ಬೈದನೆಂದು ಗೆಳೆಯನ ಮಗುವನ್ನೇ ಅಪಹರಿಸಿದ ಪೇಂಟರ್!
ಬೆಂಗಳೂರಿನಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದ ಆತ ದುಡ್ಡುಕಾಸಿನ ವಿಚಾರದಲ್ಲಿ ಮೋಸ ಮಾಡಲು ಮುಂದಾದ. ಜತೆಗಿದ್ದವನಿಗೆ ಇದು ಗೊತ್ತಾಯಿತು. ಬೈದು ಬುದ್ಧಿ ಹೇಳಿದ್ದಕ್ಕೆ ಜತೆಗಾರನ ಮಗುವನ್ನೇ ಅಪಹರಿಸಿದ ವರದಿಯಿದು.
ಬೆಂಗಳೂರು, ಏಪ್ರಿಲ್ 17: ಒಟ್ಟಿಗೆ ಕೆಲಸ ಮಾಡುತ್ತಿದ್ದವರ ಮಧ್ಯೆ ವೈಮನಸ್ಯ ಬಂದರೆ ಕೆಲವೊಮ್ಮೆ ಅದೆಂಥ ಅನಾಹುತ ಮಾಡುತ್ತದೆ ಅದಕ್ಕೆ ಈ ವರದಿ ಸಾಕ್ಷಿಯಾಗಿದೆ. ಇಬಾದ್ ರೆಹಮತ್ ಹಾಗೂ ಶಂಶಾದ್ ಅಲಿ ಇಬ್ಬರೂ ಉತ್ತರಪ್ರದೇಶದವರು. ಒಟ್ಟಿಗೆ ಪೇಂಟಿಂಗ್ ಕಾಟ್ರ್ಯಾಕ್ಟ್ ಮಾಡಿಕೊಂಡಿದ್ದವರು.
ಈಚೆಗೆ ಒಂದು ಕಾಂಟ್ರ್ಯಾಕ್ಟ್ ಕೆಲಸದಲ್ಲಿ ಶಂಶಾದ್ ಅಲಿ, 20 ಸಾವಿರ ಹಣ ಬಂದ ಕಡೆ 10 ಸಾವಿರ ಎಂದು ಸುಳ್ಳು ಹೇಳಿದ್ದಾನೆ. ಇದು ಇಬಾದ್ ರೆಹಮತ್ ಗೆ ಗೊತ್ತಾಗಿದೆ. ಆ ನಂತರ, ಇನ್ನೊಂದು ಸಲ ಹೀಗೆ ಮಾಡಬೇಡ ಎಂದು ಬೈದಿದ್ದಾನೆ. ತನ್ನನ್ನು ಬೈದನಲ್ಲ ಎಂಬ ಕಾರಣಕ್ಕೆ ರೆಹಮತ್ ನ ಮಗುವನ್ನೇ ಅಪಹರಿಸಿದ ಶಂಶಾದ್, 50 ಸಾವಿರ ರುಪಾಯಿ ನೀಡುವಂತೆ ಬೆದರಿಕೆಯೊಡ್ಡಿದ್ದಾನೆ.[ಜನಶ್ರೀ ನ್ಯೂಸ್ ಚಾನಲ್ ಸಿಇಒ ವಿರುದ್ಧ ಮತ್ತೊಂದು ಆರೋಪ]
ಆ ಮಗುವನ್ನು ರೈಲಿನಲ್ಲಿ ಉತ್ತರಪ್ರದೇಶಕ್ಕೆ ಕರೆದೊಯ್ದಿದ್ದಾನೆ. ಈ ಮಧ್ಯೆ ಇಬಾದ್ ರೆಹಮತ್ ಹೆಣ್ಣೂರು ಠಾಣೆಗೆ ದೂರು ನೀಡಿದ್ದು, ಪೊಲೀಸರು ಶಂಶಾದ್ ಅಲಿ ಊರಿಗೆ ಹೋಗಿ ಮಗುವನ್ನು ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿ ಶಂಶಾದ್ ಅಲಿ ತಪ್ಪಿಸಿಕೊಂಡಿದ್ದಾನೆ. ಆದರೆ ಮೂರು ವರ್ಷದ ಯೆಹತೇಶ್ ಅಹ್ಮದ್ ನನ್ನು ರಕ್ಷಿಸಲಾಗಿದೆ.