆ ತೊಂದರೆ ಅಥವಾ ಕಿರುಕುಳ ನೀಡಲು ಸರ್ಕಾರ ವಿಧೇಯಕ ರೂಪಿಸಿಲ್ಲ.
ಆದರೂ ವಿಧೇಯಕ ಮಂಡನೆಗೆ ಮುನ್ನ ಆರೋಗ್ಯ ಸಚಿವರೊಂದಿಗೆ, ಪದಾಧಿಕಾರಿಗಳ ಜತೆ ಮತ್ತೊಂದು ಸುತ್ತಿನ ಸಮಾಲೋಚನೆ ನಡೆಸುತ್ತೇವೆ. ಬಡವರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಸರ್ಕಾರ ಹೊಸದಾಗಿ ಕಾನೂನು ಜಾರಿಗೆ ತರಲು ಮುಂದಾಗಿದೆ.ವೈದ್ಯರಲ್ಲಿ ಎಲ್ಲರೂ ಕೆಟ್ಟವರಲ್ಲ. ವೈದ್ಯರನ್ನು ನಿಯಂತ್ರಿಸುವ ಉದ್ದೇಶವೂ ನಮಗಿಲ್ಲ. ಹೀಗಾಗಿ ಮುಷ್ಕರ ಹಿಂಪಡೆಯಿರಿ ಎಂದು ಮನವಿ ಮಾಡಿದರು.