Bengaluru Suburban Railway: ಮಲ್ಲಿಗೆ ಕಾರಿಡಾರ್ನಲ್ಲಿ ಸಂಚಾರ ಯಾವಾಗ?
ಬೆಂಗಳೂರು, ನವೆಂಬರ್ 03: ಬೆಂಗಳೂರು ನಗರದ ಸಂಚಾರ ದಟ್ಟಣೆ ಸಮಸ್ಯೆಗೆ ಬೆಂಗಳೂರು ಉಪ ನಗರ ರೈಲು ಯೋಜನೆ ಪರಿಹಾರ ಎಂದು ಅಂದಾಜಿಸಲಾಗಿದೆ. ಕರ್ನಾಟಕ ರೈಲು ಮೂಲಸೌಲಭ್ಯ ಅಭಿವೃದ್ಧಿ ಕಂಪನಿ ನಿಯಮಿತ (ಕೆ-ರೈಡ್) ಮೂಲಕ ಒಟ್ಟು ನಾಲ್ಕು ಕಾರಿಡಾರ್ಗಳಲ್ಲಿ ಸಬ್ ಅರ್ಬನ್ ರೈಲು ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ನಾಲ್ಕು ಕಾರಿಡಾರ್ಗಳ ಪೈಕಿ ಕಾರಿಡಾರ್-2 ಕಾಮಗಾರಿ ಹೆಚ್ಚು ಪೂರ್ಣವಾಗಿದ್ದು, ಇದೇ ಮೊದಲು ಸಂಚಾರಕ್ಕೆ ಮುಕ್ತವಾಗುವ ನಿರೀಕ್ಷೆ ಇದೆ.
ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಕಾರಿಡಾರ್-2 (ಮಲ್ಲಿಗೆ) ಮಾರ್ಗದ ಕಾಮಗಾರಿ ಪರಿಶೀಲನೆ ನಡೆಸಿದರು. ಕನಕನಗರ ರೈಲ್ವೆ ಗೇಟ್ ಬಳಿ ಅವರು ಅಧಿಕಾರಿಗಳ ಜೊತೆ ಯೋಜನೆಯು ಪ್ರಗತಿ ಪರಿಶೀಲಿಸಿದರು. ಕನಕನಗರ ಮತ್ತು ಹೆಬ್ಬಾಳ ನಡುವೆ ಆರು ಲೈನ್ ಕ್ರಾಸಿಂಗ್ ಯೋಜಿಸಲಾಗಿದೆ. ಇದರ ಕಾಮಗಾರಿ ವೀಕ್ಷಿಸಿದರು.

ಅತಿ ಹೆಚ್ಚು ಜನಸಂದಣಿ ಇರುವ ಪ್ರದೇಶದಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಾಣ ಮಾಡುವುದು ಕಷ್ಟ. ಇಂತಹ ಜಾಗದಲ್ಲಿ ಲೈನ್ ಕ್ರಾಸಿಂಗ್ ಈ ಸಮಸ್ಯೆಗೆ ಪರಿಹಾರವಾಗಿದೆ ಎಂದು ಕೆ-ರೈಡ್ ಅಧಿಕಾರಿಗಳು ಹೇಳಿದ್ದಾರೆ. ಮಲ್ಲಿಗೆ ಕಾರಿಡಾರ್ ಬೈಯ್ಯಪ್ಪನಹಳ್ಳಿ-ಯಶವಂತಪುರ-ಚಿಕ್ಕಬಾಣಾವರ ಸಂಪರ್ಕಿಸುತ್ತದೆ. 25.01 ಕಿ. ಮೀ. ಮಾರ್ಗ ಇದಾಗಿದೆ.
ಯೋಜನೆಯಂತೆ ಕಾಮಗಾರಿ ಸಾಗಿದೆ: ಮಲ್ಲಿಗೆ ಕಾರಿಡಾರ್ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಶಾಲಿನಿ ರಜನೀಶ್ ಯೋಜನೆಯಂತೆ ಕಾಮಗಾರಿ ನಡೆಯುತ್ತಿದೆ. ಮೊದಲ ಹಂತದಲ್ಲಿ ಬೆಂಗಳೂರು ಉಪನಗರ ರೈಲು ಯೋಜನೆ (ಬಿಎಸ್ಆರ್ಪಿ) ತನ್ನ ಕಾಮಗಾರಿ ಪೂರ್ಣಗೊಳಿಸಲಿದೆ ಎಂದರು.
ಎರಡನೇ ಹಂತದಲ್ಲಿ ಭಾರತೀಯ ರೈಲ್ವೆ ತನ್ನ ರೈಲುಗಳನ್ನು ಈ ಹಳಿಗಳ ಮೇಲೆ ಓಡಿಸಲಿದೆ. ಮೂರನೇ ಹಂತದಲ್ಲಿ ರೈಲುಗಳ ಸಂಚಾರಕ್ಕೆ ತೊಂದರೆ ಆಗದಂತೆ ಭಾರತೀಯ ರೈಲ್ವೆ & ಬಿಎಸ್ಆರ್ಪಿ ರೈಲುಗಳ ಮಾರ್ಗವನ್ನು ಪ್ರತ್ಯೇಕಿಸಲಾಗುತ್ತದೆ. 4ನೇ ಹಂತದಲ್ಲಿ ಬಿಎಸ್ಆರ್ಪಿ ರೈಲುಗಳ ಸಂಚಾರ ಆರಂಭಿಸಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮುಖ್ಯ ಕಾರ್ಯದರ್ಶಿಗಳು ಕೆ-ರೈಡ್ ವ್ಯವಸ್ಥಾಪಕ ನಿರ್ದೇಶಕಿ ಎನ್. ಮಂಜುಳಾ ಮತ್ತು ಯೋಜನೆಯ ಗುತ್ತಿಗೆಯನ್ನು ಪಡೆದಿರುವ ಎಲ್ & ಟಿ ಕಂಪನಿಗೆ ನಿಗದಿತ ಗಡುವಿನಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದು ಸೂಚನೆ ಕೊಟ್ಟಿದ್ದಾರೆ.
ಬೆಂಗಳೂರು ಉಪನಗರ ರೈಲು ಯೋಜನೆ (ಬಿಎಸ್ಆರ್ಪಿ)ಯನ್ನು ಕರ್ನಾಟಕ ರೈಲು ಮೂಲಸೌಲಭ್ಯ ಅಭಿವೃದ್ಧಿ ಕಂಪನಿ ನಿಯಮಿತ (ಕೆ-ರೈಡ್) ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ. ಸುಮಾರು 149 ಕಿ. ಮೀ. ಮಾರ್ಗದ ಬಿಎಸ್ಆರ್ಪಿ ಯೋಜನೆ 4 ಕಾರಿಡಾರ್ 64 ನಿಲ್ದಾಣಗಳನ್ನು ಒಳಗೊಂಡಿದೆ.
ಕಾರಿಡಾರ್ 2, 4 ಮಲ್ಲಿಗೆ, ಕನಕ 2025 ಡಿಸೆಂಬರ್ಗೆ ಪೂರ್ಣಗೊಳ್ಳಬೇಕು ಎಂದು ಗಡುವು ನೀಡಲಾಗಿದೆ. ಎಲ್ & ಟಿ ಕಂಪನಿಗೆ ಎರಡು ಕಾರಿಡಾರ್ ನಿರ್ಮಾಣದ ಟೆಂಡರ್ ನೀಡಲಾಗಿದೆ. ಉಳಿದ ಎರಡು ಕಾರಿಡಾರ್ಗಳಾದ ಸಂಪಿಗೆ, ಪಾರಿಜಾತ ಪೂರ್ಣಗೊಳ್ಳಲು ಇನ್ನಷ್ಟು ಸಮಯಬೇಕಿದೆ.
ರಾಜ್ಯ ಸರ್ಕಾರ 2028ರ ಅಂತ್ಯಕ್ಕೆ ಸಬ್ ಸರ್ಬನ್ ರೈಲು ಯೋಜನೆ 4 ಕಾರಿಡಾರ್ಗಳಲ್ಲಿ ಸಂಚಾರ ಆರಂಭವಾಗಬೇಕು ಎಂಬ ಗುರಿಯನ್ನು ಹಾಕಿಕೊಂಡಿದೆ. ಎರಡು ಕಾರಿಡಾರ್ನ ಟೆಂಡರ್ ಅನ್ನು ಪ್ರತಿಷ್ಠಿತ ಎಲ್ & ಟಿ ಪಡೆದುಕೊಂಡಿದ್ದು, ಈಗಾಗಲೇ ಕಾಮಗಾರಿ ಆರಂಭಿಸಿದೆ.
ಸದ್ಯ ಬೈಯಪ್ಪನಹಳ್ಳಿ-ಚಿಕ್ಕಬಣಾವರ ನಡುವಿನ 'ಮಲ್ಲಿಗೆ' ಮಾರ್ಗದ ಕಾಮಗಾರಿ ಚುರುಕಿನಿಂದ ಸಾಗಿದೆ. ಈ ಮಾರ್ಗ ನಿರ್ಮಾಣಕ್ಕಾಗಿ ನೈಋತ್ಯ ರೈಲ್ವೆ 157 ಎಕರೆ ಭೂಮಿಯನ್ನು ಕೆ-ರೈಡ್ಗೆ ಹಸ್ತಾಂತರ ಮಾಡಿದೆ.
ಕಾರಿಡಾರ್-2 'ಮಲ್ಲಿಗೆ' ಬೈಯಪ್ಪನಹಳ್ಳಿ, ಬಾಣಸವಾಡಿ, ನಾಗವಾರ, ಹೆಬ್ಬಾಳ, ಯಶವಂತಪುರ, ಜಾಲಹಳ್ಳಿ, ಶೆಟ್ಟಿಹಳ್ಳಿ ಮೂಲಕ ಚಿಕ್ಕಬಣಾವರ ತಲುಪಲಿದೆ. ಮಾರ್ಗದಲ್ಲಿ ಒಟ್ಟು 12 ನಿಲ್ದಾಣಗಳನ್ನು ಅಂತಿಮಗೊಳಿಸಲಾಗಿದೆ.












Click it and Unblock the Notifications