ಪ್ರೀತಿ ವಿಚಾರದಲ್ಲಿ ಗಲಾಟೆ, ಎಸ್ಎಸ್ಎಲ್ಸಿ ವಿದ್ಯಾರ್ಥಿಯ ಇರಿದು ಕೊಲೆ
ಬೆಂಗಳೂರು, ಫೆಬ್ರವರಿ 28: ಮಕ್ಕಳ ನಡುವೆ ಪ್ರೀತಿ ವಿಚಾರದಲ್ಲಿ ಎದ್ದ ಗಲಾಟೆಯೊಂದು ಕೊಲೆಯಲ್ಲಿ ಅಂತ್ಯವಾದ ದುರಂತ ಘಟನೆ ಬೆಂಗಳೂರಿನ ಯಲಹಂಕದಲ್ಲಿ ನಡೆದಿದೆ.
ಯಲಹಂಕ ಸರಕಾರಿ ಸಂಯುಕ್ತ ಕಾಲೇಜಿನ ವಾರ್ಷಿಕೋತ್ಸವದ ದಿನ ತಂಡ ಕಟ್ಟಿಕೊಂಡು ಬಂದು ಹಳೆ ವಿದ್ಯಾರ್ಥಿಗಳಿಬ್ಬರು ಹರ್ಷ (15) ಎನ್ನುವ 10ನೇ ತರಗತಿ ವಿದ್ಯಾರ್ಥಿಯನ್ನು ಇರಿದು ಕೊಂದಿದ್ದಾರೆ. ಈತ ಯಲಹಂಕದ ಸುರಭಿ ಲೇಔಟ್ ನಿವಾಸಿ ಹಾಲು ವ್ಯಾಪಾರಿ ನಾರಾಯಣಪ್ಪ ಎನ್ನುವವರ ಮಗನಾಗಿದ್ದಾನೆ. ಘಟನೆ ಸಂಬಂಧ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.[ಬೆಂಗಳೂರಿನಲ್ಲಿ ಗಗನಸಖಿಯ ಮೇಲುಡುಪು ಎಳೆದಿದ್ದ ಆರೋಪಿ ಬಂಧನ]

ಕೊಲೆಗೆ ಕಾರಣ:
ಹರ್ಷನ ತರಗತಿಯಲ್ಲಿ ಓದುತ್ತಿರುವ ಬಾಲಕಿಯೋರ್ವಳನ್ನು ಐಟಿಐ ವಿದ್ಯಾರ್ಥಿಯೊಬ್ಬ ತುಂಬಾ ಹಚ್ಚಿಕೊಂಡಿದ್ದ. ಇದೇ ಬಾಲಕಿ ಜತೆ ಹರ್ಷನೂ ಆತ್ಮೀಯನಾಗಿದ್ದ. ಈ ವಿಚಾರ ಇಬ್ಬರ ನಡುವೆ ಮನಸ್ತಾಪಕ್ಕೆ ಕಾರಣವಾಗಿತ್ತು. ಇದರಿಂದ ಆಗಾಗ ಇಬ್ಬರ ಮಧ್ಯೆ ಸಣ್ಣ ಪುಟ್ಟ ಗಲಾಟೆಗಳು ನಡೆಯುತ್ತಿದ್ದವು.[ಬೆಂಗಳೂರು: ಮರ್ಮಾಂಗಕ್ಕೆ ಒದ್ದು ಗಂಡನ ಕೊಲೆ ಮಾಡಿದ್ಲು ಹೆಂಡ್ತಿ]
10 ದಿನಗಳ ಹಿಂದೆ ಹರ್ಷನಿಗೆ ನಾನು ಪ್ರೀತಿಸುತ್ತಿರುವವಳ ಜತೆ ನೀನು ಆತ್ಮೀಯನಾಗಿರುವುದು ಸರಿಯಲ್ಲ ಎಂದು ಎಚ್ಚರಿಕೆ ನೀಡಿದ್ದ. ಹೀಗಿದ್ದೂ ಆತ್ಮೀಯತೆ ಮುಂದುವರಿದಿದೆ. ಜತೆಗೆ ಕಾಲೇಜು ವಾರ್ಷಿಕೋತ್ವದಲ್ಲಿ ಫೂಟ್ಬಾಲ್ ತಂಡವನ್ನು ಗೆಲ್ಲಿಸಿದ್ದಕ್ಕಾಗಿ ಹರ್ಷನಿಗೆ ವೇದಿಕೆಯಲ್ಲಿ ಬಹುಮಾನವನ್ನೂ ನೀಡಲಾಗಿತ್ತು.
ಇದನ್ನೆಲ್ಲಾ ನೋಡಿದ ಐಟಿಐ ವಿದ್ಯಾರ್ಥಿ ವಾರ್ಷಿಕೋತ್ಸವ ಕಾರ್ಯಕ್ರಮದಿಂದ ಹೊರಗೆ ಹೋಗಿ ಗ್ಯಾಂಗ್ ಸಿದ್ದಪಡಿಸಿ ಕಾರ್ಯಕ್ರಮ ಮುಗಿಸಿ ಮನೆಗೆ ಹೋಗುತ್ತಿದ್ದ ಹರ್ಷ ಮತ್ತು ಆತನ ಗೆಳೆಯರ ಮೇಲೆ ದಾಳಿ ಮಾಡಿದ್ದಾನೆ. ಹರ್ಷನ ಎದೆಗೆ ಚಾಕು ಇರಿದಿದ್ದರಿಂದ ಆಸ್ಪತ್ರೆಗೆ ಸಾಗಿಸುವ ವೇಳೆ ಸಾವನ್ನಪ್ಪಿದ್ದಾನೆ. ಹರ್ಷನ ಗೆಳೆಯರಿಗೂ ಗಂಭೀರ ಗಾಯಗಳಾಗಿವೆ.
ಘಟನೆ ತಪ್ಪಿಸಲು ಬೇರೆ ವಿದ್ಯಾರ್ಥಿಗಳು ಕಲ್ಲೆಸೆದಿದ್ದರಿಂದ ದಾಳಿ ಮಾಡಲು ಬಂದ ವಿದ್ಯಾರ್ಥಿಗಳಿಗಳ ತಲೆಗೂ ಗಾಯವಾಗಿದೆ. ಸ್ಥಳದಿಂದ ವಿದ್ಯಾರ್ಥಿಗಳು ತಪ್ಪಿಸಿಕೊಳ್ಳಲು ಯತ್ನಿಸಿದರೂ ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ವಿದ್ಯಾರ್ಥಿಗಳಿಗೆ 18 ವರ್ಷವಾಗದ ಹಿನ್ನಲೆಯಲ್ಲಿ ವಿಚಾರಣೆ ನಂತರ ಮಕ್ಕಳ ಕೇಂದ್ರಕ್ಕೆ ಒಪ್ಪಿಸಲಾಗುವುದು ಎಂದು ಡಿಸಿಪಿ ಲಾಬೂರಾಮ್ ತಿಳಿಸಿದ್ದಾರೆ.












Click it and Unblock the Notifications