ಬಿಜೆಪಿ ಕಚೇರಿ ಬಳಿ ಸ್ಫೋಟ : 14 ಜನ ಆರೋಪಿಗಳು
ಬೆಂಗಳೂರು, ಅ.20: ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿ ಬಳಿ ಸಂಭವಿಸಿದ ಬಾಂಬ್ ಸ್ಫೋಟ ಪ್ರಕರಣ ಸಂಬಂಧ 14 ಆರೋಪಿಗಳ ವಿರುದ್ಧ ನಗರ ಪೊಲೀಸರು ನ್ಯಾಯಾಲಯಕ್ಕೆ ಶನಿವಾರ ಆರೋಪ ಪಟ್ಟಿ ಸಲ್ಲಿಸಿದ್ದಾರೆ.
ಸುಮಾರು 6 ತಿಂಗಳುಗಳ ಕಾಲ ತನಿಖೆ ನಡೆಸಿದ ಬಳಿಕ ಪೊಲೀಸರು ಮೂರು ಆವೃತ್ತಿಗಳಲ್ಲಿ 7445 ಪುಟಗಳನ್ನು ಒಳಗೊಂಡ ಆರೋಪ ಪಟ್ಟಿ ಸಲ್ಲಿಸಿದ್ದಾರೆ. 201 ದಾಖಲೆಗಳು, 260 ಸಾಕ್ಷಿಗಳ ವಿವರಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.

ತಮಿಳುನಾಡಿನ ಮಧುರೈ ಮೂಲದ ಬಿಲಾಲ್ ಮಲೀಕ್, ಫಕ್ರುದ್ದೀನ್ ಅಲಿಯಾಸ್ ಪೊಲೀಸ್ ಫಕ್ರುದ್ದೀನ್, ಪನ್ನಾ ಇಸ್ಮಾಯಿಲ್ ಅಲಿಯಾಸ್ ಮಹಮ್ಮದ್ ಇಸ್ಮಾಯಿಲ್ (39) ಸೇರಿ 14 ಮಂದಿ ವಿರುದ್ಧ ಆರೋಪ ಪಟ್ಟಿ ಸಲ್ಲಿಸಲಾಗಿದೆ.
ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 120 (ಬಿ), 121,121 (ಎ), 123,332, 307, 435,201 ಸಿಡಿಮದ್ದು ಬಳಕೆ ಕಾಯಿದೆ 1908 ರ ಉಪ ಸೆಕ್ಷನ್ 3,4,5 ಮತ್ತು 6 ರ ಸಾರ್ವಜನಿಕ ಆಸ್ತಿ-ಪಾಸ್ತಿಗೆ ಹಾನಿ ನಿಯಂತ್ರಣ ಕಾಯಿದೆ 1984 ರ ಉಪ ಸೆಕ್ಷನ್ 4 ಕಾನೂನುಬಾಹಿರ ಚಟುವಟಿಕೆ (ನಿಯಂತ್ರಣ) ಕಾಯಿದೆ 1967 ರ ಉಪ ಸೆಕ್ಷನ್ 10,13,15,16,17,18,19 ಹಾಗೂ 20 ಅನ್ವಯ ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ, ಹೆಚ್ಚುವರಿ ಪೊಲೀಸ್ ಆಯುಕ್ತ (ಅಪರಾಧ) ಪ್ರಣಬ್ಮೊಹಾಂತಿ ಉಸ್ತುವಾರಿಯಲ್ಲಿ ಎಸಿಪಿ ಓಂಕಾರಯ್ಯ ನೇತೃತ್ವದ ವಿಶೇಷ ತಂಡ ಪ್ರಕರಣದ ತನಿಖೆ ನಡೆಸಿದೆ
ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿ ಸಮೀಪ ಏ.17 ರಂದು ಬೆಳಗ್ಗೆ ಬಾಂಬ್ ಸ್ಫೋಟ ನಡೆದಿತ್ತು. ಈ ಘಟನೆಯಲ್ಲಿ ಕೆಎಸ್ ಆರ್ ಪಿ ಪೊಲೀಸ್ ಸಿಬ್ಬಂದಿ, ಇಬ್ಬರು ವಿದ್ಯಾರ್ಥಿನಿಯರು ಸೇರಿದಂತೆ 18 ಮಂದಿ ಗಾಯಗೊಂಡಿದ್ದರು. 23 ವಾಹನಗಳು ಜಖಂಗೊಂಡಿದ್ದರೆ, ಕಾರುಗಳು ಸೇರಿದಂತೆ ಉಳಿದ ವಾಹನಗಳು ಬೆಂಕಿಗೆ ಆಹುತಿಯಾಗಿದ್ದವು. ಘಟನಾ ಸ್ಥಳದ ಸುತ್ತಮುತ್ತಲಿನ 56 ಮನೆಗಳಿಗೆ ಹಾನಿಯಾಗಿತ್ತು. ಸುಮಾರು 50 ಲಕ್ಷ ರೂ. ಮೌಲ್ಯದ ಆಸ್ತಿಪಾಸ್ತಿಯ ನಷ್ಟವಾಗಿತ್ತು.
ಸಿಸಿಬಿ ತನಿಖಾ ತಂಡ ತಮಿಳುನಾಡಿನಲ್ಲಿ ಕಾರ್ಯಾಚರಣೆ ನಡೆಸಿ ಹತ್ತು ಮಂದಿಯನ್ನು ಬಂಧಿಸಿತ್ತು. ಆಂಧ್ರದ ಚಿತ್ತೂರು ಜಿಲ್ಲೆ, ಪುತ್ತೂರಿನ ಬಡಾವಣೆಯೊಂದರಲ್ಲಿ ಅಡಗಿದ್ದ ಫಕ್ರುದ್ದೀನ್, ಬಿಲಾಲ್ ಮಲ್ಲಿಕ್ ಹಾಗೂ ಪನ್ನಾ ಇಸ್ಮಾಯಿಲ್ ತಮಿಳುನಾಡು ಹಾಗೂ ಆಂಧ್ರ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಅ.5 ರಂದು ಸಿಕ್ಕಿಬಿದ್ದರು..
ಈ ಪ್ರಕರಣದಲ್ಲಿ ಬಂಧಿತರಾಗಿರುವ ಹತ್ತು ಮಂದಿ ತಮ್ಮ ವಶದಲ್ಲಿದ್ದು, ಇನ್ನೂ ನಾಲ್ವರು ತಮಿಳುನಾಡು ಪೊಲೀಸರ ವಶದಲ್ಲಿದ್ದಾರೆ. ಶೀಘ್ರವೇ ನ್ಯಾಯಾಲಯದ ಅನುಮತಿ ಪಡೆದು ಅವರನ್ನು ನಗರಕ್ಕೆ ಕರೆತಂದು ವಿಚಾರಣೆ ನಡೆಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ರಾಘವೇಂದ್ರ ಔರಾದ್ ಕರ್ ಹೇಳಿದ್ದಾರೆ.












Click it and Unblock the Notifications