ಭಾನುವಾರ ಬಿಜೆಪಿಯಿಂದ ಆಚರಣೆ, ಎಎಪಿಯಿಂದ ಪ್ರತಿಭಟನೆ
ಬೆಂಗಳೂರು, ಜೂ. 13 : ನರೇಂದ್ರ ಮೋದಿ ಸರಕಾರ ಕೇಂದ್ರದಲ್ಲಿ ಒಂದು ವರ್ಷ ಪೂರೈಸಿರುವ ಸಂದರ್ಭವನ್ನು ಬಿಜೆಪಿ ಕರ್ನಾಟಕದ ಮಾಹಿತಿ ತಂತ್ರಜ್ಞಾನ ಘಟಕ ಜೂನ್ 14ರಂದು ಭಾನುವಾರ ಬೆಂಗಳೂರಿನಲ್ಲಿ ವಿಶಿಷ್ಟವಾಗಿ ಆಚರಿಸುತ್ತಿದೆ.
ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ 'ಸಾಲ್ ಏಕ್ ಶುರುವಾತ್ ಅನೇಕ್' ಎಂಬ ಕಾರ್ಯಕ್ರಮಕ್ಕೆ ರಾಷ್ಟ್ರೀಯ ಜಂಟಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್. ಸಂತೋಷ್ ಅವರು ಬೆಳಿಗ್ಗೆ 10 ಗಂಟೆಗೆ ಚಾಲನೆ ನೀಡಲಿದ್ದಾರೆ.

ಭಾನುವಾರ ಸಂವಾದವೂ ನಡೆಯಲಿದ್ದು, ಪ್ರಗ್ಯಾನ್ ಡೇಟಾಬೇಸ್ನ ಸಂಸ್ಥಾಪಕ, ಇನ್ಪೋಸಿಸ್ನ ಶಿಕ್ಷಣ ಮತ್ತು ಸಂಶೋಧನಾ ಘಟಕದ ಮಾಜಿ ಪ್ರಧಾನ ಸಂಶೋಧಕ ಡಾ. ಟಿಎಸ್ ಮೋಹನ್ ಮತ್ತು ಎಂಐಟಿ ಸ್ಕೂಲ್ ಆಫ್ ಗವರ್ನನ್ಸ್ನ ನಿರ್ದೇಶಕ ಮತ್ತು ಎಂಬಾರ್ಕರ್ಸ್ ಸಂಸ್ಥೆಯ ಸಹ ಸಂಸ್ಥಾಪಕ ಮತ್ತು ನಿರ್ದೇಶಕ ಡಾ. ಸಮೀರ್ ಕಾಗಲ್ಕರ್ ಅವರು ಪಾಲ್ಗೊಳ್ಳುತ್ತಿದ್ದಾರೆ.
ಎಎಪಿ ಕರ್ನಾಟಕದ ಪ್ರತಿಭಟನೆ : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಹಾಗೂ ರಾಜ್ಯ ಸರ್ಕಾರದ ಬೃಹತ್ ಭ್ರಷ್ಟಾಚಾರ ಹಾಗೂ ಕೆಟ್ಟ ಆಡಳಿತದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಜೂನ್ 14, ಭಾನುವಾರದಂದು ಆಮ್ ಆದ್ಮಿ ಪಾರ್ಟಿ-ಬೆಂಗಳೂರು ಬೃಹತ್ ಪಾದಯಾತ್ರೆ ಹಾಗೂ ಜನಸಭೆಯನ್ನು ಆಯೋಜಿಸಿದೆ.

ಪಾದಯಾತ್ರೆ ಮಧ್ಯಾಹ್ನ 2:00ಕ್ಕೆ ಹೊಂಗಸಂದ್ರ (ಬೊಮ್ಮನಹಳ್ಳಿ)ಯಿಂದ ಆರಂಭವಾಗಿ ಎಚ್.ಎಸ್.ಆರ್ ಲೇಔಟ್ನಲ್ಲಿ ಕೊನೆಗೊಳ್ಳಲಿದೆ. ಜನಸಭೆಯನ್ನು ಹೆಚ್.ಎಸ್.ಆರ್ ಲೇಔಟ್ನ ಬಿ.ಡಿ.ಎ ಕಾಂಪ್ಲೆಕ್ಸ್ನಲ್ಲಿ 5:30ಕ್ಕೆ ಆಯೋಜಿಸಲಾಗಿದೆ.
ಪಾದಯಾತ್ರೆ ಹಾಗೂ ಜನಸಭೆಯಲ್ಲಿ ರಾಷ್ಟ್ರೀಯ ಕಾರ್ಯಕಾರಿಣಿಯ ಸದಸ್ಯರಾದ ಪೃಥ್ವಿ ರೆಡ್ಡಿ, ರಾಜ್ಯ ಸಂಚಾಲಕರಾದ ಸಿದ್ಧಾರ್ಥ ಶರ್ಮ, ರಾಜ್ಯ ನಾಯಕರಾದ ರವಿಕೃಷ್ಣಾ ರೆಡ್ಡಿ ಮುಂತಾದವರು ಪಾಲ್ಗೊಳ್ಳಲಿದ್ದಾರೆ.












Click it and Unblock the Notifications