ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ : ಬುಧವಾರ ಕೊನೆ ವಿಚಾರಣೆ
ಬೆಂಗಳೂರು, ಡಿ. 17: ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ನೀಡಿದ ಕೇಂದ್ರದ ಕ್ರಮ ಪ್ರಶ್ನಿಸಿ ಮದ್ರಾಸ್ ಹೈ ಕೋರ್ಟ್ನಲ್ಲಿ ಆರು ವರ್ಷಗಳ ಹಿಂದೆ ಸಲ್ಲಿಸಿದ್ದ ರಿಟ್ ಅರ್ಜಿಯ ಅಂತಿಮ ವಿಚಾರಣೆ ಬುಧವಾರ ನಡೆಯಲಿದೆ.
ರಿಟ್ ಅರ್ಜಿ ಸಲ್ಲಿಸಿದಾಗ ಕರ್ನಾಟಕ ಸರ್ಕಾರ ಸರಿಯಾಗಿ ರಕ್ಷಣಾ ವಾದ ಮಂಡಿಸಿಲ್ಲ ಎಂದು ಆರೋಪಿಸಿ ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಈಗ ಕರ್ನಾಟಕ ಸರ್ಕಾರಕ್ಕೆ ಸಮರ್ಥನೆ ಮಂಡಿಸುವ ಸಮಯ ಎದುರಾಗಿದೆ. ಅಡ್ವೋಕೇಟ್ ಜನರಲ್ ರವಿವರ್ಮಕುಮಾರ್ ಅವರು ರಾಜ್ಯದ ಪರ ವಾದ ಮಂಡಿಸಲು ಚೆನ್ನೈ ನ್ಯಾಯಾಲಯಕ್ಕೆ ಸ್ವತಃ ತೆರಳಿದ್ದಾರೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಲ್. ಹನುಮಂತಯ್ಯ ತಿಳಿಸಿದ್ದಾರೆ.
ಮದ್ರಾಸ್ ನ್ಯಾಯಾಲಯದಲ್ಲಿ ಹಿರಿಯ ವಕೀಲರಾಗಿರುವ ಆರ್. ಗಾಂಧಿ ಅವರು ಕನ್ನಡ ಮತ್ತು ತೆಲುಗು ಭಾಷೆಗಳಿಗೆ ಶಾಸ್ತ್ರೀಯ ಸ್ಥಾನಮಾನ ನೀಡಿರುವುದನ್ನು ಪ್ರಶ್ನಿಸಿ ಮದ್ರಾಸ್ ಹೈ ಕೋರ್ಟ್ನಲ್ಲಿ 2008 ರಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ಕನ್ನಡ ಮತ್ತು ತೆಲುಗು ಭಾಷೆಗಳು ಅಂತಾರಾಷ್ಟ್ರೀಯ ನಿಯಮದಂತೆ ಶಾಸ್ತ್ರೀಯ ಸ್ಥಾನಮಾನದ ಪಟ್ಟಿಯಲ್ಲಿ ಬರುವುದಿಲ್ಲ ಎಂದು ಆರೋಪಿಸಿದ್ದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಜೊತೆಯಲ್ಲಿ ಪತ್ರಕರ್ತ ದೀಪಕ್ ತಿಮ್ಮಯ್ಯ ಹಾಗೂ ಹಿರಿಯ ವಕೀಲ ಸಿ.ಎಚ್. ಹನುಮಂತರಾಯ ಅವರು ಕನ್ನಡದ ಪರವಾಗಿ ವಾದ ಮಂಡಿಸಿದ್ದರು. ಆಂಧ್ರ ಪ್ರದೇಶ ಅಧಿಕೃತ ಭಾಷೆ ಆಯೋಗವು ಆಂಧ್ರ ಪ್ರದೇಶ ಸರ್ಕಾರದ ಪರವಾಗಿ ವಾದ ಮಂಡಿಸಿತ್ತು.
ಎಚ್. ಹನುಮಂತರಾಯ ಅವರು ಪ್ರಕರಣ ಕುರಿತು ಪ್ರತಿಕ್ರಿಯೆ ನೀಡಿದ್ದು, "ಕನ್ನಡವು ಕೇಂದ್ರದ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ವಿಧಿಸಿರುವ ಎಲ್ಲ ಷರತ್ತುಗಳನ್ನು ಕನ್ನಡ ಭಾಷೆಯು ಮುಟ್ಟುತ್ತದೆ ಎಂದು ತಿಳಿಸಿದ್ದರು.