ಬೆಂಗಳೂರು ಟೆಕ್ಕಿ ನಿಗೂಢ ನಾಪತ್ತೆ ಪ್ರಕರಣಕ್ಕೆ ಹೊಸ ತಿರುವು
ಬೆಂಗಳೂರು, ಜು.12: ಕಳೆದ ಏಳು ತಿಂಗಳಿನಿಂದ ನಾಪತ್ತೆಯಾಗಿರುವ ಬೆಂಗಳೂರು ಟೆಕ್ಕಿಯನ್ನು ಪತ್ತೆ ಮಾಡುವಂತೆ ಪೋಷಕರು, ಸ್ನೇಹಿತರು ಒಂದೆಡೆ ಒತ್ತಾಯಿಸುತ್ತಿದ್ದರೆ, ಇನ್ನೊಂದೆಡೆ ಆತ ಅಧ್ಯಾತ್ಮ ಕೇಂದ್ರದಲ್ಲಿ ಉಳಿದುಕೊಂಡಿದ್ದಾರೆಂದು ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ.
ಒಎಲ್ಎಕ್ಸ್ನಲ್ಲಿ ಕಾರು ಖರೀದಿಗೆ ಆಸಕ್ತಿ ತೋರಿಸಿದ ಗ್ರಾಹಕನಿಗೆ ಕಾರು ಮಾರಾಟ ಮಾಡಲು ಹೋಗುತ್ತಿರುವುದಾಗಿ ಹೇಳಿ ಹೋಗಿರುವ ಅಜಿತಾಬ್ ಕುರಿತ ಆರು ತಿಂಗಳ ಕಾಲ ನಡೆಸಿದ ಸುದೀರ್ಘ ತನಿಖೆಯಲ್ಲಿ ಸಣ್ಣ ಸುಳಿವು ಕೂಡ ದೊರೆತಿಲ್ಲ. ಆತ ತೆಗೆದುಕೊಂಡು ಹೋಗಿದ್ದ ಕಾರು, ಮೊಬೈಲ್ ಕುರಿತಂತೆ ಯಾವುದೇ ಸುಳಿವು ಸಿಗದೆ ನಿಗೂಢವಾಗಿ ಉಳಿದಿದೆ.
200 ದಿನದಿಂದ ನಾಪತ್ತೆ: ಟಿಕ್ಕಿ ಅಜಿತಾಬ್ ಪತ್ತೆಗೆ ಪೋಷಕರ ಅಳಲು
ಆದರೆ ಆತನ ಚಟುವಟಿಕೆಗಳು, ಆಸಕ್ತಿಯ ವಿಷಯಗಳು, ಖಾಸಗಿ ವಿಷಯಗಳು ಹೀಗೆ ಪ್ರತಿಯೊಂದು ಮಾಹಿತಿಯನ್ನು ಸಂಗ್ರಹಿಸಿ ಮೌಲ್ಯಮಾಪನ ಮಾಡಿದಾಗ ಆತ ಅಧ್ಯಾತ್ಮದ ಬಗ್ಗೆ ಒಲವು ಹೊಂದಿರುವುದು ಸ್ನೇಹಿತರ ವಿಚಾರಣೆಯಲ್ಲಿ ಗೊತ್ತಾಗಿದೆ.
ಅಲ್ಲದೆ ಕುಟುಂಬದಿಂದ ದೂರ ಇರುವ ಉದ್ದೇಶದಿಂದ ಎಲ್ಲೋ ಒಂದು ಕಡೆ ವಾಸಿಸುತ್ತಿರಬಹುದು ಎಂದು ಸಿಐಡಿ ಮೂಲಗಳು ತಿಳಿಸಿವೆ.
ಅಧ್ಯಾತ್ಮ ಕೇಂದ್ರಗಳು ಹಾಗೂ ಆಶ್ರಮಗಳ ಕುರಿತು ಸ್ನೇಹಿತರು ಸಹೋದ್ಯೋಗಿಗಳ ಬಳಿ ಅಜಿತಾಬ್ ಹೇಳಿಕೊಳ್ಳುತ್ತಿದ್ದರು. ಅಲ್ಲದೇ, ನೀವು ಕೂಡ ಅಧ್ಯಾತ್ಮ ಚಿಂತನೆ ಮಾಡಿ ಎಂದು ಸಲಹೆ ನೀಡುತ್ತಿದ್ದರು ಎಂದು ತಿಳಿದುಬಂದಿದೆ.