Bengaluru Second Airport: ಹೊಸ ಏರ್ಪೋರ್ಟ್ ನಿರ್ಮಾಣಕ್ಕೆ 3 ಸ್ಥಳಗಳಲ್ಲಿ ಒಂದು ಸ್ಥಳ ಆಯ್ಕೆ: ಅಪ್ಡೇಟ್ ಇಲ್ಲಿದೆ
ಬೆಂಗಳೂರು, ಏಪ್ರಿಲ್ 08: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಈಗಾಗಲೇ ಮೂರು ಸ್ಥಳಗಳನ್ನು ಆಯ್ಕೆ ಕೇಂದ್ರಕ್ಕೆ ಪ್ರಸ್ತಾವನೆಯನ್ನ ಸಲ್ಲಿಸಿದೆ. ಇದರ ಬೆನ್ನಲ್ಲೇ ಇದೀಗ ನಾಗರೀಕ ವಿಮಾನಯಾನ ಇಲಾಖೆ ಅಧಿಕಾರಿಗಳ ತಂಡ ಬೆಂಗಳೂರಿಗೆ ಆಗಮಿಸಿದ್ದು, ಇಂದು (ಏಪ್ರಿಲ್ 08) ನಿಗದಿತ ಮೂರು ಸ್ಥಳಗಳಿಗೆ ಭೇಟಿ ನೀಡಿ ಸಮೀಕ್ಷೆ ನಡೆಸಲಿದೆ.
ಈಗಾಗಲೇ ರಾಜ್ಯ ಸರ್ಕಾರ ಮೂರು ಸ್ಥಳಗಳನ್ನ ಆಯ್ಕೆ ಮಾಡಿದ್ದು. ಆಯ್ಕೆ ಮಾಡಲಾಗಿರುವ ಕನಕಪುರ ರಸ್ತೆಯಲ್ಲಿ ಎರಡು ಸ್ಥಳ ಹಾಗೂ ನೆಲಮಂಗಲ ಹಾಸನ ಹೆದ್ದಾರಿ ಸಮೀಪ ಇನ್ನೊಂದು ಸ್ಥಳಗಳ ಪರಿಶೀಲನೆ ಮಾಡಲಿದೆ. ಯಾವ ಜಾಗದಲ್ಲಿ ಹೊಸ ವಿಮಾನ ನಿಲ್ದಾಣವಾಗಬೇಕು. ರಾಜ್ಯ ಸರ್ಕಾರ ಕೊಟ್ಟ ಮಾಹಿತಿ ಸೇರಿದಂತೆ ಹಲವು ವಿಚಾರಗಳ ಕುರಿತು ಅಧಿಕಾರಿಗಳು ಬುಧವಾರ (ಏಪ್ರಿಲ್ 09) ಕೈಗಾರಿಕ ಸಚಿವ ಎಂ.ಬಿ.ಪಾಟೀಲ್ ಜೊತೆಗೆ ಚರ್ಚಿಸಲಿದ್ದಾರೆ.

ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣಕ್ಕೆ ಸೂಕ್ತವಾದ ಸ್ಥಳ ಗುರುತಿಸಲು ಬಂದಿರುವ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಹಿರಿಯ ಅಧಿಕಾರಿಗಳ ತಂಡಕ್ಕೆ ಕರ್ನಾಟಕ ಕೈಗಾರಿಕಾ ಮೂಲಸೌಕರ್ಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಖುಷ್ಬು ಗೋಯಲ್ ಅವರು ಉದ್ದೇಶಿತ ಮೂರು ಸ್ಥಳಗಳ ಬಗ್ಗೆ ಮಾಹಿತಿ ನೀಡಿದರು. ಈ ತಂಡ ಕನಕಪುರ ರಸ್ತೆಯ ಎರಡು ಮತ್ತು ನೆಲಮಂಗಲ- ಕುಣಿಗಲ್ ರಸ್ತೆಯ ಒಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಿದೆ. ಕೇಂದ್ರ ತಂಡವು ಮೊದಲು ಮಂಗಳವಾರ ಬೆಳಿಗ್ಗೆ ಕನಕಪುರ ರಸ್ತೆ ಕಡೆಯಿಂದ ಸ್ಥಳ ವೀಕ್ಷಣೆ ಆರಂಭಿಸಲಿದೆ. ನಂತರ ನೆಲಮಂಗಲ ಜಾಗಕ್ಕೆ ತೆರಳಲಿದ್ದು, ಬಳಿಕ ಬುಧವಾರ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ ಅವರನ್ನು ಭೇಟಿ ಮಾಡಲಿದೆ ಎಂದು ತಿಳಿದು ಬಂದಿದೆ.
ಬೆಂಗಳೂರು ಸಮೀಪದ ಮೂರು ಸ್ಥಳಗಳಲ್ಲಿ ವಾಯುಪ್ರದೇಶ, ಅಡಚಣೆ ಮಿತಿ, ಮೇಲ್ಮೈ ಸಮೀಕ್ಷೆ ಸೇರಿ ವಿವಿಧ ಅಧ್ಯಯನಗಳನ್ನು ನಡೆಸಿ ವಿವರವಾದ ವರದಿಯನ್ನು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ನೀಡಲಿದೆ. ಮೂರು ಸ್ಥಳ ಉತ್ತಮವಾಗಿದ್ದರೆ ಮೂರು ಸ್ಥಳ ಸೂಕ್ತ ಎಂದು ಪ್ರಾಧಿಕಾರ ವರದಿ ನೀಡುತ್ತದೆ. ಆನಂತರ ರಾಜ್ಯ ಸರ್ಕಾರವು ಅಂತಿಮ ಸ್ಥಳ ಆಯ್ಕೆ ಮಾಡಲಿದೆ ಎಂದು ಮೂಲಗಳು ತಿಳಿಸಿವೆ. ಅಲ್ಲದೇ ಈ ಮೂರು ಸ್ಥಳದಲ್ಲಿ ಕನಕಪುರ ರಸ್ತೆಯ ನೈಸ್ ಜಂಕ್ಷನ್ನಿಂದ 10 ಕಿ.ಮೀ ದೂರದ ಸ್ಥಳವನ್ನ ಆಯ್ಕೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.
ಇನ್ನೂ ಎರಡನೇ ವಿಮಾನ ನಿಲ್ದಾಣದ ಕುರಿತು ಸಚಿವ ಎಂ ಬಿ ಪಾಟೀಲ್ ಅವರು, ಬೆಳಗಾವಿ, ಹುಬ್ಬಳ್ಳಿ ನಡುವೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮಾಡಬೇಕೆಂಬ ಒತ್ತಾಯವಿದೆ. ಆ ಭಾಗದಿಂದಲೇ ನೇರವಾಗಿ ವಿದೇಶಗಳಿಗೆ ಹೋಗಲು ವಿಮಾನ ನಿಲ್ದಾಣ ಮಾಡಬೇಕಿದೆ ಎಂದು ಹೇಳಿದರು.
ಇನ್ನೂ ಶಿರಾ-ಚಿತ್ರದುರ್ಗ ನಡುವೆ ಎರಡನೇ ವಿಮಾನ ನಿಲ್ದಾಣ ವಿಚಾರವಾಗಿ ಟಿ ಬಿ ಜಯಚಂದ್ರ ನೇತೃತ್ವದಲ್ಲಿ 33 ಶಾಸಕರ ಸಹಿ ಸಂಗ್ರಹದ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಶಾಸಕರಾದ ಜಯಚಂದ್ರ ಅವರು ನಮ್ಮ ಪಕ್ಷದ ಹಿರಿಯ ನಾಯಕರು. ಇದು ಜಿಲ್ಲಾ ವಿಮಾನ ನಿಲ್ದಾಣ ಅಲ್ಲ. ಅಂತರರಾಷ್ಟ್ರೀಯ ನಿಮಾನ ನಿಲ್ದಾಣ. ನಾನು ಅವರಿಗೆ ಇದನ್ನು ಹೇಳಿದ್ದೇನೆ. ಶಿರಾ-ಚಿತ್ರದುರ್ಗದಲ್ಲಿ ಜಿಲ್ಲಾ ವಿಮಾನ ನಿಲ್ದಾಣವಾಗಲಿದೆ ಎಂದು ಎಂ ಬಿ ಪಾಟೀಲ್ ಹೇಳಿದರು.












Click it and Unblock the Notifications