ಸಂಪುಟ ವಿಸ್ತರಣೆ ವೇಳೆ ಭದ್ರತಾ ವೈಫಲ್ಯ: ಡಿಜಿಪಿಯಿಂದ ವರದಿ ಕೇಳಿದ ಸಿಎಂ
ಬೆಂಗಳೂರು, ಜೂನ್ 7 : ಸಚಿವ ಸಂಪುಟ ವಿಸ್ತರಣೆ ವೇಳೆ ರಾಜಭವನದಲ್ಲಿ ಸ್ಪೀಕರ್ಗೆ ಆಗಿರುವ ಅವಮಾನ ಹಾಗೂ ಭದ್ರತೆ ವೈಫಲ್ಯ ಕುರಿತಂತೆ ಸಮಗ್ರ ವರದಿ ನೀಡುವಂತೆ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ರಾಜ್ಯದ ಪೊಲೀಸ್ ಮಹಾನಿರ್ದೇಶಕಿ ನೀಲಮಣಿರಾಜು ಅವರಿಗೆ ಸೂಚನೆ ನೀಡಿದ್ದಾರೆ.
ಗುರುವಾರ ಹಿರಿಯ ಪೊಲೀಸ್ ಅಧಿಕಾರಿಗಳ ಜತೆಗೆ ಸಭೆ ನಡೆಸಿದ ಅವರು ಡಿಜಿಪಿ ನೀಲಮಣಿ ರಾಜು ಹಾಗು ಬೆಂಗಳೂರು ಪೊಲೀಸ್ ಆಯುಕ್ತ ಟಿ. ಸುನೀಲ್ ಕುಮಾರ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಸ್ಪೀಕರ್ ರಮೇಶ್ ಕುಮಾರ್ ಸಮಾಧಾನ ಪಡಿಸುವಂತೆ ಸಿಎಸ್ಗೆ ಎಚ್ಡಿಕೆ ಸೂಚನೆ
ಬುಧವಾರ ರಾಜಭವನದಲ್ಲಿ ಸಚಿವ ಸಂಪುಟ ವಿಸ್ತರಣೆ ಕಾರ್ಯಕ್ರಮಕ್ಕೆಂದು ಬಂದಿದ್ದ ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ರಾಜಭವನದ ಒಳಗೆ ಪ್ರವೇಶಕ್ಕೆ ಪೊಲೀಸ್ ಅಧಿಕಾರಿಗಳು ನಿರಾಕರಿಸಿ ಅವಮಾನ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಕರ್ತವ್ಯ ಲೋಪದ ಕುರಿತು ರಮೇಶ್ ಕುಮಾರ್ ರಾಜ್ಯ ಮುಖ್ಯ ಕಾರ್ಯದರ್ಶಿ ಕೆ. ರತ್ನಪ್ರಭಾ ಅವರಿಗೆ ಪತ್ರ ಬರೆದಿದ್ದರು.
ಸ್ಪೀಕರ್ ರಮೇಶ್ ಕುಮಾರ್ ರಾಜಭವನ ಪ್ರವೇಶಿಸಲಾಗದೆ ಹಿಂದಿರುಗಿ ಬಂದಿದ್ದು, ಎಚ್ಡಿ ದೇವೇಗೌಡ ಪತ್ನಿ ಚೆನ್ನಮ್ಮ ನಡೆದುಕೊಂಡು ರಾಜಭವನ ರಸ್ತೆಯಲ್ಲಿ ಹೋಗಿದ್ದು, ಎಂಎಲ್ಸಿ ಶರವಣ ರಾಜಭವನ ಪ್ರವೇಶಿಸಲು ಹರಸಾಹಸ ಪಟ್ಟಿದ್ದು, ಟ್ರಾಫಿಕ್ ನಿಯಂತ್ರಣದಲ್ಲೂ ವಿಫಲವಾದ ಪೊಲೀಸ್ ಇಲಾಖೆ ಭದ್ರತೆ ವೈಫಲ್ಯಕ್ಕೆ ಸೂಕ್ತ ವರದಿ ನೀಡುವಂತೆ ಕುಮಾರಸ್ವಾಮಿ ಖಡಕ್ ಸೂಚನೆ ನೀಡಿದ್ದಾರೆ.