ರೈಲು ಸ್ಫೋಟ: ಬೋಗಿಯಲ್ಲಿದ್ದ ಪ್ರಯಾಣಿಕರ ವಿಚಾರಣೆ
ಚೆನ್ನೈ, ಮೇ2- ಬೆಂಗಳೂರು-ಗುವಹಾಟಿ ಎಕ್ಸ್ ಪ್ರೆಸ್ ರೈಲಿನಲ್ಲಿ ಸಂಭವಿಸಿದ ಸ್ಫೋಟದ ಸಂಬಂಧ ತನಿಖಾ ತಂಡಗಳು ತೀವ್ರ ತನಿಖೆ ನಡೆಸುತ್ತಿವೆ. ಬೆಂಗಳೂರಿನಲ್ಲಿಯೇ ಬಾಂಬ್ ಫಿಕ್ಸ್ ಮಾಡಲಾಗಿತ್ತು ಎಂಬ ತರ್ಕದೊಂದಿಗೆ ಕಾರ್ಯಾಚರಣೆಗಿಳಿದಿರುವ ತನಿಖಾಧಿಕಾರಿಗಳು ಸ್ಫೋಟಕ್ಕೆ ತುತ್ತಾದ S 4 ಮತ್ತು S 5 ಬೋಗಿಯಲ್ಲಿ ಪ್ರಯಾಣಿಸಿದ ಅಷ್ಟೂ (72) ಪ್ರಯಾಣಿಕರ ಬಗ್ಗೆ ಸಮಗ್ರ ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಈ ಮಧ್ಯೆ, NSG ತನಿಖೆಗೊಪ್ಪದ ಮುಖ್ಯಮಂತ್ರಿ ಜಯಲಲಿತಾ ಅವರನ್ನು ರಾಜ್ಯದೊಳಕ್ಕೆ ಬಿಟ್ಟುಕೊಂಡಿಲ್ಲವಂತೆ ಎಂಬ ಊಹಾಪೋಹಕ್ಕೆ ಬ್ರೇಕ್ ಬಿದ್ದಿದ್ದು, ಲೆಫ್ಟಿನೆಂಟ್ ಕರ್ನಲ್ ಬಾಲಕೃಷ್ಣ ನೇತೃತ್ವದ ರಾಷ್ಟ್ರೀಯ ಭದ್ರತಾ ಪಡೆ (NSG) ತಂಡವು ಚೆನ್ನೈಗೆ ಬಂದಿಳಿದಿದೆ.

ಭಯೋತ್ಪಾದಕ ಬಗ್ಗೆ ಅನುಕಂಪ ಹೊಂದಿರುವ ಸ್ಲೀಪರ್ ಮಾಡ್ಯೂಲ್ ತಂಡಗಳ ಕೃತ್ಯವಾ ಎಂದೂ ಪೊಲೀಸರು ತನಿಖೆ ನಡೆಸಿದ್ದಾರೆ. ಈ ಮಧ್ಯೆ, ಸ್ಫೋಟದ ಸಂಬಂಧ ಇಬ್ಬರು ಶಂಕಿತ ಉಗ್ರರನ್ನು ಚೆನ್ನೈ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಚೆನ್ನೈನ ಮನ್ನಡಿ ಬ್ರಾಡ್ ವೇ ಪ್ರದೇಶದಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಇಬ್ಬರು ಶಂಕಿತರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಬಂಧಿತರಿಬ್ಬರೂ ಮೊನ್ನೆ ಸೆರೆಸಿಕ್ಕ ಉಗ್ರ ಜಾಹೀರ್ ಹುಸೇನನೊಂದಿಗೆ ಸಂಪರ್ಕ ಹೊಂದಿದ್ದಾರಾ? ಎಂಬುದರ ಬಗ್ಗೆಯೂ ನಡೆದಿದೆ.
ಇನ್ನು, ಬಂಧಿತ ಆರೋಪಿಗಳ ಬೆಂಗಳೂರು ಸಂಪರ್ಕದ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಸಂಬಂಧ ಚೆನ್ನೈ ಸಿಬಿ ಹಾಗೂ ಸಿಐಡಿ ಪೊಲೀಸರು ತಂಡ ಬೆಂಗಳೂರಿಗೆ ಆಗಮಿಸಿದ್ದು, ರೈಲ್ವೆ ನಿಲ್ದಾಣದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸುತ್ತಿದೆ. ಇಬ್ಬರು ಎಸ್ ಪಿಗಳು ಮತ್ತು ಐವರು ಇನ್ಸ್ ಪೆಕ್ಟರ್ ಗಳೂ ಸೇರಿದಂತೆ ತಂಡದಲ್ಲಿ 10 ಮಂದಿ ಇದ್ದಾರೆ. ಈ ಮಧ್ಯೆ ಬೆಂಗಳೂರು ಪೊಲೀಸರು ಸಹ ಶುಕ್ರವಾರ ಬೆಳಗ್ಗೆ ಚೆನ್ನೈಗೆ ತೆರಳಿದ್ದು, ಘಟನಾ ಸ್ಥಳವನ್ನು ಪರಿಶೀಲಿಸುತ್ತಿದ್ದಾರೆ. (ಉಗ್ರ ಹುಸೇನ್ ಬಂಧನಕ್ಕೆ ಕ್ಷಿಪ್ರ ಪ್ರತೀಕಾರ ನಡೆಯಿತೇ?)
ಏಪ್ರಿಲ್ 30ರಂದು ರಾತ್ರಿ 11.30ಕ್ಕೆ ಬೆಂಗಳೂರು ಬಿಟ್ಟಿದ್ದ ಬೆಂಗಳೂರು-ಗುವಹಾಟಿ ಎಕ್ಸ್ ಪ್ರೆಸ್ ರೈಲು ಮಾರನೆಯ ದಿನ ಬೆಳಗ್ಗೆ 7.10ಕ್ಕೆ ಚೆನ್ನೈ ತಲುಪಿತ್ತು. ಆದರೆ ಅದು 6 ಗಂಟೆಗೆ ತಲುಪಬೇಕಿತ್ತು. ಎಕ್ಸ್ ಪ್ರೆಸ್ ರೈಲು ಚೆನ್ನೈ ನಿಲ್ದಾಣಕ್ಕೆ ಬಂದ 5-10 ನಿಮಿಷಗಳ ಬಳಿಕ ಲಘು ಪ್ರಮಾಣದ 2 ಬಾಂಬುಗಳೂ ಸ್ಫೋಟಗೊಂಡು ಸ್ವಾತಿ ಎಂಬ ಯುವ ಟೆಕ್ಕಿಯನ್ನು ಬಲಿ ತೆಗೆದುಕೊಂಡಿತ್ತು.












Click it and Unblock the Notifications