ಬೆಂಗಳೂರಲ್ಲಿ ಹಕ್ಕಿ ಜ್ವರ, ಖಚಿತಪಡಿಸಿದ ಕೇಂದ್ರ ಕೃಷಿ ಇಲಾಖೆ
ಬೆಂಗಳೂರು, ಜನವರಿ 5: ನಗರದ ದಾಸರಹಳ್ಳಿಯಲ್ಲಿ ಹಕ್ಕಿಜ್ವರ ಪತ್ತೆಯಾಗಿರುವುದನ್ನು ಕೇಂದ್ರ ಕೃಷಿ ಇಲಾಖೆ ಖಚಿತಪಡಿಸಿದ್ದು ರಾಜ್ಯ ಸರಕಾರಕ್ಕೆ ಸಹಕಾರ ನೀಡಲು ತಂಡವನ್ನು ಕಳುಹಿಸಿದೆ.
ಭೋಪಾಲ್ ಮೂಲದ ಸಂಸ್ಥೆಯು, 'ಡಿಸೆಂಬರ್ 30ರಂದು ಸಂಗ್ರಹಿಸಿದ ಸ್ಯಾಂಪಲ್ ಗಳಲ್ಲಿ ಹಕ್ಕಿಜ್ವರದ ರೋಗಾಣುಗಳು ಪತ್ತೆಯಾಗಿರುವುದನ್ನು ಖಚಿತಪಡಿಸಿದೆ,' ಎಂಬುದಾಗಿ ಕೇಂದ್ರ ಕೃಷಿ ಇಲಾಖೆ ತನ್ನ ಪ್ರಕಟಣೆಯಲ್ಲಿ ಹೇಳಿದೆ.
ದಾಸರಹಳ್ಳಿಯ ಅಂಗಡಿಯೊಂದರಲ್ಲಿ ಮೊದಲ ಹಕ್ಕಿಜ್ವರ ಪ್ರಕರಣ ಪತ್ತೆಯಾಗಿದೆ. ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆ ಮತ್ತು ಆರೋಗ್ಯ ಇಲಾಖೆ ಜಂಟಿಯಾಗಿ ಇಲ್ಲಿ ಕಾರ್ಯಾಚರಣೆ ಆರಂಭಿಸಿದ್ದು ಸೋಡಿಯಂ ಹೈಪೊಕ್ಲೋರೈಡ್ ನಿಂದ ಕೋಳಿ ಅಂಗಡಿಗಳ ಸ್ವಚ್ಛತೆ ಕಾರ್ಯ ನಡೆಯುತ್ತಿದೆ.
ಈ ಅಂಗಡಿಯ 1 ಕಿ.ಮೀ ಸುತ್ತಳತೆಯಲ್ಲಿ ಬರುವ ಎಲ್ಲಾ ಕೋಳಿಗಳನ್ನು ಕೊಲ್ಲಲಾಗಿದೆ. ಇಲ್ಲಿಯವರೆಗೆ 942 ಕೋಳಿಗಳನ್ನು ಕೊಲ್ಲಲಾಗಿದೆ.

ಇದಲ್ಲದೆ ಸದ್ಯ ದಾಸರಹಳ್ಳಿಯ ಸುತ್ತಲಿನ 1 ರಿಂದ 10 ಕಿ.ಮೀ ಸುತ್ತಳತೆಯಲ್ಲಿ ಅನೇಕ ಸ್ಯಾಂಪಲ್ ಗಳನ್ನು ಪರೀಕ್ಷೆಗೆ ಕಳಿಸಲಾಗಿದೆ. ಸದ್ಯಕ್ಕೆ ಇಲ್ಲಿನ ಕೋಳಿ ಅಂಗಡಿಗಳನ್ನು15 ದಿನಗಳವರಗೆ ಮುಚ್ಚಲು ನಿರ್ದೇಶಿಸಲಾಗಿದೆ.
ಸದ್ಯಕ್ಕೆ ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದೆ. ಅಲ್ಲದೆ ಕರ್ನಾಟಕದ ಬೇರೆ ಯಾವುದೇ ಭಾಗಗಳಿಂದ ಮತ್ತು ದೇಶದ ಇತರ ಪ್ರದೇಶಗಳಿಂದ ಹಕ್ಕಿಜ್ವರದ ಮಾಹಿತಿಗಳು ಬಂದಿಲ್ಲ ಎಂದು ಕೇಂದ್ರ ಕೃಷಿ ಇಲಾಖೆ ಸ್ಪಷ್ಟಪಡಿಸಿದೆ.
"ಹಕ್ಕಿ ಜ್ವರ ಮನುಷ್ಯರಿಗೆ ಹರಡಿಲ್ಲ. ಯಾರೂ ಭೀತಿಗೊಳ್ಳುವ ಆತಂಕವಿಲ್ಲ. ಮುಂಜಾಗ್ರತಾ ಕ್ರಮವಾಗಿ ಕೋಳಿ ಅಂಗಡಿಯವರಿಗೂ ಲಸಿಕೆ ನೀಡಿದ್ದೇವೆ. ಕೋಳಿ ತಿನ್ನುವವರು 60 ಡಿಗ್ರಿಗಿಂತ ಹೆಚ್ಚು ತಾಪಮಾನದಲ್ಲಿ ಕೋಳಿಯನ್ನು ಬೇಯಿಸಿ ತಿನ್ನಬೇಕು. ಆಗ ರೋಗ ಬರುವುದಿಲ್ಲ," ಎಂದು ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆ ನಿರ್ದೇಶಕ ಡಾ. ಬೈರೇಗೌಡ ಹೇಳಿದ್ದಾರೆ.












Click it and Unblock the Notifications