ಕೇಂದ್ರದಿಂದ ಇನ್ನೂ ಬಂದಿಲ್ಲ ಬರಪರಿಹಾರ: ದೇಶಪಾಂಡೆ
ಬೆಂಗಳೂರು, ಫೆಬ್ರವರಿ 20: ಕೇಂದ್ರವು ರಾಜ್ಯಗಳಿಗೆ ನೀಡವುದಾಗಿ ಘೋಷಿಸಿರುವ ಬರಪರಿಹಾರ ಅನುದಾನ ಈ ವರೆಗೆ ರಾಜ್ಯವನ್ನು ಸೇರಿಲ್ಲ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರವು ಕರ್ನಾಟಕ ರಾಜ್ಯಕ್ಕೆ ಬರಪರಿಹಾರವಾಗಿ 949.49 ಕೋಟಿ ರೂಪಾಯಿ ನೀಡುವುದಾಗಿ ಘೊಷಿಸಿತ್ತು. ಆದರೆ ಅದು ಇನ್ನೂ ಬಂದಿಲ್ಲ ಎಂದರು.
ಮುಂಗಾರು ಹಂಗಾಮಿನಲ್ಲಿ ರಾಜ್ಯದ 100 ಬರಪೀಡಿತ ತಾಲ್ಲೂಕಗಳ ಪೈಕಿ ತೀವ್ರ ಬರವಿರುವ 72 ತಾಲ್ಲೂಕುಗಳನ್ನು ಮಾತ್ರ ಕೇಂದ್ರ ಸರ್ಕಾರ ಪರಿಗಣಿಸಿದೆ. ಉಳಿದ 28 ತಾಲ್ಲೂಕುಗಳನ್ನು ಬರಪೀಡಿತವೆಂದು ಪರಿಗಣಿಸಿಲ್ಲ ಎಂದ ಅವರು ಈ ಬಗ್ಗೆ ಮೋದಿ ಹಾಗೂ ಕೇಂದ್ರ ಕೃಷಿ ಸಚಿವರಿಗೆ ಪತ್ರ ಬರೆಯುವುದಾಗಿ ಹೇಳಿದರು.

ಹಿಂಗಾರು ಹಂಗಾಮಿನಲ್ಲಿ 150 ತಾಲ್ಲೂಕುಗಳು ಬರಪೀಡಿತವಾಗಿವೆ ಇದರಿಂದ 11,384.47 ಕೋಟಿ ರೂಪಾಯಿ ನಷ್ಟದ ಅಂದಾಜು ಮಾಡಲಾಗಿದೆ. ಎಸ್ಡಿಆರ್ಎಫ್, ಎನ್ಡಿಆರ್ಎಫ್ ಮಾರ್ಗಸೂಚಿ ಪ್ರಕಾರ 2064.30 ಕೋಟಿ ರೂಪಾಯಿ ಅನುದಾನಕ್ಕೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಬಗರ್ಹುಕುಂ ಸಾಗುವಳಿದಾರರ ನಮೂನೆ 50 ಮತ್ತು 53ರಲ್ಲಿ ಸ್ವೀಕೃತವಾದ ಅರ್ಜಿಗಳ ವಿಲೇವಾರಿಯ ದಿನಾಂಕವನ್ನು ಏಪ್ರಿಲ್ 26ರವರೆಗೆ ವಿಸ್ತರಿಸಿ ಆದೇಶ ಹೊರಡಿಸಲಾಗಿದೆ ಎಂದ ಅವರು, ಬಾಕಿ ಇರುವ ಎಲ್ಲಾ ಅರ್ಜಿಗಳನ್ನು ಕಡ್ಡಾಯವಾಗಿ ವಿಲೇವಾರಿ ಮಾಡಲು ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಲಾಗಿದೆ ಎಂದರು.
ಅನಧಿಕೃತವಾಗಿ ಸರ್ಕಾರಿ ಜಮೀನುಗಳಲ್ಲಿ ಸಾಗುವಳಿ ಮಾಡುತ್ತಿರುವವರು ಜಮೀನನ್ನು ಸಕ್ರಮಗೊಳಿಸಲು ನಮೂನೆ 57ರಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು ಮಾರ್ಚ್ 16ರವರೆಗೂ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ ಎಂದರು.












Click it and Unblock the Notifications