ಸಿಎಎ ಸಂವಿಧಾನ ವಿರೋಧಿ: ನೊಬೆಲ್ ಪುರಸ್ಕೃತ ಅಮಾರ್ಥ್ಯ ಸೇನ್
ಬೆಂಗಳೂರು, ಜನವರಿ 8: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಸಾಂವಿಧಾನಿಕ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ನೊಬೆಲ್ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮಾರ್ಥ್ಯ ಸೇನ್ ಹೇಳಿದರು.
ನಗರದಲ್ಲಿ ಬುಧವಾರ ಇನ್ಫೋಸಿಸ್ ಸೈನ್ಸ್ ಫೌಂಡೇಷನ್ನ ಇನ್ಫೋಸಿಸ್ ಪ್ರಶಸ್ತಿ 2019ರ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
'ಸಿಎಎ ಕಾನೂನನ್ನು ಸುಪ್ರೀಂಕೋರ್ಟ್ ಅದರ ಅಸಾಂವಿಧಾನಿಕತೆಯ ನೆಲೆಯಲ್ಲಿ ರದ್ದುಗೊಳಿಸಬೇಕು ಎನ್ನುವುದು ನನ್ನ ಅಭಿಪ್ರಾಯ. ಏಕೆಂದರೆ ಪೌರತ್ವವನ್ನು ಧಾರ್ಮಿಕ ಭಿನ್ನಾಭಿಪ್ರಾಯಗಳೊಂದಿಗೆ ಬೆಸೆಯುವಂತಹ ಮೂಲಭೂತ ಮಾನವಹಕ್ಕುಗಳನ್ನು ನೀವು ಹೊಂದುವುದಿಲ್ಲ' ಎಂದು ಹೇಳಿದರು.

'ನಾನು ಪೌರತ್ವ ತಿದ್ದುಪಡಿ ಕಾಯ್ದೆಯಲ್ಲಿ ಓದಿರುವಂತೆ ಅದು ಸಂವಿಧಾನದ ಆಶಯಗಳನ್ನು ಉಲ್ಲಂಘಿಸುತ್ತದೆ. ತಾರತಮ್ಯದ ಉದ್ದೇಶದಿಂದ ಧರ್ಮವನ್ನು ಬಳಸಿಕೊಳ್ಳುವ ನಡೆ ಒಪ್ಪುವಂತಹದ್ದಲ್ಲ' ಎಂದರು.
ಭಾರತದ ಆಚೆಗೆ ಧಾರ್ಮಿಕ ಕಿರುಕುಳ ಅನುಭವಿಸಿದ ಹಿಂದೂಗಳಿಗೆ ಅನುಕಂಪ ನೀಡುವುದು ಅಗತ್ಯ ಎಂಬುದನ್ನು ಅವರು ಒಪ್ಪಿಕೊಂಡರು. 'ಪೌರತ್ವ ತಿದ್ದುಪಡಿ ಕಾಯ್ದೆಯು ಧರ್ಮಗಳಿಂದ ಸ್ವತಂತ್ರವಾಗಿರಬೇಕು. ಆದರೆ ಸಂಕಷ್ಟದಲ್ಲಿರುವವರು ಮತ್ತು ಇತರೆ ಸಂಗತಿಗಳನ್ನು ಪರಿಗಣಿಸಬೇಕು' ಎಂದು ಅಭಿಪ್ರಾಯಪಟ್ಟರು.
ಜೆಎನ್ಯು ಹಿಂಸಾಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಹೊರಗಿನವರು ವಿಶ್ವವಿದ್ಯಾಲಯದ ಆವರಣದ ಒಳಗೆ ಬರುವುದನ್ನು ಜೆಎನ್ಯು ಆಡಳಿತ ತಡೆಯಲಾಗದಿದ್ದದ್ದು ಹಲ್ಲೆಗೆ ಕಾರಣವಾಗಿದೆ ಎಂದರು.












Click it and Unblock the Notifications