ಬೆಂಗಳೂರು : ಹೊಯ್ಸಳ ಜೀಪಿಗೂ ಬಂತು ಸಿಸಿಟಿವಿ
ಬೆಂಗಳೂರು, ಮೇ 15 : ಬೆಂಗಳೂರು ಪೊಲೀಸರು ಹೊಸದೊಂದು ಪ್ರಯೋಗಕ್ಕೆ ಮುಂದಾಗಿದ್ದಾರೆ. ರಾತ್ರಿ ಗಸ್ತು ತಿರುಗುವ ಸಿಬ್ಬಂದಿ ವಿರುದ್ಧ ಕೇಳಿಬರುತ್ತಿರುವ ಭ್ರಷ್ಟಾಚಾರದ ಆರೋಪದ ಹಿನ್ನೆಲೆಯಲ್ಲಿ ಹೊಯ್ಸಳ ಜೀಪುಗಳಿಗೆ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗುತ್ತಿದೆ.
ಪ್ರಾಯೋಗಿಕವಾಗಿ ಈ ಯೋಜನೆ ಆಗ್ನೇಯ ವಿಭಾಗದಲ್ಲಿ ಜಾರಿಗೆ ಬಂದಿದೆ. ವಿಭಾಗದ ವ್ಯಾಪ್ತಿಯ ಒಟ್ಟು 13 ಪೊಲೀಸ್ ಠಾಣೆಗಳಲ್ಲಿರುವ 15 ಹೊಯ್ಸಳ ಜೀಪುಗಳಿಗೆ ಸಿಸಿಟಿವಿಯನ್ನು ಆಳವಡಿಸಲಾಗಿದೆ. ಹಿರಿಯ ಅಧಿಕಾರಿಗಳು ಇದನ್ನು ನಿರ್ವಹಣೆ ಮಾಡಲಿದ್ದು, ತಮ್ಮ ಫೋನ್ ಮೂಲಕ ಅವರು ಸೆರೆಯಾಗಿರುವ ದೃಶ್ಯವನ್ನು ನೇರವಾಗಿ ವೀಕ್ಷಿಸಬಹುದಾಗಿದೆ. [ಗುಪ್ತಚರ ಇಲಾಖೆಗೆ ಶೀಘ್ರ ಎಸ್ ಐಗಳ ನೇಮಕ]

ಆಗ್ನೇಯ ವಿಭಾಗದ ಡಿಸಿಪಿ ಡಾ.ರೋಹಿಣಿ ಕಟೋಚ್ ಸೆಪೆಟ್ ಅವರು ಈ ಯೋಜನೆ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಗಸ್ತು ಸಿಬ್ಬಂದಿ ವಿರುದ್ಧ ಭ್ರಷ್ಟಾಚಾರದ ಆರೋಪಗಳು ಕೇಳಿಬರುತ್ತಿದ್ದವು. ಗುಂಪು ಘರ್ಷಣೆ ಸಮಯದಲ್ಲಿಯೂ ಅಲ್ಲಿನ ಚಿತ್ರಗಳನ್ನು ಸೆರೆಹಿಡಿಯಲು ಕ್ಯಾಮರಾಗಳನ್ನು ಅಳವಡಿಸಲಾಗಿದೆ ಎಂದು ಹೇಳಿದ್ದಾರೆ. [ಬೆಂಗಳೂರಲ್ಲಿ 24x7 ರಕ್ಷಣೆ ಸ್ಮಾರ್ಟ್ ಸಿಟಿ ಯೋಜನೆ]
14 ಸಾವಿರ ಖರ್ಚು : ಜೀಪುಗಳಿಗೆ ಅಳವಡಿಸಿರುವ ಕ್ಯಾಮರಾಗಳ ಬೆಲೆ 14 ಸಾವಿರ ರೂ. 12 ಗಂಟೆಗೊಮ್ಮೆ ಈ ಜೀಪುಗಳು ಪೊಲೀಸ್ ಠಾಣೆಗೆ ಆಗಮಿಸಲಿದ್ದು, ಆಗ ಅದರಲ್ಲಿರುವ ದೃಶ್ಯಗಳನ್ನು ಡೌನ್ ಲೋಡ್ ಮಾಡಿಕೊಳ್ಳಲಾಗುತ್ತದೆ. ಹಿರಿಯ ಅಧಿಕಾರಿಗಳು ಸ್ಮಾರ್ಟ್ ಫೋನ್ ಮೂಲಕ ನೇರವಾಗಿ ಸೆರೆಯಾಗಿರುವ ದೃಶ್ಯಗಳನ್ನು ವೀಕ್ಷಿಸುವ ವ್ಯವಸ್ಥೆ ಮಾಡಲಾಗಿದೆ.
ಪ್ರಾಯೋಗಿಕವಾಗಿ ಈ ಯೋಜನೆಯನ್ನು ಆಗ್ನೇಯ ವಿಭಾಗದಲ್ಲಿ ಜಾರಿಗೆ ತರಲಾಗಿದೆ. ಯೋಜನೆ ಫಲಪ್ರದವೆನಿಸಿದರೆ ಮುಂದಿನ ದಿನಗಳಲ್ಲಿ ನಗರದಲ್ಲಿ ಸಂಚರಿಸುವ ಹೊಯ್ಸಳ ಗಸ್ತು ವಾಹನಗಳಿಗೆ ಇದನ್ನು ಆಳವಡಿಸಲು ಪೊಲೀಸರು ನಿರ್ಧರಿಸಿದ್ದಾರೆ.












Click it and Unblock the Notifications