ಮಲ್ಲತ್ತಹಳ್ಳಿ ಕೆರೆಯ ಸಮಗ್ರ ಅಭಿವೃದ್ಧಿ ಕಾಮಗಾರಿಯ ಶಂಕುಸ್ಥಾಪನೆ: ಡಿಕೆ ಸುರೇಶ್ಗೆ ಸಿಎಂ ಟಾಂಗ್
ಬೆಂಗಳೂರು, ಅಕ್ಟೋಬರ್ 03: ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆಯದಲ್ಲಿ ಇಂದು ಮುಖ್ಯಮಂತ್ರಿ ಬಸವರಾಜ ಎಂ. ಬೊಮ್ಮಾಯಿ ಅವರು ಭಾಗವಹಿಸಿ ಮಲ್ಲತ್ತಹಳ್ಳಿ ಕೆರೆಯ ಸಮಗ್ರ ಅಭಿವೃದ್ಧಿ ಕಾಮಗಾರಿಯ ಶಂಕುಸ್ಥಾಪನೆ ನೆರವೇರಿಸಿದರು. ಕಾಮಗಾರಿ ಉದ್ಘಾಟಿಸಿದ ಮುಖ್ಯಮಂತ್ರಿ ಬೊಮ್ಮಾಯಿ ಕಾಮಗಾರಿ ನಕ್ಷೆ ವೀಕ್ಷಿಸಿದರು.
ಸಚಿವ ಮುನಿರತ್ನ, ಕಂದಾಯ ಸಚಿವ ಆರ್.ಅಶೋಕ್, ಸಂಸದ ಡಿಕೆ ಸುರೇಶ್, ಭೈರತಿ ಬಸವರಾಜು, ಬಿಬಿಎಂಪಿ ಕಮಿಷನರ್ ಗೌರವ್ ಗುಪ್ತಾ ಉಪಸ್ಥಿತಿ ಇದ್ದರು. ಈ ಬಳಿಕ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಎಂ. ಬೊಮ್ಮಾಯಿ ಡಿ ಕೆ ಸುರೇಶ್ಗೆ ಟಾಂಗ್ ಕೊಟ್ಟರು.
"ಡಿ ಕೆ ಸುರೇಶ್ ನನ್ನ ಆತ್ಮೀಯ ಸ್ನೇಹಿತರು. ರಾಜಕೀಯ ಎದುರಾಳಿಯೂ ಹೌದು. ಬೈರತಿ ಬಸವರಾಜ ಹಾಗೂ ಮುನಿರತ್ನ ಬಂದುದ್ದಕ್ಕೆ ಮಂತ್ರಿ ಆಗಲು ಬಿಜೆಪಿಗೆ ಹೋಗಿದ್ದಾರೆ ಎಂದು ಡಿ ಕೆ ಸುರೇಶ್ ಹೇಳಿದರು. ಆದರೆ ನಿಜವಾಗಿ ಅವರಿಬ್ಬರು ತಮ್ಮ ರಾಜಕೀಯ ಭವಿಷ್ಯ ಅಡವಿಟ್ಟು ರಿಸ್ಕ್ ತೆಗೆದುಕೊಂಡು, ಜನರಿಗಾಗಿ ಬಿಜೆಪಿಗೆ ಬಂದರು. ಕಾಂಗ್ರೆಸ್ನಲ್ಲಿಯೇ ಇದ್ದರೆ ಕ್ಷೇತ್ರದ ಅಭಿವೃದ್ದಿ ಸಾಧ್ಯವಿಲ್ಲ ಎಂದು ಬಿಜೆಪಿಗೆ ಬಂದರು. ಇನ್ನು ಅದೇನೇ ಇದ್ದರೂ ಜನರ ನಿರ್ಧಾರವೇ ಅಂತಿಮ," ಎಂದು ಹೇಳಿದ್ದಾರೆ.

"ಡಿ.ಕೆ ಸುರೇಶ್ ಅವರೇ ನಾವು ಇಲ್ಲಿ ಗ್ರೇಡ್ ಶಂಕುಸ್ಥಾಪನೆ ಮಾಡುತ್ತಿದ್ದೇವೆ. ನಮ್ಮ ಗ್ರೇಡ್ ಗಳನ್ನು ಪಕ್ಕಕ್ಕೆ ಇಟ್ಟರೇ ಅಭಿವೃದ್ಧಿ ಕಾಮಗಾರಿಗಳು ಬೇಗ ಆಗಲಿವೆ. ಒಂದು ತಿಂಗಳು ಜನರಿಗಾಗಿ ಅಭಿವೃದ್ಧಿ ಕೆಲಸ ಮಾಡೋಣ. ಕೊನೆಯ ಒಂದು ತಿಂಗಳು ರಾಜಕಾರಣ ಮಾಡೋಣ. ಘೋಡಾ ಹೈ, ಮೈದಾನಾ ಹೈ. ಎಲ್ಲವನ್ನೂ ಜನರೇ ನಿರ್ಧಾರ ಮಾಡ್ತಾರೆ," ಎಂದು ಟಾಂಗ್ ನೀಡಿದರು.
"ನಾನು ಇಂದು ಮಲ್ಲತ್ತಹಳ್ಳಿ ಕೆರೆ ಅಭಿವೃದ್ಧಿ ಕಾಮಗಾರಿ ಶಂಕುಸ್ಥಾಪನೆಗೆ ಬಂದಿದ್ದೇನೆ. ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಎಲ್ಲಾ ಸಂಪುಟದ ಸಹೋದ್ಯೋಗಿಗಳೇ, ನನ್ನ ಸ್ನೇಹಿತರು ರಾಜಕೀಯ ಪ್ರತಿಸ್ಪರ್ಧಿಯು ಆದ ಡಿಕೆ ಸುರೇಶ್ ಅವರೇ," ಎಂದು ಹೇಳಿ ಮುಖ್ಯಮಂತ್ರಿ ತನ್ನ ಭಾಷಣವನ್ನು ಆರಂಭ ಮಾಡಿದರು.
"ಈ ಕೆರೆಯ ಅಭಿವೃದ್ಧಿ ಬಹಳ ವರ್ಷಗಳ ಹಿಂದಿನ ಕನಸು ಆಗಿದೆ. ಮಲ್ಲತ್ತಹಳ್ಳಿ ಕೆರೆಯನ್ನು ಈ ಹಿಂದೆ ಜೆ ಹೆಚ್ ಪಾಟೇಲ್ ಸಿಎಂ ಆಗಿದ್ದ ಸಂದರ್ಭ ಮಲ್ಲತ್ತಹಳ್ಳಿ ಕೆರೆಯ ಅಭಿವೃದ್ಧಿ ಪ್ರಾರಂಭವಾಗಿತ್ತು. ಆ ಸಂದರ್ಭದಲ್ಲಿ ಅಶೋಕ್ ಈ ಭಾಗದ ಶಾಸಕರಾಗಿದ್ದರು. ಪ್ರಸ್ತುತ ಮುಖ್ಯವಾಗಿ ಬೆಂಗಳೂರಿನಲ್ಲಿ ಕೊಳಚೆ ನೀರಿನಿಂದ ಕೆರೆಗಳು ಮುಕ್ತಿ ಪಡೆಯಬೇಕು. ಈ ವಿಚಾರಕ್ಕೆ ನಾವು ಮೊದಲ ಆದ್ಯತೆ ಕೊಡುತ್ತೇವೆ," ಎಂದು ಮುಖ್ಯಮಂತ್ರಿ ಭರವಸೆ ನೀಡಿದರು.

"ಮಲ್ಲತ್ತಹಳ್ಳಿ ಕೆರೆ 71 ಎಕರೆ ವಿಸ್ತೀರ್ಣವನ್ನು ಹೊಂದಿದ್ದು ಇದರ ಅಭಿವೃದ್ಧಿಗೆ ಸರ್ಕಾರ 81 ಕೋಟಿ ನೀಡುತ್ತಿದೆ. ಈ ಕೆರೆಯು ವಾಕಿಂಗ್ ಪಾಥ್, ಉದ್ಯಾನವನ ಸೇರಿ ಎಲ್ಲಾ ಒಳಗೊಂಡ ಸುಂದರ ಕೆರೆ ಆಗಲಿದೆ. ಆ ಕಾರ್ಯವನ್ನು ಸಚಿವ ಮುನಿರತ್ನ ಮಾಡುತ್ತಾರೆ," ಎಂದು ವಿಶ್ವಾಸ ವ್ಯಕ್ತಪಡಿಸಿದರು.
"ಈ ಹಿಂದೆ ಏಕೆ ಮೂರು ಭಾರಿ ಗುದ್ದಲಿ ಪೂಜೆ ಆಯಿತು ಎಂದು ನನಗೆ ಗೊತ್ತಿಲ್ಲ. ಮೊನ್ನೆ ಕ್ಯಾಬಿನೆಟ್ನಲ್ಲಿ ಚರ್ಚೆ ಬಳಿಕ ಈ ಕೆರೆ ಅಭಿವೃದ್ಧಿಗೆ ಮುನಿರತ್ನ ನಿರ್ಧಾರ ಮಾಡಿದ್ದಾರೆ. ಮುನಿರತ್ನ ಅವರಿಗೆ ಒಳ್ಳೆಯದಾಗಲಿ. ಕೆರೆ ಕೂಡ ಸುಂದರವಾಗಿ ನಿರ್ಮಾಣವಾಗಲಿ. ಇಲ್ಲಿನ ಪರಿಸರ ಶುದ್ಧಿ ಆಗಲಿ," ಎಂದು ಮುಖ್ಯಮಂತ್ರಿ ಬಸವರಾಜ ಶುಭ ಹಾರೈಸಿದರು.

2023 ಸಂಕ್ರಾಂತಿಗೆ ಕಾಮಗಾರಿ ಪೂರ್ಣ ಎಂದ ಸಚಿವ ಮುನಿರತ್ನ
"ಈ ಯೋಜನೆ ನನ್ನ ಕನಸು. 2008 ರಲ್ಲಿ ಇಲ್ಲಿ ಒಂದು ಅಪಘಾತವಾಗುತ್ತದೆ. ಅಪಘಾತದಲ್ಲಿ ಮೂರು ಜನ ಸಾವನಪ್ಪಿದ್ದಾರೆ. ಆ ದಿನವೇ ಅಂಡರ್ಪಾಸ್ ಮಾಡಲು ನಿರ್ಮಾಣ ಮಾಡಲಾಗಿತ್ತು ಆದರೆ ಅದು ಆಗಿರಲಿಲ್ಲ. ಇವತ್ತು ನಿಮ್ಮ ಅಮೃತ ಹಸ್ತದಿಂದ ಶಂಕುಸ್ಥಾಪನೆಯಾಗಿದೆ," ಎಂದು ಸಿಎಂಗೆ ಸಚಿವ ಮುನಿರತ್ನ ಅಭಿನಂದನೆ ಸಲ್ಲಿಸಿದರು. "ನಾನು ಶಾಶ್ವತ ಅಲ್ಲ. ಆದರೆ ಅಭಿವೃದ್ಧಿಗಳು ಶಾಶ್ವತ. ಆದ್ದರಿಂದ ಅಭಿವೃದ್ಧಿಗಳಾಗಬೇಕು. 2023 ಸಂಕ್ರಾಂತಿಗೆ ಕಾಮಗಾರಿ ಪೂರ್ಣವಾಗಿ ಚಾಲನೆ ನೀಡಲಾಗುತ್ತದೆ," ಎಂದು ತಿಳಿಸಿದರು.
(ಒನ್ಇಂಡಿಯಾ ಸುದ್ದಿ)












Click it and Unblock the Notifications