ಮಾನಸಿಕ ಸಮಸ್ಯೆಗಳ ಆಪ್ತ ಸಮಾಲೋಚನೆ ಸೇವೆಗಾಗಿ 104ಗೆ ಕರೆ ಮಾಡಿ
ಬೆಂಗಳೂರು, ಅಕ್ಟೋಬರ್.10: ಕೊರೊನಾವೈರಸ್ ಸೋಂಕು ಹರಡುವಿಕೆ ಭೀತಿಯಲ್ಲಿ ಜನರು ದೈಹಿಕ ಆರೋಗ್ಯದ ಜೊತೆಗೆ ಜೊತೆಗೆ ಮಾನಸಿಕ ಆರೋಗ್ಯದ ಮೇಲೂ ಅಷ್ಟೇ ಗಮನ ಹರಿಸುವಂತೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ಸಲಹೆ ನೀಡಿದ್ದಾರೆ.
ಅಕ್ಟೋಬರ್.10ರ ದಿನವನ್ನು ವಿಶ್ವ ಮಾನಸಿಕ ದಿನವನ್ನಾಗಿ ಆಚರಿಸಲಾಗುತ್ತಿದ್ದು, ಸಾರ್ವಜನಿಕರಲ್ಲಿ ಮಾನಸಿಕ ಸಮಸ್ಯೆಗಳ ಪರಿಹಾರಕ್ಕೆ ರಾಜ್ಯ ಸರ್ಕಾರವು ಆಪ್ತ ಸಮಾಲೋಚನೆ ಸೇವೆಯನ್ನು ಪಡೆಯಬೇಕು ಎಂದು ಸಚಿವರು ಮನವಿ ಮಾಡಿಕೊಂಡಿದ್ದಾರೆ.
ರಾಜ್ಯಾದ್ಯಂತ ಕೊರೊನಾವೈರಸ್ ಸೋಂಕಿನ ಭೀತಿಯಲ್ಲಿರುವ ಜನರು ಸಂಕಷ್ಟದ ಕಾಲದಲ್ಲಿ ಮಾನಸಿಕ ಆರೋಗ್ಯದ ಬಗ್ಗೆ ಹೆಚ್ಚು ಗಮನಹರಿಸಬೇಕು. ಯಾವುದೇ ಕಾರಣಕ್ಕೂ ಎದೆಗುಂದದೆ ಮಾನಸಿಕ ಆರೋಗ್ಯ ಕಾಯ್ದುಕೊಳ್ಳಬೇಕು ಎಂದು ಸಚಿವ ಡಾ.ಕೆ. ಸುಧಾಕರ್ ಸಲಹೆ ನೀಡಿದ್ದಾರೆ.

ದೇಶದ ಶೇ.7.5ರಷ್ಟು ಜನರಲ್ಲಿ ಮಾನಸಿಕ ಆರೋಗ್ಯ ಸಮಸ್ಯೆ
"ಆತ್ಮಹತ್ಯೆ ಮಾಡಿಕೊಳ್ಳುವುದು, ಹುಚ್ಚು ಹಿಡಿಯುವುದು, ಖಿನ್ನತೆಗೆ ಒಳಗಾಗುವುದು ಹೀಗೆ ಮೊದಲಾದ ಪರಿಣಾಮಗಳು ಮಾನಸಿಕ ಒತ್ತಡದಿಂದ ಕಂಡುಬರುತ್ತವೆ. ವಿಶ್ವ ಆರೋಗ್ಯ ಸಂಸ್ಥೆಯ ಅಧ್ಯಯನದ ಪ್ರಕಾರ, ಭಾರತದಲ್ಲಿ ಶೇ.7.5ರಷ್ಟು ಜನರು ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಜಗತ್ತಿನ ಒಟ್ಟು ಮಾನಸಿಕ ಅನಾರೋಗ್ಯ ಪ್ರಕರಣಗಳಲ್ಲಿ ಶೇ.15ರಷ್ಟು ಭಾರತದಲ್ಲಿವೆ. 2020ರ ವೇಳೆಗೆ ಭಾರತದ ಒಟ್ಟು ಜನಸಂಖ್ಯೆಯ ಶೇ.20 ರಷ್ಟು ಜನರು ಮಾನಸಿಕ ಅನಾರೋಗ್ಯದಿಂದ ಬಳಲಬಹುದು ಎಂದು ಅಂದಾಜಿಸಲಾಗಿತ್ತು. ಇಂತಹ ಆತಂಕಕಾರಿ ಬೆಳವಣಿಗೆ ಹಿನ್ನೆಲೆ ಜನರು ಮಾನಸಿಕ ಆರೋಗ್ಯಕ್ಕೆ ಹೆಚ್ಚು ಆದ್ಯತೆ ನೀಡಬೇಕು. ಆಪ್ತ ಸಮಾಲೋಚನೆ ಸೇವೆ ಪಡೆಯಲು ಆರೋಗ್ಯ ಸಹಾಯವಾಣಿ 104ಕ್ಕೆ ಕರೆ ಮಾಡಿ" ಎಂದು ಸಚಿವರು ಸಲಹೆ ನೀಡಿದ್ದಾರೆ.

ಮಾನಸಿಕ ಆರೋಗ್ಯ ಕಾಪಾಡಲು ಪ್ರತ್ಯೇಕ ವಿಭಾಗ
"ರಾಜ್ಯದಲ್ಲಿ ಮಾನಸಿಕ ಆರೋಗ್ಯ ಕಾಪಾಡಲೆಂದೇ ಮಾನಸಿಕ ಆರೋಗ್ಯ ವಿಭಾಗವಿದೆ. ಈ ವಿಭಾಗದಿಂದ ಈವರೆಗೆ 7,13,867 ಜನರಿಗೆ ಆಪ್ತ ಸಮಾಲೋಚನೆ ಸೇವೆ ಪಡೆದುಕೊಂಡಿದ್ದಾರೆ. ರಾಜ್ಯದ ಕೊರೊನಾ ವಾರಿಯರ್ಸ್ ಆಗಿರುವ ವೈದ್ಯರು, ನರ್ಸ್, ರೋಗಿಗಳಿಗೆ ಚಿಕಿತ್ಸೆ ನೀಡುವ ಜೊತೆಗೆ ಮಾನಸಿಕ ಸ್ಥೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ. ಸಾರ್ವಜನಿಕರು ಈ ಆಪ್ತ ಸಮಾಲೋಚನೆ ಸೇವೆ ಬಳಸಿಕೊಳ್ಳಬಹುದು. " ಎಂದು ಸಚಿವರು ತಿಳಿಸಿದ್ದಾರೆ.

ಉದ್ಯೋಗ ಕಳೆದುಕೊಂಡವರಲ್ಲಿ ಮಾನಸಿಕ ತೊಳಲಾಟ
"ದೇಶಾದ್ಯಂತ ಕೊರೊನಾವೈರಸ್ ಸೋಂಕು ಹರಡುವಿಕೆ ಭೀತಿ ಹಿನ್ನೆಲೆ ಸಾಕಷ್ಟು ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಸಾವಿರಾರು ಉದ್ಯೋಗಿಗಳ ವೇತನದಲ್ಲಿ ಕಡಿತಗೊಳಿಸಲಾಗಿದ್ದು, ಇನ್ನೂ ಅನೇಕ ಉದ್ಯೋಗಿಗಳು ಮನೆಯಲ್ಲೇ ಕೆಲಸ ಮಾಡುತ್ತಿದ್ದರೂ ತೀವ್ರ ಒತ್ತಡಕ್ಕೆ ಒಳಗಾಗಿದ್ದಾರೆ. ಇಂಥ ಸಂದರ್ಭಗಳಲ್ಲಿ ಮನೆಯ ಇತರೆ ಸದಸ್ಯರು ಮಾನಸಿಕ ತೊಳಲಾಟದಲ್ಲಿರುವವರಿಗೆ ಆಹ್ಲಾದಕರ ವಾತಾವರಣವನ್ನು ಸೃಷ್ಟಿಸುವ ಕೆಲಸವನ್ನು ಮಾಡಬೇಕಿದೆ" ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಸಲಹೆ ನೀಡಿದ್ದಾರೆ.
Recommended Video

ವೈದ್ಯಕೀಯ ಶಿಕ್ಷಣ ಸಚಿವರ ಮಾತಿನ ಪ್ರಮುಖ ಅಂಶಗಳು
- ಕೊರೊನಾವೈರಸ್ ಬಗ್ಗೆ ವಿನಾಕಾರಣದ ಭಯ ಬಿಟ್ಟುಬಿಡಿ. ಈ ರೋಗದಿಂದ ಅನೇಕರು ಸತ್ತಿದ್ದಾರೆ ಎಂದು ಆಲೋಚಿಸುವ ಬದಲು ರಾಜ್ಯದಲ್ಲಿ ಐದೂವರೆ ಲಕ್ಷ ಜನ ಗುಣಮುಖರಾಗಿದ್ದಾರೆ ಎಂಬ ಪಾಸಿಟಿವ್ ಆಗಿ ಯೋಚಿಸಿ.
- ಪ್ರತಿದಿನ ಯೋಗಾಭ್ಯಾಸ ಮತ್ತು ಧ್ಯಾನ ಮಾಡಿ, ಮನೆಯಲ್ಲೇ ದೈಹಿಕ ವ್ಯಾಯಮಗಳನ್ನು ಮಾಡಿರಿ. ಕುಟುಂಬದಲ್ಲಿ ಮಾನಸಿಕವಾಗಿ ದುರ್ಬಲವಾಗಿರುವವರು ಇದ್ದರೆ, ಅವರನ್ನು ಕೂರಿಸಿಕೊಂಡು ಧೈರ್ಯದ ಮಾತುಗಳನ್ನಾಡಿ.
- ಕುಟುಂಬದಲ್ಲಿ ಯಾರಿಗಾದರೂ ಕೊರೊನಾವೈರಸ್ ಸೋಂಕು ತಗಲಿದರೆ, ಅಥವಾ ನಿಮ್ಮ ಸ್ನೇಹಿತರಿಗೆ ಸೋಂಕು ತಗಲಿದರೆ, ಅವರಿಗೆ ಧೈರ್ಯ ಹೇಳಿ. ಆದರೆ ಇದು ಭಯಾನಕ ಕಾಯಿಲೆ ಎಂದೆಲ್ಲ ಹೇಳಿ ಭಯಪಡಿಸಬೇಡಿ. ಭಯ ಬೇಡ, ಎಚ್ಚರವಿರಲಿ.
- ಕೊರೊನಾ ಹರಡುವ ಆರಂಭದಲ್ಲೇ ಸಾರ್ವಜನಿಕರು ನಿಯಮಗಳನ್ನು ಪಾಲಿಸಿದ್ದಾರೆ. ಆದರೆ ನಂತರದ ದಿನಗಳಲ್ಲಿ ನಿಯಮಗಳನ್ನು ಪಾಲಿಸುತ್ತಿಲ್ಲ ಎಂಬುದು ಬೇಸರದ ಸಂಗತಿ.
- ಕೊರೊನಾಗೆ ಔಷಧ, ಲಸಿಕೆ ಸಿಗುವುದು ತಡವಾಗಲಿದೆ. ಇಂತಹ ಸಂದರ್ಭದಲ್ಲಿ ಕೊವಿಡ್ ಸುರಕ್ಷತಾ ನಿಯಮಗಳಾದ ಮಾಸ್ಕ್ ಧರಿಸುವುದು, ಕೈಗಳನ್ನು ಶುಚಿಯಾಗಿಟ್ಟುಕೊಳ್ಳುವುದು, ಅಂತರ ಕಾಯ್ದುಕೊಳ್ಳುವುದು ಮೊದಲಾದ ಕ್ರಮಗಳನ್ನು ತಪ್ಪದೇ ಪಾಲಿಸಬೇಕು.
- ಕೊರೊನಾವೈರಸ್ ವಿರುದ್ಧ ಯುದ್ಧದ ಮಧ್ಯಭಾಗದಲ್ಲಿ ನಾವಿದ್ದು, ಯುದ್ಧ ಗೆಲ್ಲಲು ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯ ಕೂಡ ಕಾಪಾಡಿಕೊಳ್ಳಬೇಕು.












Click it and Unblock the Notifications