ಪಾರ್ಕಿಂಗ್ ಜಾಗ ಇದ್ದರೆ ಮಾತ್ರ ಬೆಂಗಳೂರಲ್ಲಿ ಹೊಸ ವಾಹನ ನೋಂದಣಿ?
ಬೆಂಗಳೂರು, ಡಿಸೆಂಬರ್ 18 : 'ಬೆಂಗಳೂರಿನಲ್ಲಿ ವಾಹನ ಖರೀದಿ ಮಾಡುವವರ ಬಳಿ ಪಾರ್ಕಿಂಗ್ಗೆ ಜಾಗ ವಿದ್ದರೆ ಮಾತ್ರ ನೋಂದಣಿಗೆ ಅವಕಾಶ ನೀಡುವ ಕಾನೂನು ಜಾರಿಗೆ ತರಬೇಕಿದೆ' ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಹೇಳಿದರು.
ವಿಧಾಸನಸಭೆಯಲ್ಲಿ ನಿಯಮ 69ರ ಅಡಿ ನಡೆದ ಚರ್ಚೆಗೆ ಉತ್ತರ ನೀಡಿದ ಸಚಿವರು, 'ಬೆಂಗಳೂರಿನಲ್ಲಿ ಹೊಸ ವಾಹನಗಳ ನೋಂದಣಿ ನಿಷೇಧ ಅಸಾಧ್ಯ. ಆಟೋ ರಿಕ್ಷಾಗಳ ನೋಂದಣಿಗೆ ನಿಷೇಧ ಹೇರಲಾಗಿತ್ತು. ಆಟೋ ಚಾಲಕರು ಹೈಕೋರ್ಟ್ನಲ್ಲಿ ಪ್ರಶ್ನಿಸಿ ಇದಕ್ಕೆ ತಡೆಯಾಜ್ಞೆ ತಂದಿದ್ದಾರೆ' ಎಂದರು.
ಬೆಂಗಳೂರಿನ ಸಂಚಾರ ದಟ್ಟಣೆ ಬಗ್ಗೆ ವಿಷಯ ಪ್ರಸ್ತಾಪಿಸಿದ ಬಿಜೆಪಿ ನಾಯಕ ಆರ್.ಅಶೋಕ ಅವರು, ' ಬೆಂಗಳೂರು ಸಹ ಮಾಲಿನ್ಯದಲ್ಲಿ ದೆಹಲಿಯ ಹಾದಿಯಲ್ಲಿ ಸಾಗುತ್ತಿದೆ. ಇದನ್ನು ನಿಯಂತ್ರಿಸಲು ಕಠಿಣ ಕ್ರಮವನ್ನು ಕೈಗೊಳ್ಳಬೇಕು' ಎಂದು ಹೇಳಿದರು.

ಡಿ.ಸಿ.ತಮ್ಮಣ್ಣ ಅವರು ಉತ್ತರ ನೀಡುತ್ತಾ, 'ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಮೂರು ವರ್ಷಗಳಲ್ಲಿ ಪ್ರತಿ ವರ್ಷ 250 ಕೋಟಿ ನಷ್ಟ ಅನುಭವಿಸಿದೆ. ಮಿನಿ ಬಸ್ಗಳ ಸಂಚಾರ ಆರಂಭಿಸಿದರೆ ನಿರ್ವಹಣಾ ವೆಚ್ಚ ದುಪ್ಪಟ್ಟಾಗುತ್ತದೆ. ಹಾಗಾಗಿ ಮಿನಿ ಬಸ್ ಓಡಿಸುವುದಿಲ್ಲ' ಎಂದು ಸ್ಪಷ್ಟಪಡಿಸಿದರು.
ಮಲ್ಲೇಶ್ವರ ಕ್ಷೇತ್ರದ ಬಿಜೆಪಿ ಶಾಸಕ ಡಾ.ಅಶ್ವತ್ಥನಾರಾಯಣ ಮಾತನಾಡಿ, 'ನಗರದಲ್ಲಿ ಸಾರ್ವಜನಿಕ ಸಾರಿಗೆಯನ್ನು ಬಲಪಡಿಸಬೇಕಿದೆ. ಬಿಎಂಟಿಸಿ ಬಸ್ ದರ ಸಹ ದುಬಾರಿ. ಅದಕ್ಕಿಂತ ದ್ವಿಚಕ್ರ ವಾಹನದಲ್ಲಿ ಸಂಚರಿಸುವುದು ಮಿತವ್ಯಯಕಾರಿ ಎಂಬಂತಾಗಿದೆ. ಬಸ್ ದರ ಕಡಿಮೆ ಮಾಡಬೇಕು' ಎಂದು ಆಗ್ರಹಿಸಿದರು.












Click it and Unblock the Notifications