ಬಿಎಸ್ವೈ ವಿರುದ್ಧ ಸಿಐಡಿ ತನಿಖೆಗೆ ಆದೇಶಿಸಿದ ಸಿದ್ದರಾಮಯ್ಯ
ಬೆಂಗಳೂರು, ನ.8 : ಸಿಎಂ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಕೆಜೆಪಿ ಅಧ್ಯಕ್ಷ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಂಕಷ್ಟ ಎದುರಾಗಿದೆ. ಬಹುಕೋಟಿ ಬೆಲೆಯ ರೂಪೇನ ಅಗ್ರಹಾರ ಡಿನೋಟಿಫಿಕೇಷನ್ ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಸಿಐಡಿಗೆ ವಹಿಸಿದೆ.
ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದಾಗ ನಡೆದ ಸಾಲು-ಸಾಲು ಡಿನೋಟಿಫಿಕೇಷನ್ ಪ್ರಕರಗಣಗಳ ಕುರಿತು ದಾಖಲಾದ ಖಾಸಗಿ ದೂರುಗಳ ಅನ್ವಯ ಲೋಕಾಯುಕ್ತ ತನಿಖೆ ನಡೆದಿದ್ದು, ಆದರೆ, ಮೊದಲ ಬಾರಿಗೆ ಸ್ವಯಂ ಪ್ರೇರಣೆಯಿಂದ ರೂಪೇನ ಅಗ್ರಹಾರ ಡಿನೋಟಿಫಿಕೇಷನ್ ಪ್ರಕರಣವನ್ನು ಸರ್ಕಾರ ಸಿಐಡಿಗೆ ವಹಿಸುವ ಮೂಲಕ ಯಡಿಯೂರಪ್ಪ ಅವರಿಗೆ ಸಂಕಷ್ಟ ತಂದಿಟ್ಟಿದೆ.

ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಬಹುಕೋಟಿ ಬೆಲೆಯ ರೂಪೇನ ಅಗ್ರಹಾರದ 1.1 ಎಕರೆ ಭೂಮಿಯನ್ನು ಡಿನೋಟಿಫೈ ಮಾಡಿದ್ದರು. ದಾಖಲೆಗಳನ್ನು ಪೋರ್ಜರಿ ಮಾಡಿ ಡಿನೋಟಿಫೈ ಮಾಡಲಾಗಿದೆ ಎಂದು ನಗರಾಭಿವೃದ್ಧಿ ಇಲಾಖೆ ವಿಧಾನಸೌಧ ಠಾಣೆಯಲ್ಲಿ ಪಕ್ರರಣ ದಾಖಲಿಸಿತ್ತು. ಅದರ ಕುರಿತು ಎಫ್ಐಆರ್ ಸಹ ದಾಖಲು ಮಾಡಲಾಗಿತ್ತು. ಸದ್ಯ ಈ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸುವ ಮೂಲಕ ಯಡಿಯೂರಪ್ಪ ವಿರುದ್ಧ ತನಿಖಾಸ್ತ್ರದ ಝಳಪಿಸಿದ್ದಾರೆ.
ಸರ್ಕಾರ ತನ್ನ ಆದೇಶದಲ್ಲಿ ರೂಪೇನ ಅಗ್ರಹಾರ ಟಿನೋಟಿಫೈ ಪ್ರಕರಣ ಮತ್ತು ಕಡತ ಟಿಪ್ಪಣಿಯನ್ನು ಪೋರ್ಜರಿ ಮಾಡಿರುವ ಬಗ್ಗೆ ತನಿಖೆ ನಡೆಸುವಂತೆ ಸಿಐಡಿಗೆ ತಿಳಿಸಿದೆ. ಇದರಿಂದ ಮಾಜಿ ಸಿಎಂ ಯಡಿಯೂರಪ್ಪ ಮತ್ತು ಬಿಡಿಎ ಅಧಿಕಾರಿಗಳು ಸಂಕಷ್ಟ ಎದುರಿಸುವಂತೆ ಮಾಡಿದೆ.
ರೂಪೇನ ಅಗ್ರಹಾರದಲ್ಲಿ ಎಚ್ಎಸ್ಆರ್ ಲೇಔಟ್ ನಿರ್ಮಾಣಕ್ಕಾಗಿ ಭೂ ಸ್ವಾಧೀನ ಮಾಡಿಕೊಂಡಿದ್ದ ಭೂಮಿಯಲ್ಲಿ ಒಟ್ಟು 1.2 ಎಕರೆ ಜಮೀನನ್ನು ಭೂ ಸ್ವಾಧೀನದಿಂದ ಕೈ ಬಿಟ್ಟು ಹೊರಡಿಸಿರುವ ಅಧಿಸೂಚನೆಯ ಕಡತದಲ್ಲಿ ಪೋರ್ಜರಿ ಮಾಡಿರುವ ಬಗ್ಗೆ ದೂರು ದಾಖಲಾಗಿತ್ತು. ಈ ಕುರಿತು ಸಿಐಡಿ ತ್ವರಿತ ವಿಚಾರಣೆ ನಡೆಸಬೇಕು, ತನಿಖೆಗೆ ಎಲ್ಲಾ ಇಲಾಖೆಗಳು ಸಹಕರಿಸಬೇಕು ಎಂದು ಆದೇಶಿಸಲಾಗಿದೆ.
ಪ್ರಕರಣವೇನು : ಎಚ್ಎಸ್ಆರ್ ಬಡಾವಣೆ ನಿರ್ಮಾಣಕ್ಕಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) 1986ರಲ್ಲಿ 664.21 ಎಕರೆ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡಿತ್ತು. ಇದರಲ್ಲಿ ರೂಪೇನ ಅಗ್ರಹಾರದ ಸರ್ವೆ ನಂ.31/6ಬಿ ಮತ್ತು 31/1ರ 1.2 ಎಕರೆ ಭೂಮಿಯೂ ಸೇರಿತ್ತು. ಈ ಭೂಮಿಯ ದಾಖಲೆಗಳನ್ನು ಪೋರ್ಜರಿ ಮಾಡಿ ಡಿನೋಟಿಫಿಕೇಷನ್ ಮಾಡಲಾಗಿದೆ ಎಂಬುದು ಆರೋಪ.
ಯಡಿಯೂರಪ್ಪ ತಿರುಗೇಟು : ರೂಪೇನ ಅಗ್ರಹಾರ ಡಿನೋಟಿಫಿಕೇಷನ್ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿರುವ ರಾಜ್ಯ ಸರ್ಕಾರದ ಕ್ರಮ ವೈಯಕ್ತಿಕ ದ್ವೇಷದಿಂದ ಕೂಡಿದೆ ಎಂದು ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ನಾನು ಸಿಎಂ ಸ್ಥಾನದಿಂದ ಕೆಳಗಿಳಿದ ತಕ್ಷಣ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಈ ಕುರಿತು ಪತ್ರ ಬರೆದು ಮಾಹಿತಿ ನೀಡಿದ್ದೆ. ಆಗ ಕ್ರಮ ಕೈಗೊಂಡಿಲ್ಲ. ಸದ್ಯ ವೈಯಕ್ತಿಕ ದ್ವೇಷಕ್ಕಾಗಿ ಸಿದ್ದರಾಮಯ್ಯ ಸಿಐಡಿ ತನಿಖೆಗೆ ಆದೇಶಿಸಿದ್ದಾರೆ ಎಂದು ಆರೋಪಿಸಿದ್ದಾರೆ.












Click it and Unblock the Notifications