ಭಸ್ಮವಾದ ಕಾರಿನಲ್ಲಿ, ದಾಖಲೆ, ಪಾಸ್ಪೋರ್ಟ್, ಮನೆ ಕೀಗಾಗಿ ಹುಡುಕಾಟ
ಬೆಂಗಳೂರು, ಫೆಬ್ರವರಿ 23: ಯಲಹಂಕ ವಾಯುನೆಲೆಯಲ್ಲಿ ನಡೆಯುತ್ತಿರುವ ಏರೋ ಇಂಡಿಯಾ ವೈಮಾನಿಕ ಪ್ರದರ್ಶನದ ವೇಳೆ ಪಾರ್ಕಿಂಗ್ನಲ್ಲಿ ಕಾಣಿಸಿಕೊಂಡ ಬೆಂಕಿಯಿಂದಾಗಿ ಸುಮಾರು 300 ವಾಹನಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿವೆ.
ಇದರಲ್ಲಿ ದುಬೈ ಮೂಲದ ಭದ್ರಿ ಪ್ರಸಾದ್ ಎಂಬುವವರ ಕಾರು ಕೂಡ ಇತ್ತು, ಇದೀಗ ಕಾರಿನಲ್ಲಿಟ್ಟಿದ್ದ ಪಾಸ್ಪೋರ್ಟ್, ಇನ್ನಿತರ ದಾಖಲೆಗಳು ಸುಟ್ಟು ಭಸ್ಮವಾಗಿದ್ದು, ಮನೆಯ ಕೀಗಾಗಿ ಹುಡುಕಾಟ ನಡೆಸಿದ್ದಾರೆ.
ಆರ್ಟಿಓ ಇಲಾಖೆ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ಹೆಲ್ಪ್ ಡೆಸ್ಕ್ ತೆರೆದಿದ್ದು, ಕಾರು ಕಳೆದುಕೊಂಡವರು ಅಲ್ಲಿ ನೋಂದಾಯಿಸಬಹುದು. ಕಾರಿನ ಮಾಲಿಕರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಈ ಹೆಲ್ಪ್ ಡೆಸ್ಕ್ ತೆರೆಯಲಾಗಿದೆ.

ಹೀಗೆಯೇ ನೂರಾರು ಮಂದಿ ತಮ್ಮ ದಾಖಲೆಗಳಿಗಾಗಿ ಪರದಾಡುತ್ತಿದ್ದಾರೆ. ಕಾರಿನಲ್ಲಿಟ್ಟಿದ್ದ ಎಲ್ಲಾ ದಾಖಲೆಗಳು ಸುಟ್ಟು ಭಸ್ಮವಾಗಿವೆ.
ಒಣಗಿದ ಹುಲ್ಲಿನಿಂದ ಬೆಂಕಿ ಹತ್ತಿಕೊಂಡು ಎಲ್ಲಾ ಕಾರುಗಳಿಗೆ ಆವರಿಸಿಕೊಂಡಿದೆ. ಅವಘಡದಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಆದರೆ ಮೊದಲು ಬೆಂಕಿ ಕಾಣಿಸಿಕೊಳ್ಳಲು ಕಾರಣವೇನೆಂದು ತಿಳಿದಿರಲಿಲ್ಲ ಆದರೆ ಅಲ್ಲಿಯೇ ಇದ್ದ ಹುಲ್ಲಿಗೆ ಯಾರೋ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದ ಕಾರಣ ಹೊಗೆ ಆವರಿಸಿಕೊಂಡಿತ್ತು ಎನ್ನುವ ಮಾಹಿತಿ ತಿಳಿದುಬಂದಿದೆ.
ಫೆಬ್ರವರಿ 19ರಂದು ಯಲಹಂಕದ ವಾಯುನೆಲೆಯಲ್ಲಿ ತಾಲೀಮಿನಲ್ಲಿ ತೊಡಗಿದ್ದ ಸೂರ್ಯ ಕಿರಣ ಯುದ್ಧ ವಿಮಾನದ ಪೈಲಟ್ ವಿಮಾನ ಡಿಕ್ಕಿಯಲ್ಲಿ ಮೃತಪಟ್ಟಿದ್ದರು.












Click it and Unblock the Notifications