ಬೈರತಿ ಬಸವರಾಜು ಇಂದ ಭರ್ಜರಿ ಬಾಡೂಟ, ಮುಗಿಬಿದ್ದ ಮತದಾರರು
ಬೆಂಗಳೂರು, ಅಕ್ಟೋಬರ್ 09: ಅನರ್ಹ ಶಾಸಕ ಬೈರತಿ ಬಸವರಾಜು ಅವರು ಮತದಾರರನ್ನು ಸೆಳೆಯಲು ಕೆ.ಆರ್.ಪುರಂ ನಲ್ಲಿ ಭಾರಿ ಭರ್ಜರಿ ಬಾಡೂಟ ಆಯೋಜಿಸಿದ್ದರು. ಹಬ್ಬದ ಹೆಸರಲ್ಲಿ ಈ ಬಾಡೂಟ ಕೂಟ ನಡೆಯಿತು.
ಭಾರಿ ಸಂಖ್ಯೆಯಲ್ಲಿ ಜನರು ಈ ಬಾಡೂಟಕ್ಕೆ ಹಾಜರಾಗಿ ಹೊಟ್ಟೆ ತಣಿಯೆ ಬಾಡೂಟ ಸವಿದರು. ಬಗೆ-ಬಗೆಯ ಮಾಂಸದ ಖಾದ್ಯಗಳು ಜನರ ಹೊಟ್ಟೆ ಸೇರಿದವು.
ಕೆ.ಆರ್.ಪುರಂನ ಕಣ್ಣೂರು ಸಮೀಪದ ಬೈರತಿ ಬಸವರಾಜು ಅವರಿಗೆ ಸೇರಿದ ಜಮೀನಿನಲ್ಲಿ ಎಕರೆಗಟ್ಟಲೆ ಪೆಂಡಾಲ್ ಹಾಕಿಸಿ ಸಾವಿರಾರು ಜನಕ್ಕೆ ಏಕಕಾಲದಲ್ಲಿ ಬಾಡೂಟದ ವ್ಯವಸ್ಥೆ ಮಾಡಲಾಗಿತ್ತು.

ಸಾವಿರಾರು ಮಂದಿ ಅಡುಗೆಯವರು ಎರಡು ದಿನ ಸೇರಿ ಭಾರಿ ಬೋಜನವನ್ನು ತಯಾರಿಸಿದ್ದರು, ಟನ್ಗಟ್ಟಲೆ ಕುರಿ, ಕೋಳಿ ಮಾಂಸದ ಜೊತೆಗೆ ಮೀನು ಸಹ ಮೆನ್ಯುವಿನಲ್ಲಿತ್ತು. ಬಿರಿಯಾನಿ, ತಲೆ-ಕಾಲು ಸೂಪು, ಮೀನು ಫ್ರೈ, ಮುದ್ದೆ ಮಟನ್ ಸಾರು, ಕಬಾಬ್ ಇನ್ನೂ ಹಲವು ಬಗೆಯ ಖಾದ್ಯಗಳನ್ನು ಜನರಿಗೆ ಉಣಬಡಿಸಲಾಯಿತು.
ಭಾರಿ ಸಂಖ್ಯೆಯಲ್ಲಿ ಜನರು ಬಾಡೂಟಕ್ಕೆ ಹಾಜರಾಗಿದ್ದರು. ಸುಮಾರು ಎರಡು ಲಕ್ಷ ಮೊಟ್ಟೆಯನ್ನು ಅಡುಗೆಗೆ ತರಿಸಲಾಗಿತ್ತು.
ಬೈರತಿ ಬಸವರಾಜು ಅವರು ಕಾಂಗ್ರೆಸ್ ಟಿಕೆಟ್ನಿಂದ ಕೆ.ಆರ್.ಪುರಂ ಕ್ಷೇತ್ರದಲ್ಲಿ ಚುನಾವಣೆ ಗೆದ್ದಿದ್ದರು, ಆದರೆ ನಂತರ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಸರ್ಕಾರ ಉರುಳಲು ಸಹಾಯ ಮಾಡಿದ್ದರು. ಪ್ರಸ್ತುತ ಅನರ್ಹತೆ ಶಿಕ್ಷೆ ಎದುರಿಸುತ್ತಿರುವ ಅವರು ಅನರ್ಹತೆ ಪ್ರಶ್ನಿಸಿ ಸುಪ್ರೀಂಕೋರ್ಟ್ನಲ್ಲಿ ಅರ್ಜಿ ಹೂಡಿದ್ದಾರೆ.
ಉಪಚುನಾವಣೆ ಪ್ರಕಟವಾಗಿದ್ದು, ಬೈರತಿ ಬಸವರಾಜು ಅವರಿಗೆ ಟಿಕೆಟ್ ಸಿಗುವ ಎಲ್ಲ ಸಾಧ್ಯತೆಗಳೂ ಇವೆ, ಹಾಗಾಗಿ ಈಗಿನಿಂದಲೇ ಕ್ಷೇತ್ರದ ಮತದಾರರನ್ನು ಸೆಳೆಯಲು ಬಾಡೂಟ ಕೂಟ ಆಯೋಜಿಸಿದ್ದಾರೆ ಬೈರತಿ ಬಸವರಾಜು.












Click it and Unblock the Notifications