ಬ್ಯಾಟರಾಯನಪುರ ಸಂಚಾರಿ ಪೊಲೀಸ್ ಸಮಯಪ್ರಜ್ಞೆಯಿಂದ ಉಳಿಯಿತು ಕಂದಮ್ಮನ ಜೀವ
ಬೆಂಗಳೂರು, ಮಾರ್ಚ್ 07: ಸಂಪ್ಗೆ ಬಿದ್ದು ಪ್ರಾಣಾಪಾಯಕ್ಕೆ ಸಿಲುಕಿದ್ದ ಮಗುವನ್ನು ಬೆಂಗಳೂರು ಸಂಚಾರಿ ಪೊಲೀಸರೊಬ್ಬರು ಸಮಯಕ್ಕೆ ಸರಿಯಾಗಿ ಬಂದು ರಕ್ಷಿಸಿರುವ ಘಟನೆ ಬ್ಯಾಟರಾಯನಪುರದಲ್ಲಿ ನಡೆದಿದೆ. ಈ ಕಾರ್ಯ ಮಾಡಿದ ಬ್ಯಾಟರಾಯನಪುರ ಸಂಚಾರ ಠಾಣೆಯ ಪಿಎಸ್ಐ ಎ.ಆರ್.ನಾಗರಾಜ್ ಅವರ ಸಮಯ ಪ್ರಜ್ಞೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ನಿನ್ನೆ (ಮಾರ್ಚ್ 6) ಮಧ್ಯಾಹ್ನ ನಂತರ 3.30ರ ಸಮಯದಲ್ಲಿ ಬ್ಯಾಡರಹಳ್ಳಿಯ ಬಿಇಎಲ್ ಲೇಔಟ್ನಲ್ಲಿ ಮಗು ಸಂಪ್ ಒಳಗೆ ಬಿದ್ದಿದೆ, ಯಾರಾದರೂ ಕಾಪಾಡಿ ಕಾಪಾಡಿ ಎಂದು ಮಹಿಳೆಯರು ಕೂಗಾಡುತ್ತಿದ್ದರು. ಇದೇ ಹೊತ್ತಿಗೆ ನಾಗರಾಜ್ ಕರ್ತವ್ಯಕ್ಕೆ ಹಾಜರಾಗಲು ಮನೆಯಿಂದ ಪೊಲೀಸ್ ಠಾಣೆ ಕಡೆಗೆ ಹೋಗುತ್ತಿದ್ದರು.

ಮನೆಯೊಂದರ ಬಳಿ ಹಲವು ಮಹಿಳೆಯರು ಗುಂಪುಗೂಡಿರುವುದನ್ನು ಗಮನಿಸಿದ ನಾಗರಾಜ್ ಕೂಡಲೇ ತಮ್ಮ ದ್ವಿಚಕ್ರ ವಾಹನ ನಿಲ್ಲಿಸಿ, ಆ ಕಡೆಗೆ ಓಡಿದರು. ಅಲ್ಲಿ 10 ಅಡಿ ಆಳದ ಸಂಪ್ಗೆ ಮಗುವೊಂದು ಬಿದ್ದು ನೀರಿನಲ್ಲಿ ಮುಳುಗಿ ಒದ್ದಾಡುತ್ತಿರುವುದು ಕಂಡುಬಂತು. ನಾಗರಾಜ್ ತಕ್ಷಣವೇ ಸಂಪ್ಗೆ ಇಳಿದು ಮಗುವನ್ನು ರಕ್ಷಿಸಿ ಸಮೀಪ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಮಗು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಈ ವಿಚಾರವನ್ನು ಬೆಂಗಳೂರು ಸಂಚಾರ ಪೊಲೀಸ್ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. 'ಬ್ಯಾಟರಾಯನಪುರ ಸಂಚಾರ ಪೊಲೀಸ್ ಠಾಣೆಯ ಪಿ.ಎಸ್.ಐ ನಾಗರಾಜ್ ರವರು ಬ್ಯಾಡರಹಳ್ಳಿ ಸಮೀಪದ 10 ಅಡಿ ಆಳದ ನೀರಿನ ಟ್ಯಾಂಕ್ಗೆ ಬಿದ್ದ ಎರಡುವರೆ ವರ್ಷದ ಬಾಲಕನನ್ನು ತಕ್ಷಣವೇ ರಕ್ಷಿಸುವ ಮೂಲಕ ಪ್ರಶಂಸೆಗೆ ಪಾತ್ರರಾಗಿದ್ದು, ತಮ್ಮ ಕರ್ತವ್ಯ ಪ್ರಜ್ಞೆ ಮೆರೆದು ಅತ್ಯುತ್ತಮ ಪೊಲೀಸ್ ಪಡೆಗೆ ಉತ್ತಮ ಆದರ್ಶಪ್ರಾಯವಾಗಿದ್ದಾರೆ. ಧನ್ಯವಾದಗಳು, ಪಿಎಸ್ಐ ನಾಗರಾಜ್, ನಮ್ಮ ನಗರವನ್ನು ಸುರಕ್ಷಿತವಾಗಿಡುವಲ್ಲಿನ ನಿಮ್ಮ ಈ ಅಚಲ ಬದ್ಧತೆಗಾಗಿ' ಎಂದು ಬೆಂಗಳೂರು ಸಂಚಾರ ಪೊಲೀಸ್ ಅಧಿಕಾರಿಗಳು ಮೆಚ್ಚುಗೆ ಸೂಚಿಸಿದ್ದಾರೆ.












Click it and Unblock the Notifications