ರೇಸ್ಕೋರ್ಸ್ ಮೇಲೆ ಸಿಸಿಬಿ ದಾಳಿ: 96 ಲಕ್ಷ ರೂ ನಗದು ಜಪ್ತಿ
ಬೆಂಗಳೂರು, ಡಿಸೆಂಬರ್ 6: ನಗರದ ರೇಸ್ಕೋರ್ಸ್ನ ಟರ್ಫ್ ಕ್ಲಬ್ ಮೇಲೆ ಶುಕ್ರವಾರ ದಾಳಿ ನಡೆಸಿರುವ ಪೊಲೀಸರು 96 ಲಕ್ಷ ರೂ. ಹಣ ಜಪ್ತಿ ಮಾಡಿದ್ದಾರೆ.
ಟರ್ಫ್ ಕ್ಲಬ್ನಲ್ಲಿ ಅವ್ಯವಹಾರ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಕೇಂದ್ರ ಅಪರಾಧ ದಳದ (ಸಿಸಿಬಿ) ಪೊಲೀಸರು ದಾಳಿ ನಡೆಸಿದ್ದರು. ಸಿಸಿಬಿ ಡಿಸಿಪಿಗಳಾದ ಕುಲದೀಪ್ ಜೈನ್ ಹಾಗೂ ರವಿಕುಮಾರ್ ನೇತೃತ್ವದಲ್ಲಿ ನಾಲ್ವರು ಎಸಿಬಿ ಮತ್ತು 20 ಪೊಲೀಸ್ ಇನ್ಸ್ಪೆಕ್ಟರ್ಗಳ ತಂಡ ಈ ದಾಳಿ ನಡೆಸಿದೆ.
ಕಾಲು ಮುರಿದುಬಿದ್ದ ಕುದುರೆ: ರೇಸ್ಕೋರ್ಸ್ನಲ್ಲಿ ಗಲಾಟೆ
ಟರ್ಫ್ ಕ್ಲಬ್ ವಿರುದ್ಧ ವಿವಿಧ ವಂಚನೆ ಆರೋಪಗಳು ಕೇಳಿಬಂದಿದ್ದವು. ರೇಸ್ ಪಂದ್ಯಗಳಲ್ಲಿ ಕೆಲವು ಖಾಸಗಿ ಬುಕ್ಕಿಗಳು ಸಾರ್ವಜನಿಕರಿಂದ ಸಂಗ್ರಹ ಮಾಡಿದ ಹಣಕ್ಕೆ ಸರಿಯಾದ ದಾಖಲೆಗಳನ್ನು ನಿರ್ವಹಿಸಿರಲಿಲ್ಲ. ಸರ್ಕಾರಕ್ಕೆ ಜಿಎಸ್ಟಿ ಸಲ್ಲಿಸಿರಲಿಲ್ಲ. ಹಾಗೆಯೇ ವಿವಿಧ ಅವ್ಯವಹಾರಗಳನ್ನು ನಡೆಸುವ ಮೂಲಕ ವಂಚನೆ ಮಾಡಲಾಗುತ್ತಿದೆ ಎಂಬ ದೂರು ಬಂದಿತ್ತು. ಬುಕ್ಕಿಗಳು ಮತ್ತು ಕೌಂಟರ್ ಸಿಬ್ಬಂದಿ ನಡುವೆ ಒಳ ಒಪ್ಪಂದಗಳು ನಡೆಯುತ್ತಿದ್ದವು ಎನ್ನಲಾಗಿದೆ.
ದಾಳಿಯ ವೇಳೆ 96 ಲಕ್ಷ ರೂ. ನಗದು ಹಣವನ್ನು ಜಪ್ತು ಮಾಡಲಾಗಿದೆ. 40 ಮಂದಿ ಖಾಸಗಿ ಬುಕ್ಕಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಬುಕ್ಕಿಯಿಂದ ಒಂದು ಕೋಟಿ ರೂ ಬೆಟ್ಟಿಂಗ್ ನಡೆಸಿದರೆ ಹತ್ತು ಲಕ್ಷ ರೂ. ಕೌಂಟರ್ ಸಿಬ್ಬಂದಿಗೆ ಸಿಗುತ್ತಿತ್ತು. ಹೆಚ್ಚು ಬೆಟ್ಟಿಂಗ್ ಆದ ಕುದುರೆಯನ್ನು ಸೋಲಿಸಲು ಅವರೇ ಸಂಚು ರೂಪಿಸುತ್ತಿದ್ದರು. ಅದಕ್ಕಾಗಿ ಜಾಕಿಗೆ ಆಮಿಷವೊಡ್ಡುತ್ತಿದ್ದರು ಎಂದು ಹೇಳಲಾಗಿದೆ.
ಪರಿಚಯವಾದ 24 ಗಂಟೆಯೊಳಗೇ ಯುವತಿ ಖೆಡ್ಡಾಗೆ ಬಿದ್ದಿದ್ದ ಶಾಸಕ!
ನ.17ರಂದು ನಡೆದ ಈ ಅವಧಿಯ ಮೊದಲ ರೇಸ್ ವೇಳೆ ಒಂದು ಕುದುರೆ ಕಾಲುಮುರಿದುಕೊಂಡು ಬಿದ್ದಿತ್ತು. ಇದರಿಂದ ಹಿಂದೆ ಬರುತ್ತಿದ್ದ ಇನ್ನೂ ಎರಡು ಕುದುರೆಗಳು ಆಯತಪ್ಪಿ ಬಿದ್ದಿದ್ದವು. ಆಗ ಜಾಕಿಗಳು ಗಾಯಗೊಂಡಿದ್ದರು. ಹಿಂದೆ ಉಳಿದಿದ್ದ ಕುದುರೆ ಮುಂದೆ ಸಾಗಿ ಗುರಿಮುಟ್ಟಿತ್ತು. ಇದರಿಂದ ಆ ಕುದುರೆಗಳ ಮೇಲೆ ಬಾಜಿ ಕಟ್ಟಿದ್ದವರು ಗಲಾಟೆ ಮಾಡಿದ್ದರು. ಅದು ದೊಡ್ಡ ದಾಂದಲೆಗೆ ತಿರುಗಿ ಗಲಾಟೆ ನಡೆದಿತ್ತು. ಆಗ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾಗ ಅಲ್ಲಿನ ಅವ್ಯವಹಾರಗಳ ಬಗ್ಗೆ ಮಾಹಿತಿ ದೊರಕಿತ್ತು.