Cauvery Water: ಬೆಂಗಳೂರಿಗೆ 120 ಕಿಮೀ ದೂರದಿಂದ ಬಂದು ತಲುಪಿತು ಕಾವೇರಿ ನೀರು: BWSSB
ಬೆಂಗಳೂರು, ಅಕ್ಟೋಬರ್ 17: ಕಾವೇರಿ 5 ನೇ ಹಂತ ಕುಡಿಯುವ ನೀರಿನ ಯೋಜನೆಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರು ನೆನೆಯಷ್ಟೇ ಲೋಕಾರ್ಪಣೆ ಮಾಡಿದ್ದರು. ಇದರ ಬೆನ್ನಲ್ಲೆ ಗುರುವಾರ ಬೆಂಗಳೂರು ಕುಡಿಯುವ ನೀರು ಮತ್ತು ಒಳಚರಂಡಿ ಮಂಡಳಿ (BWSSB) ಪಂಪಿಂಗ್ ಆರಂಭಿಸಿದೆ. ಪರಿಣಾಮವಾಗಿ ಸುಮಾರು 120 ಕಿಲೋಮೀಟರ್ ದೂರದಿಂದ ಬೃಹದಾಕಾರಾದ ಪೈಪ್ಲೈನ್ ಮೂಲಕ ಬೆಂಗಳೂರಿಗೆ ಕಾವೇರಿ ನೀರು ಬಂದು ತಲುಪಿದೆ.
ಕಾವೇರಿ 5 ನೇ ಹಂತದ ನೀರೆತ್ತಲು ಜಲಮಂಡಳಿಯು ಟಿ.ಕೆಹಳ್ಳಿಯಿಂದ ನೀರು ಪಂಪಿಂಗ್ ಪ್ರಾರಂಭಿಸಿದ್ದು, ಬಹುದೂರದಿಂದ ಬಂದ ಕಾವೇರಿ ನೀರನ್ನು ಸಂಪರ್ಕ ಪಡೆದ ನಗರದ ಬನಶಂಕರಿ 6 ನೇ ಹಂತ, ಎಸ್ಎಂವಿ 6 ನೇ ಹಂತ ಹಾಗೂ ಗೊಟ್ಟಿಗೆರೆ ಜಿಎಲ್ಆರ್ ಇನ್ನಿತರ ಪ್ರದೇಶಗಳಿಗೆ ಸರಬರಾಜು ಮಾಡುವಂತೆ BWSSB ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ಸೂಚನೆ ನೀಡಿದರು.

ಬೆಂಗಳೂರು ತಲುಪಿದ ಕಾವೇರಿ 5 ನೇ ಹಂತದ ನೀರು
ಲೋಕಾರ್ಪಣೆಯ ನಂತರ ಪಂಪ್ಗಳನ್ನು ಪ್ರಾರಂಭಿಸಲಾಗಿತ್ತು, ಸುಮಾರು 120 ಕಿಲೋಮೀಟರ್ ದೂರದಿಂದ ಬೃಹದಾಕಾರಾದ ಪೈಪ್ಗಳ ಮೂಲಕ ಹಾರೋಹಳ್ಳಿ, ತಾತಗುಣಿ ಪಂಪಿಂಗ್ ಸ್ಟೇಷನ್ನಲ್ಲಿ ಪಂಪ್ ಮಾಡಿದ ನೀರು ಇಂದು ಸಂಜೆ ಬೆಂಗಳೂರಿಗೆ ತಲುಪಿದೆ. ನಾಳೆ ಬನಶಂಕರಿ 6 ನೇ ಹಂತ, ಎಸ್ಎಂವಿ 6 ನೇ ಹಂತ ಹಾಗೂ ಗೊಟ್ಟಿಗೆರೆ ಜಿಎಲ್ಆರ್ ನಿಂದ ಹಂತ ಹಂತವಾಗಿ ಸರಬರಾಜು ಮಾಡಬೇಕಾದ ಪ್ರದೇಶಗಳಿಗೆ ಸರಬರಾಜು ಮಾಡಲಾಗುವುದು ಎಂದು ಜಲಮಂಡಳಿ ಅಧ್ಯಕ್ಷರಾದ ಡಾ ರಾಮ್ ಪ್ರಸಾತ್ ಮನೋಹರ್ ತಿಳಿಸಿದರು.
110 ಹಳ್ಳಿಗಳಿಗೆ ಕಾವೇರಿ ನೀರು ಹರಿಸಲು ಕ್ರಮವಹಿಸಿ
ಈಗಾಗಲೇ 110 ಹಳ್ಳಿಗಳ ವ್ಯಾಪ್ತಿಯಲ್ಲಿ ಸುಮಾರು 55 ಸಾವಿರ ಸಂಪರ್ಕ ನೀಡಲಾಗಿದೆ. ಈ ಸಂಪರ್ಕಗಳಿಗೆ ಕಾವೇರಿ 4 ನೇ ಹಂತದಲ್ಲಿ ಲಭ್ಯವಿದ್ದ ನೀರಿನಲ್ಲೇ ಆಗಾಗ್ಗೆ ನೀರು ಸರಬರಾಜು ಮಾಡಲಾಗುತ್ತಿತ್ತು. ಹಲವಾರು ಹಳ್ಳಿಗಳಲ್ಲಿ 10 ದಿನಕ್ಕೊಮ್ಮೆ ನೀರು ಸರಬರಾಜು ಆಗುತ್ತಿತ್ತು. ಈಗ ಕಾವೇರಿ 5 ನೇ ಹಂತ ಲೋಕಾರ್ಪಣೆ ಆಗಿರುವ ಹಿನ್ನಲೆಯಲ್ಲಿ ಬೆಂಗಳೂರು ಜಲಮಂಡಳಿ ಹೆಚ್ಚಿನ ನೀರು ಲಭ್ಯವಾಗುತ್ತಿದೆ.
ಈ ನೀರನ್ನು ಈಗಾಗಲೇ ಸಂಪರ್ಕ ಹೊಂದಿರುವ ಜನರಿಗೆ ನೀರು ಹರಿಸಲು ಕ್ರಮ ಕೈಗೊಳ್ಳುವಂತೆ ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಅವರು ನಿರ್ದೇಶನ ನೀಡಿದ್ದಾರೆ. ಈ ಹಿನ್ನಲೆಯಲ್ಲಿ ಸಮರ್ಪಕವಾಗಿ ಹಳ್ಳಿಗಳಿಗೆ ನೀರು ಸರಬರಾಜು ಪ್ರಕ್ರಿಯೆಯನ್ನು ಹಂತಹಂತವಾಗಿ ಪ್ರಾರಂಭಿಸಲು ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಜಲಮಂಡಳಿ ಅಧ್ಯಕ್ಷರಾದ ಡಾ. ರಾಮ್ ಪ್ರಸಾತ್ ಮನೋಹರ್ ತಿಳಿಸಿದರು.

ಅಗತ್ಯದಷ್ಟೇ 150 ಎಂಎಲ್ಡಿ ತರಲು ನಿರ್ಧಾರ
ಕಾವೇರಿ 5 ನೇ ಹಂತದ ಲೋಕಾರ್ಪಣೆಯಿಂದ ಬೆಂಗಳೂರು ನಗರಕ್ಕೆ 775 ಎಂಎಲ್ಡಿಯಷ್ಟು ನೀರು ಲಭ್ಯವಿದೆ. ಇಷ್ಟು ಪ್ರಮಾಣದ ನೀರು ಸುಮಾರು 4 ಲಕ್ಷ ಸಂಪರ್ಕಗಳಿಗೆ ಹಾಗೂ 50 ಲಕ್ಷ ಜನರಿಗೆ ಅಗತ್ಯವಿರುವ ನೀರು ಪೂರೈಕೆ ಆಗಲಿದೆ. ಈಗ ಕೇವಲ 55 ಸಾವಿರ ಸಂಪರ್ಕಗಳಿದ್ದು ಇವುಗಳಿಗೆ 150 ಎಂಎಲ್ಡಿ ನೀರು ಸಾಕಾಗಲಿದೆ. ಹೀಗಾಗಿ ಹೆಚ್ಚಿನ ನೀರು ಪೋಲಾಗದಂತೆ ಅಗತ್ಯದಷ್ಟು (150 ಎಂಎಲ್ಡಿ) ನೀರು ತರಲು ಉದ್ದೇಶಿಸಲಾಗಿದೆ.
53 ಹಳ್ಳಿಗಳಲ್ಲಿ 55 ಸಾವಿರ ಸಂಪರ್ಕ
110 ಹಳ್ಳಿಗಳ ವ್ಯಾಪ್ತಿಯಲ್ಲಿನ ಕೇವಲ 53 ಗ್ರಾಮಗಳಲ್ಲಿ ಸುಮಾರು 55 ಸಾವಿರ ನೀರಿನ ಸಂಪರ್ಕವನ್ನು ಪಡೆದುಕೊಂಡಿದ್ದಾರೆ. ಈ ಸಂಪರ್ಕಗಳಿಗೆ ನೀರು ಸರಬರಾಜಿನ ಷ್ಯೆಡ್ಯೂಲ್ ಮಾಡಿ ರೊಟೇಷನ್ ಮೂಲಕ ನೀರು ಹರಿಸಬೇಕು. ಹಾಗೆಯೇ, ಇನ್ನುಳಿದ 57 ಗ್ರಾಮಗಳಲ್ಲಿ ನೀರಿನ ಸರಬರಾಜಿಗೆ ಜಲಮಂಡಳಿ ಎಲ್ಲಾ ಸಿದ್ದತೆಗಳನ್ನು ಮಾಡಿಕೊಂಡಿದೆ.
ಜನರು ಕಾವೇರಿ ನೀರಿನ ಸಂಫರ್ಕ ಪಡೆದುಕೊಳ್ಳಲು ಅಧಿಕಾರಿಗಳು ಮನವೊಲಿಸಬೇಕು. ಜನರು ಕೂಡಾ ಉತ್ತಮ ಗುಣಮಟ್ಟದ ನೀರು ಸರಬರಾಜು ಪಡೆಯಲು ಅಗತ್ಯ ಸಂಪರ್ಕ ಪಡೆದುಕೊಳ್ಳುವಂತೆ ಜಲಮಂಡಳಿ ಅಧ್ಯಕ್ಷರು ಕರೆ ನೀಡಿದರು.
110 ಹಳ್ಳಿಗಳಿಗೆ ಸರಬರಾಜಿನ ರೋಟೇಷನ್ ಷ್ಯೆಡ್ಯೂಲ್
110 ಹಳ್ಳಿಗಳಿಗೆ ನೀರು ಹರಿಸುವ ನಿಟ್ಟಿನಲ್ಲಿ ಸಿಎಂಸಿ ಕೋರ್ ಝೋನ್ ನಂತೆಯೇ ರೊಟೇಷನ್ ಷೆಡ್ಯೂಲ್ ರಚಿಸಬೇಕು. ಈ ಷೆಡ್ಯೂಲ್ನಂತೆ ಹಳ್ಳಿಗಳಿಗೆ ನೀರು ಸರಬರಾಜು ಆಗಲಿದೆ. ಇದು ಸಮರ್ಪಕವಾಗಿ ಆಗುವ ನಿಟ್ಟಿನಲ್ಲಿ ಗಮನ ವಹಿಸಬೇಕು. ಈಗಾಗಲೇ ಸಂಪರ್ಕ ತಗೆದುಕೊಂಡರೂ ನೀರು ಸರಬರಾಜಾಗಬೇಕು. ಹೊಸ ಸಂಪರ್ಕ ಪಡೆದುಕೊಳ್ಳಲು ಆದ್ಯತೆ ನೀಡಬೇಕು ಎಂದು ಅವರು ತಿಳಿಸಿದ್ದಾರೆ.












Click it and Unblock the Notifications