ಕೊರೊನಾ ಲಸಿಕೆ ಹೆಸರಲ್ಲಿ ಬೆಂಗಳೂರು ಉದ್ಯಮಿಗೆ ವಂಚನೆ!
ಬೆಂಗಳೂರು, ಜೂನ್ 28 : ಕೊರೊನಾ ವೈರಸ್ ಸೋಂಕಿಗೆ ಲಸಿಕೆ ಕಂಡು ಹಿಡಿಯಲು ಕಚ್ಚಾ ವಸ್ತು ಪೂರೈಕೆ ಮಾಡುತ್ತೇನೆ ಎಂದು ಹೇಳಿದ ಉದ್ಯಮಿಗೆ ವಂಚನೆ ಮಾಡಿದ ಪ್ರಕರಣ ಬೆಂಗಳೂರಿನಲ್ಲಿ ನಡೆದಿದೆ. 13 ಲಕ್ಷ ಹಣ ಪಡೆದ ಆರೋಪಿಗಳು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ.
ಬೆಂಗಳೂರು ದಕ್ಷಿಣ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ದಾಖಲಾಗಿದೆ. ಅಪರಿಚಿತರ ವಿರುದ್ಧ ಪ್ರಕರಣವನ್ನು ದಾಖಲು ಮಾಡಿಕೊಂಡು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆರೋಪಿಗಳಿಂದ ವಂಚನೆಗೊಳಗಾದ ಉದ್ಯಮಿ ದೂರು ಕೊಟ್ಟಿದ್ದರು.
ಕೊರೊನಾ ಸೋಂಕಿಗೆ ಲಸಿಕೆ ಕಂಡು ಹಿಡಿಯುವ ದ್ರಾವಣ ಖರೀದಿ ಮಾಡುತ್ತೇವೆ ಎಂದು ಹೇಳಿದ್ದ ಅಪರಿಚಿತರು ಉದ್ಯಮಿಯಿಂದ ಭದ್ರತಾ ಠೇವಣಿ ಎಂದು 13 ಲಕ್ಷ ಪಡೆದಿದ್ದರು. ಬಳಿಕ ಅವರು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದು, ಸಂಪರ್ಕಕ್ಕೂ ಸಿಕ್ಕಿಲ್ಲ.

ಏನಿದು ಪ್ರಕರಣ? : ಔಷಧ ತಯಾರಿಕೆಗೆ ದ್ರಾವಣ ತಯಾರು ಮಾಡುವ ನಗರದ ಅಮರನಾಥ್ ಎಂಬ ಉದ್ಯಮಿಗೆ ಆರೋಪಿಗಳು ವಂಚನೆ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಇದ್ದ ಜಾಹೀರಾತು ನೋಡಿ ಹಣ ನೀಡಿದ್ದ ಉದ್ಯಮಿ ವಂಚನೆಗೆ ಒಳಗಾಗಿದ್ದಾರೆ.
ಅಮೆರಿಕದಲ್ಲಿ ಕೊರೊನಾ ಲಸಿಕೆ ಅಭಿವೃದ್ಧಿಪಡಿಸಲಾಗುತ್ತಿದೆ ಅದಕ್ಕೆ ದ್ರಾವಣದ ಅಗತ್ಯವಿದೆ ಎಂದು ಎಂಬ ಜಾಹೀರಾತು ಸಾಮಾಜಿಕ ಜಾಲತಾಣದಲ್ಲಿ ಬಂದಿತ್ತು. ದ್ರಾವಣ ಪೂರೈಕೆ ಮಾಡಿದವರಿಗೆ ಹೆಚ್ಚಿನ ಕಮೀಷನ್ ನೀಡುವುದಾಗಿ ಪ್ರಕಟಿಸಲಾಗಿತ್ತು. ಇದನ್ನು ನೋಡಿದ್ದ ಉದ್ಯಮಿ ದ್ರಾವಣ ಪೂರೈಕೆ ಮಾಡಲು ಒಪ್ಪಿದ್ದರು.
ದ್ರಾವಣ ಪೂರೈಕೆಗೂ ಮುನ್ನ ಭದ್ರತಾ ಠೇವಣಿ ಇಡಬೇಕು ಎಂದು ಹೇಳಿದ ಆರೋಪಿಗಳು 13 ಲಕ್ಷ ಹಣವನ್ನು ಪಡೆದಿದ್ದರು. ಬಳಿಕ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಸಂಪರ್ಕಕ್ಕೆ ಸಿಕ್ಕಿಲ್ಲ ಎಂಬುದು ದೂರು.












Click it and Unblock the Notifications