ಬುದ್ಧಿ ಜೀವಿಗಳ ಬುದ್ಧಿ ಎಲ್ಲಿರುತ್ತದೆ ಎಂದು ವಿವರಿಸಿದ ಸದಾನಂದ ಗೌಡ್ರು
ಬೆಂಗಳೂರು, ಜೂನ್ 27: ಕೆಲವು ಬುದ್ಧಿ ಜೀವಿಗಳ ಬುದ್ಧಿ ಅವರ ತಲೆಯಲ್ಲಿ ಇರುವುದಿಲ್ಲ. ಚೀಲದಲ್ಲಿ ಇರುತ್ತದೆ. ಆ ಬುದ್ಧಿಯನ್ನು ಅವರು ಇಂಥ ಕೆಲಸಗಳಿಗೆ ಖರ್ಚು ಮಾಡುತ್ತಾರೆ ಎಂದು ಕೇಂದ್ರ ಸಚಿವ ಡಿವಿ ಸದಾನಂದ ಗೌಡ ಅವರು ವ್ಯಂಗ್ಯವಾಡಿದ್ದಾರೆ. ಬೆಂಗಳೂರಿನಲ್ಲಿ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು, ಈ ಬಗ್ಗೆ ಮಾತನಾಡಿದ್ದಾರೆ.
ಮೈಸೂರಿನ ಕಲಾಮಂದಿರದಲ್ಲಿ ಗೋಮಾಂಸ ಸೇವನೆ ಮಾಡಿದವರ ವಿರುದ್ಧ ಸಿಟ್ಟು ಹೊರ ಹಾಕಿರುವ ಅವರು, ಮುಖ್ಯಮಂತ್ರಿಗಳ ತವರು ಜಿಲ್ಲೆಯಲ್ಲೇ ಇಂಥ ಘಟನೆ ನಡೆದಿರುವುದು ನೋಡಿದರೆ ರಾಜ್ಯ ಸರಕಾರವೇ ಕುಮ್ಮಕ್ಕು ನೀಡಿದಂತಿದೆ ಎಂದು ಅವರು ಹೇಳಿದ್ದಾರೆ.

ಕೇಂದ್ರ ಸರಕಾರವು ಯಾರದೇ ಆಹಾರ ಪದ್ಧತಿಯ ಮೇಲೆ ಹಸ್ತಕ್ಷೇಪ ಮಾಡುವುದಿಲ್ಲ. ಆದರೆ ಮೈಊರಿನ ಕಲಾಮಂದಿರದಲ್ಲಿ ಗೋ ಮಾಂಸ ಸೇವಿಸಿದವರ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯವನ್ನು ಮಾಡಿದ್ದಾರೆ.
ಇನ್ನು ಕೆಂಪೇಗೌಡರ ಜೀವನ ಚರಿತ್ರೆಯನ್ನು ರಾಜ್ಯ ಸರಕಾರವು ಪಠ್ಯದಲ್ಲಿ ಸೇರಿಸಬೇಕು ಎಂದು ಹೇಳಿದ ಅವರು, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಪಠ್ಯದಲ್ಲಿ ಕೆಂಪೇಗೌಡರ ಜೀವನ ಚರಿತ್ರೆ ಸೇರಿಸುತ್ತೇವೆ ಎಂದರು.












Click it and Unblock the Notifications