ತಮಿಳುನಾಡು-ಕರ್ನಾಟಕ ನಡುವೆ ಬಸ್ ಸಂಚಾರ ಸ್ಥಗಿತ
ಬೆಂಗಳೂರು, ಸೆ. 11: ಕಾವೇರಿ ವಿವಾದದ ಹಿನ್ನೆಲೆಯಲ್ಲಿ ತಮಿಳುನಾಡು ಹಾಗೂ ಕರ್ನಾಟಕ ನಡುವೆ ಸಾರಿಗೆ ಸಂಪರ್ಕ ಮತ್ತೊಮ್ಮೆ ಕಡಿತಗೊಂಡಿದೆ. ಸರಿ ಸುಮಾರು ಒಂದು ವಾರದ ಬಳಿಕ ಸಾರಿಗೆ ವ್ಯವಸ್ಥೆ ಭಾನುವಾರವಷ್ಟೇ ಆರಂಭವಾಗಿತ್ತು. ಆದರೆ, ಸೋಮವಾರ ನಡೆದ ವ್ಯತಿರಿಕ್ತ ಬೆಳವಣಿಗೆಗಳಿಂದ ಉಭಯ ರಾಜ್ಯಗಳ ನಡುವಿನ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ.
ತಮಿಳುನಾಡಿಗೆ ಕಾವೇರಿ ನೀರು ಬಿಡುವಂತೆ ಸುಪ್ರೀಂಕೋರ್ಟ್ ನೀಡಿದ ಆದೇಶದ ಹಿನ್ನೆಲೆಯಲ್ಲಿ ಬೆಂಗಳೂರು-ಮೈಸೂರು ಭಾಗದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದ್ದರಿಂದ ಉಭಯ ರಾಜ್ಯಗಳ ನಡುವೆ ಸಾರಿಗೆ ಸಂಪರ್ಕ, ಟ್ರಕ್, ಲಾರಿ ಸಂಚಾರ ಕೂಡಾ ಸ್ಥಗಿತಗೊಂಡಿದೆ. [ತಮಿಳುನಾಡಿನಲ್ಲಿ ಕನ್ನಡಿಗರ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ]

ಕರ್ನಾಟಕ ರಾಜ್ಯಾದ್ಯಂತ ಪ್ರತಿಭಟನೆ, ಹಿಂಸಾಚಾರ ನಡೆದ ಕಾರಣ ಕಳೆದ ಎಂಟು ದಿನಗಳಿಂದ ತಮಿಳುನಾಡಿನಿಂದ ಕರ್ನಾಟಕಕ್ಕೆ ಸರ್ಕಾರಿ ಬಸ್ ಸಂಚಾರವಿರಲಿಲ್ಲ. ಕಳೆದ ನಾಲ್ಕೈದು ದಿನಗಳಿಂದ ತಮಿಳುನಾಡಿನ ಸರ್ಕಾರಿ ಬಸ್ ಗಳನ್ನು ಗಡಿ ಭಾಗದಲ್ಲಿಯೇ ನಿಲ್ಲಿಸಲಾಗಿತ್ತು. ಸೋಮವಾರ ಕೂಡಾ ಇದೇ ಪರಿಸ್ಥಿತಿ ಮತ್ತೊಮ್ಮೆ ಎದುರಾಗಿದೆ.[Live : 12 ಸಾವಿರ ಕ್ಯೂಸೆಕ್ ನೀರು ಹರಿಸಲು ಆದೇಶ]
ತಮಿಳುನಾಡಿನಿಂದ ಬೆಂಗಳೂರು, ಕೋಲಾರ, ಚಾಮರಾಜನಗರ ಹಾಗೂ ಮೈಸೂರಿಗೆ ಬಸ್ ಸಂಚಾರ ಸ್ಥಗಿತಗೊಂಡಿದೆ. ಬೆಂಗಳೂರಿನಿಂದ ತಮಿಳುನಾಡಿನ ವಿವಿಧೆಡೆಗೆ ಸಂಚರಿಸುತ್ತಿದ್ದ ಬಸ್ ಗಳನ್ನು ನಿಲ್ಲಿಸುವಂತೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಸೂಚಿಸಿದ್ದಾರೆ.
ಭಾನುವಾರ ಬೆಳಗ್ಗೆ ಸುಮಾರು 35ಕ್ಕೂ ಅಧಿಕ ಬಸ್ ಗಳು ಸುರಕ್ಷಿತವಾಗಿ ಬೆಂಗಳೂರು ತಲುಪಿತ್ತು. ಎರಡು ರಾಜ್ಯಗಳ ನಡುವೆ ಸಾರ್ವಜನಿಕರ ಸಂಚಾರ, ದಿನನಿತ್ಯದ ವ್ಯಾಪಾರಿಗಳು, ಹೋಟೆಲ್ ಉದ್ಯಮಕ್ಕೆ ಇದರಿಂದ ನೆರವಾಗಿತ್ತು.
ಮುಂದುವರೆದ ಸಮಸ್ಯೆ: ತಮಿಳುನಾಡಿಗೆ ನೀರು ಬಿಡಲು ಸಾಧ್ಯವಿಲ್ಲ ಎಂಬ ಕರ್ನಾಟಕ ಸರ್ಕಾರದ ನಿರ್ಧಾರವನ್ನು ಖಂಡಿಸಿ ಕೊಂಗನಾಡು ಜನನಾಯಕ ಕಚ್ಚಿ ಸೇರಿದಂತೆ ವಿವಿಧ ಪಕ್ಷಗಳು ಈ ಹಿಂದೆ ತಮಿಳುನಾಡು ಬಂದ್ ನಡೆಸಿ ಸುಮಾರು 700ಕ್ಕೂ ಅಧಿಕ ಬಸ್ ಸಂಚಾರಕ್ಕೆ ತಡೆಯೊಡ್ಡಿದ್ದರು.ಈಗ ನಾಮ್ ತಮಿಳರ್ ಕಚ್ಚಿ ಕಾರ್ಯಕರ್ತರು ಚೆನ್ನ್ನೈನಲ್ಲಿ ಕನ್ನಡಿಗರ ಮೇಲೆ ಹಲ್ಲೆ ನಡೆಸಿದ ಮೇಲೆ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿದೆ.












Click it and Unblock the Notifications